ಎಚ್ಡಿಕೆ ಬಜೆಟ್ ಬಗ್ಗೆ ನಾಯಕರು ಹೀಗಂದರು, ಓದುಗರು ನೀವೇನಂತೀರಿ?
Recommended Video
ಬೆಂಗಳೂರು, ಜುಲೈ 05: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿದ್ದು, ರಾಜ್ಯ ರಾಜಕೀಯ ನಾಯಕರುಗಳು ಬಜೆಟ್ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿಗರು ಬಜೆಟ್ ಅನ್ನು ಸಂಪೂರ್ಣ ವಿರೋಧಿಸಿದರೆ ಜೆಡಿಎಸ್ ಪಕ್ಷದ ಸದಸ್ಯರು ಬಜೆಟ್ ಅನ್ನು ಕೊಂಡಾಡುತ್ತಿದ್ದಾರೆ. ಕಾಂಗ್ರೆಸ್ ಸದ್ಯರೂ ಸಹ ಬಜೆಟ್ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದರೂ ಸಹ ಕೆಲವರು ಅಪಸ್ವರ ತೆಗೆದಿದ್ದಾರೆ.
ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಬಜೆಟ್ Highlights
ಯಡಿಯೂರಪ್ಪ ಅವರಂತೂ ಬಜೆಟ್ ಬಗ್ಗೆ ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದು, ಬಜೆಟ್ ಅನ್ನು 'ಅಣ್ಣ-ತಮ್ಮಂದಿರ ಬಜೆಟ್ ಎಂದು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಬಜೆಪಿ ಈ ಬಗ್ಗೆ ತೀವ್ರ ಪ್ರತಿಭಟನೆ ಮಾಡುವ ಸುಳಿವನ್ನೂ ನೀಡಿದ್ದಾರೆ.
ಇದೊಂದು ಬಜೆಟ್ಟಾ: ಬಿಎಸ್ವೈ ಕಿಡಿ
ಕೇವಲ ಸುಳ್ಳು ಭರವಸೆಗಳನ್ನು ನೀಡಿರುವ ಇದನ್ನು ಬಜೆಟ್ ಎನ್ನಲು ಸಾಧ್ಯವಾ ಎಂದು ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಅವರು ಕೆಂಡಾಮಂಡಲವಾಗಿದ್ದಾರೆ. ಹಾಸನಕ್ಕೆ ಮಾತ್ರವೇ ಅನುದಾನ ನೀಡಿರುವ ಇದು ಕೇವಲ ಅಣ್ಣ-ತಮ್ಮಂದಿರ ಬಜೆಟ್ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆಯಂತೆ.
ಸಿದ್ದರಾಮಯ್ಯ ಹೇಳಿದ್ದು ಹೀಗೆ
ನಮ್ಮ ಬಜೆಟ್ ಅನ್ನು ಮುಂದುವರೆಸಿದ್ದು, ಸಮನ್ವಯ ಸಮಿತಿಯ ಶಿಪಾರಸ್ಸಿನಂತೆ ಬಜೆಟ್ನಲ್ಲಿ ಕಾರ್ಯಕ್ರಮಗಳನ್ನು ನೀಡಲಾಗಿದೆ ಇದು ಸಂತೃಪ್ತ ಬಜೆಟ್ ಆಗಿದೆ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಬಜೆಟ್: ಸಿದ್ದರಾಮಯ್ಯ VS ಎಚ್ ಡಿ ಕುಮಾರಸ್ವಾಮಿ
ಎಚ್ಡಿಕೆ ಬಜೆಟ್ ಅಲ್ಲ ರೇವಣ್ಣ ಬಜೆಟ್:ಆರ್.ಅಶೋಕ್
ಈ ಬಜೆಟ್ ಮೂಲಕ ಕೇವಲ ರಾಜ್ಯದ ಜನರಿಗೆ ಮೂಗಿಗೆ ತುಪ್ಪ ಸುರಿಯುವ ಕಾರ್ಯ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಟೀಕಿಸಿದರು. ವಿದ್ಯುತ್ ಬೆಲೆ ಪೆಟ್ರೋಲ್ ಬೆಲೆ ಹೆಚ್ಚಳದ ಮೂಲಕ ಜನಸಾಮಾನ್ಯರ ಮೇಲೆ ಬರೆಯನ್ನು ಸರ್ಕಾರ ಎಳೆದಿದೆ. ಕೇವಲ ತಮ್ಮ ಪ್ರಾಬಲ್ಯದ ಕ್ಷೇತ್ರಗಳಿಗೆ ಮತ್ರವೇ ಹೆಚ್ಚು ಅನುದಾನ ನೀಡಲಾಗಿದೆ. ಇದು ಕುಮಾರಸ್ವಾಮಿ ಬಜೆಟ್ ಅಲ್ಲ ರೇವಣ್ಣ ಬಜೆಟ್ ಎಂದು ಟೀಕಿಸಿದರು.
