ವಿಪಕ್ಷ ನಾಯಕ ಆಗುವ ಸಿದ್ದರಾಮಯ್ಯ ಕನಸಿಗೆ ಸ್ವಪಕ್ಷೀಯರಿಂದ ಅಡ್ಡಗಾಲು
ಬೆಂಗಳೂರು, ಸೆಪ್ಟೆಂಬರ್ 20: ವಿಪಕ್ಷ ನಾಯಕ ಆಗುವ ಕನಸಲ್ಲಿರುವ ಸಿದ್ದರಾಮಯ್ಯ ಅವರಿಗೆ ಸ್ವಪಕ್ಷದವರಿಂದಲೇ ಅಡ್ಡಗಾಲು ಎದುರಾಗಿದೆ.
ಸಿದ್ದರಾಮಯ್ಯ ಅವರು ಕಣ್ಣಿಟ್ಟಿರುವ ವಿಪಕ್ಷ ನಾಯಕ ಕುರ್ಚಿಯ ಮೇಲೆ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಲಾಭಿ ಆರಂಭಿಸಿದ್ದಾರೆ.
ಸಿದ್ದರಾಮಯ್ಯ ರಾಜಕೀಯ ಬದುಕಿನ ಕುರಿತು ಕೋಡಿಶ್ರೀ ಹೊಸ ಭವಿಷ್ಯ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವಿನ ಆಂತರಿಕ ತಿಕ್ಕಾಟ ವಿಪಕ್ಷ ನಾಯಕ ಸ್ಥಾನದಿಂದಾಗಿ ಮತ್ತೆ ಪ್ರಾರಂಭವಾಗಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೆ ಬಣ ರಾಜಕೀಯ ಉದಯಿಸುವ ಸುಳಿವು ದೊರೆತಿದೆ.
ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗಲು ಸಾಧ್ಯವಾಗಿರಲಿಲ್ಲ, ಆದರೆ ಆ ನಂತರ ತೆರಳಿದ ಪರಮೇಶ್ವರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಶಾಸಕಾಂಗ ಸಭೆಗೆ ಗೈರಾಗಿದ್ದ ಪರಮೇಶ್ವರ್
ಸಿದ್ದರಾಮಯ್ಯ ಅವರು ಸಹ ಇದಕ್ಕೆ ಪ್ರತಿಯಾಗಿ ತರಾತುರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಹಾಗೂ ಪ್ರತಿಭಟನೆ ಮಾಡಿ ತಮ್ಮ ನಾಯಕತ್ವವನ್ನು ಮತ್ತೆ ರುಜುವಾತು ಮಾಡುವ ಪ್ರಯತ್ನ ಮಾಡಿದರು. ಆದರೆ ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದ ಪರಮೇಶ್ವರ್ ಅವರು ತಮ್ಮ ಅಸಹಕಾರವನ್ನು ಸೂಚ್ಯಗೊಳಿಸಿದರು.
ಪರಮೇಶ್ವರ್-ಸಿದ್ದರಾಮಯ್ಯ ನಡುವೆ ಕೋಲ್ಡ್ ವಾರ್?
ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ಕಳೆದ 6-7 ವರ್ಷಗಳಿಂದಲೂ ರಾಜಕೀಯ ವೈಷಮ್ಯವೊಂದು ಗುಪ್ತಗಾಮಮಿನಿಯಾಗಿ ಹರಿಯುತ್ತಲೇ ಇದೆ. ಪರಮೇಶ್ವರ್ ಅವರು ಮೂಲ ಕಾಂಗ್ರೆಸ್ಸಿಗರಾಗಿ ಧಕ್ಕಿಸಿಕೊಳ್ಳಲಾಗದುದ್ದನ್ನು, ವಲಸಿಗರಾದ ಸಿದ್ದರಾಮಯ್ಯ ಅವರು ಧಕ್ಕಿಸಿಕೊಂಡರು, ಇದು ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ಕಂದಕ ಉಂಟಾಗುವಂತೆ ಮಾಡಿತು.
