ಆಪರೇಷನ್ ಕಮಲ: ಪ್ರಧಾನಿ ಮೋದಿಗೆ ಖರ್ಗೆ 'ಕ್ಲಾಸ್' ತೆಗೆದುಕೊಂಡ್ರಾ?
Recommended Video
ಬೆಂಗಳೂರು, ಜ 17: ದೇಶದ ಪ್ರಧಾನಿಯಾಗಿ ಯೋಚಿಸಿ, ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿ ನಿಮ್ಮ ಪಕ್ಷ ಮಾಡುವ ಕೆಲಸ ಸರಿಯಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕ್ಲಾಸ್ ತೆಗೆದುಕೊಂಡಿದ್ದೇನೆಂದು ಲೋಕಸಭೆಯಲ್ಲಿ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪ್ರಧಾನಮಂತ್ರಿ ನಿವಾಸದಲ್ಲಿ ಬುಧವಾರ (ಜ 16) ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿತ್ತು, ಅದರಲ್ಲಿ ನಾನೂ ಭಾಗವಹಿಸಿದ್ದೆ. ಸಭೆಯ ನಂತರ, ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನಿಗಳು ನನ್ನ ಬಳಿ ಕೇಳಿದರು, ನಾನು ಆಪರೇಷನ್ ಕಮಲದ ಬಗ್ಗೆ ಪ್ರಸ್ತಾವಿಸಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ.
70 ವರ್ಷ ಕಾಂಗ್ರೆಸ್ ಆಳಿದ್ದಕ್ಕೇ ಮೋದಿ ಪ್ರಧಾನಿಯಾಗಿದ್ದು: ಖರ್ಗೆ
ನಗರದಲ್ಲಿ ಆದಿ ಜಾಂಬವ ಅಭಿವೃದ್ಧಿ ನಿಗಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಖರ್ಗೆ, ನಾವು ಕರ್ನಾಟಕದಲ್ಲಿ ಬಿಜೆಪಿ ಶಾಸಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದ್ದೇವೆ. ಅದಕ್ಕಾಗಿ ಗುರುಗ್ರಾಮದ ಹೊಟೇಲ್ ನಲ್ಲಿ ನಾವು ಎಲ್ಲರೂ ಒಟ್ಟಿಗೆ ತಂಗಿದ್ದೇವೆ ಎಂದು ನಿಮ್ಮ ಪಕ್ಷದವರು ಆಪಾದನೆ ಮಾಡುತ್ತಾರೆ.
ನಿಮ್ಮ ಪಕ್ಷದ ಎಲ್ಲಾ ಮುಖಂಡರು, ಶಾಸಕರು ಒಗ್ಗಟ್ಟಾಗಿದ್ದರೆ ಅವರಿಗೆ ಏಕೆ ಭೀತಿ ಎಂದು ಪ್ರಧಾನಿಗಳಲ್ಲಿ ಪ್ರಶ್ನಿಸಿದ್ದೇನೆ. ಯಡಿಯೂರಪ್ಪನವರು ಮಾಡುತ್ತಿರುವುದು ಸರಿಯಲ್ಲ ಎನ್ನುವ ವಿಚಾರವನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತಂದಿದ್ದೇನೆ ಎಂದು ಖರ್ಗೆ ಕಾರ್ಯಕ್ರಮದಲ್ಲಿ ಹೇಳಿದರು.
ಜೆಡಿಎಸ್ಸಿಗೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್'ಶರಣಾಗತಿ' ಆಗೋದು ಬೇಕಿತ್ತಾ? ಖರ್ಗೆ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಉಳಿಸಬೇಕಾದರೆ, ಇಂತಹ ಕೆಲಸಗಳಿಂದ ನಾವು ದೂರವಿರಬೇಕು ಎಂದು ಮೋದಿ ಸಾಹೇಬ್ರಿಗೆ ಹೇಳಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ಇದಕ್ಕೆ ಪ್ರಧಾನಿಯವರ ಪ್ರತಿಕ್ರಿಯೆ ಏನಿತ್ತು ಎನ್ನುವುದನ್ನು ಖರ್ಗೆ ವಿವರಿಸಲಿಲ್ಲ.
ಪಕ್ಷ ಒಡೆದು ಸರಕಾರ ರಚಿಸುವ ಕೆಲಸ ಬಿಜೆಪಿಗೆ ಸಿದ್ದಿಸಿದೆ, ಆದರೆ ಕರ್ನಾಟಕದಲ್ಲಿ ಫೇಲ್ ಆಗಿದೆ. ಅವರು ಮಾಡುವ ತಪ್ಪನ್ನು, ಇನ್ನೊಬ್ಬರ ಮೇಲೆ ಹಾಕುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಖರ್ಗೆ ಆರೋಪಿಸಿದ್ದಾರೆ. (ಚಿತ್ರ: ಪಿಟಿಐ)