ಎಚ್ಡಿಕೆ 4 ಜಿಲ್ಲೆ ಸಿಎಂ: ಶೋಭಾ
ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಡೆ ಮಾತ್ರವೇ ಗಮನ ಹರಿಸಿರುವ ಕುಮಾರಸ್ವಾಮಿ ಕೇವಲ ಹಾಸನ, ರಾಮನಗರದ, ಮಂಡ್ಯ, ಕನಕಪುರ ಸಿಎಂ ಅಷ್ಟೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. ರಾಜ್ಯದ 28 ಜಿಲ್ಲೆಗಳ ಬಗ್ಗೆ ಯೊಚಿಸದೆ ಕೆಲವು ಜಿಲ್ಲೆಗಳ ಬಗ್ಗೆ ಮಾತ್ರ ಒತ್ತು ನಿಡಿರುವ ಇದು ಬಜೆಟ್ ಅಲ್ಲ ಎಂದು ಅವರು ಹರಿಹಾಯ್ದಿದ್ದಾರೆ.
ಜಗದೀಶ್ ಶೆಟ್ಟರ್ ಹೇಳಿದ್ದು ಇದು
ಕಳೆದ ಬಜೆಟ್ಗೆ ಹೋಲಿಸಿದರೆ ಈ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಕ್ಕೂ ಅನುದಾನ ಕಡಿತಗೊಳಿಸಲಾಗಿದೆ. ಅಲ್ಪ ಸಂಖ್ಯಾತ ಪ್ರಾಧಿಕಾರಕ್ಕೆ ಅನುದಾನ ನೀಡಿಲ್ಲ, ಸಮಾಜ ಕಲ್ಯಾಣ ಇಲಾಖೆ ಅನುದಾನಕ್ಕೆ ಕಡಿತ, ನೀರಾವರಿಗೆ ಮೀಸಲಿಟ್ಟಿರುವ ಅನುದಾನ ಕಡಿತಗೊಳಿಸಲಾಗಿದೆ. ಇದು ಅಲ್ಪಸಂಖ್ಯಾತ ವಿರೋಧಿ ಬಜೆಟ್ ಎಂದು ಜಗದೀಶ್ ಶೆಟ್ಟರ್ ಹೇಳಿದರು.
'ಸಂಪೂರ್ಣ ಸಾಲಮನ್ನಾ ಮಾಡದೆ ಮೋಸ ಮಾಡಿದ್ದಾರೆ'
ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿ ಈಗ ಕೇವಲ 2 ಲಕ್ಷ ಮಾತ್ರವೇ ಮನ್ನಾ ಮಾಡಿ ಮಾತಿಗೆ ತಪ್ಪಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಹೇಳಿದರು. ವಿದ್ಯುತ್, ಇಂಧನ ಬೆಲೆ ಹೆಚ್ಚಿಸುವ ಮೂಲಕ ಸಾಮಾನ್ಯರ ಜೀವನದ ಬರೆ ಎಳೆದಿದೆ ಸರ್ಕಾರ ಎಂದು ಹೇಳಿದರು. ಈ ಬಗ್ಗೆ ವಿಧಾನಸಭೆ ಮತ್ತು ಪರಿಷತ್ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಹೇಳಿದರು.
ಅಡಿಕೆ ಬೆಳೆಗಾರರಿಗೆ ಅನುದಾನವೇ ಇಲ್ಲ
ಕರಾವಳಿ ಜಿಲ್ಲೆಗಳ ಬಗ್ಗೆ ಪ್ರಸ್ತಾಪವನ್ನೇ ಬಜೆಟ್ನಲ್ಲಿ ಮಾಡಲಾಗಿಲ್ಲ ಎಂದು ಬೆಳ್ತಂಡಗಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹರಿಹಾಯ್ದಿದ್ದಾರೆ. ಎಂಡೋಸಲ್ಫೆಡ್ ಪೀಡಿತರ ಮಾತಿಲ್ಲ, ಅಡಿಕೆ ಬೆಳೆಗಾರರಿಗೆ ಅನುದಾನವೇ ನೀಡಿಲ್ಲ, ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ಸಿಎಂ ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.