ಹೈಕಮಾಂಡ್ ಅಂಗಣದಲ್ಲಿ ಸಿದ್ದರಾಮಯ್ಯಗೆ ಸಿಗುತ್ತಿದ್ದ 'ರಾಜ ಮರ್ಯಾದೆ' ಕಮ್ಮಿ ಆಯಿತೇ?
ವಸಲಿಗ-ಮೂಲ ಕಾಂಗ್ರೆಸ್ ನಡುವೆ ತಿಕ್ಕಾಟ ಸಾಮಾನ್ಯ
ವಲಸಿಗರು ಮತ್ತು ಮೂಲ ಕಾಂಗ್ರೆಸ್ಸಿಗರ ನಡುವೆಯೂ ಬಹು ದಿನಗಳಿಂದ ಸಣ್ಣ ಮಟ್ಟಿನ ಅಸಮಾಧಾನ ಹೊಗೆ ಆಡುತ್ತಲೇ ಇರುತ್ತವೆ. ಆಗಾಗ ಅದು ಹೊರಬರುವುದೂ ಉಂಟು, ಆವಾಗೆಲ್ಲಾ ಮೂಲ ಕಾಂಗ್ರೆಸ್ಸಿಗರ ನಾಯಕರಾಗಿ ಪರಮೇಶ್ವರ್ ಮಾತನಾಡುತ್ತಲೇ ಬರುತ್ತಿದ್ದಾರೆ. ಈಗಲೂ ಸಹ ಇಂತಹುದ್ದೆ ಒಂದು ಪರಿಸ್ಥಿತಿ ಪಕ್ಷದಲ್ಲಿ ನಿರ್ಮಾಣವಾಗುವ ಸೂಚನೆ ಇದೆ.
ವಿಪಕ್ಷ ನಾಯಕರಾಗಿ ಯಶಸ್ವಿಯಾಗಿರುವ ಸಿದ್ದರಾಮಯ್ಯ
ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಸೂಕ್ತವೂ ಆಗಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ನಲ್ಲಿ ಬದಲಾವಣೆಯ ಉದ್ದೇಶ ಹೈಕಮಾಂಡ್ ಜವಾಬ್ದಾರಿ ಹೊತ್ತಿರುವ ಸೋನಿಯಾ ಗಾಂಧಿ ಅವರಿಗೆ ಇದೆ ಎನ್ನಲಾಗಿದ್ದು, ಅದಕ್ಕಾಗಿ ಕೆಲವು ಅಚ್ಚರಿಯ ನಿರ್ಣಯಗಳನ್ನು ತೆಗೆದುಕೊಂಡರೂ ಆಶ್ಚರ್ಯವಿಲ್ಲ.
ಹೈಕಮಾಂಡ್ ಕೊಟ್ಟ 2 ಆಯ್ಕೆಗಳಲ್ಲಿ ಸಿದ್ದರಾಮಯ್ಯ ಒಲವು ಯಾವುದಕ್ಕೆ?
ಚಳಿಗಾಲದ ಅಧಿವೇಶನ ದಿನಾಂಕ ಪ್ರಕಟ
ಚಳಿಗಾಲದ ಅಧಿವೇಶನದ ದಿನಾಂಕವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಬಾರಿಯ ಅಧಿವೇಶನವು ಬೆಳಗಾವಿಯ ಬದಲಿಗೆ ಬೆಂಗಳೂರಿನಲ್ಲೇ ಅಕ್ಟೋಬರ್ 14 ರಿಂದ 26 ರ ವರೆಗೆ ನಡೆಯಲಿದೆ. ನೆರೆ, ಆಪರೇಷನ್ ಕಮಲ, ಮೂವರು ಡಿಸಿಎಂ ನೇಮಕ ಇನ್ನಿತರ ಹಲವು ವಿಷಯಗಳು ವಿಪಕ್ಷಗಳ ಮುಂದಿದ್ದು, ಶಕ್ತವಾದ ವಿಪಕ್ಷ ನಾಯಕ ಕಾಂಗ್ರೆಸ್ಗೆ ಮತ್ತು ರಾಜ್ಯಕ್ಕೆ ಅವಶ್ಯಕತೆ ಇದೆ.