ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿದ ಶ್ರೀರಾಮುಲು: ಕಾಂಗ್ರೆಸ್ ಆಕ್ರೋಶ
Recommended Video
ಬೆಂಗಳೂರು, ಫೆಬ್ರವರಿ 12: ಆಪರೇಷನ್ ಕಮಲದ ಪ್ರಕರಣವನ್ನು ತನಿಖೆಗೆ ಒಪ್ಪಿಸುವ ವಿಚಾರವು ಮಂಗಳವಾರವೂ ಸದನದಲ್ಲಿ ಕಾವೇರಿದ ಚರ್ಚೆಗೆ ಒಳಗಾಗಿದೆ.
ಸದನ ಆರಂಭವಾದಾಗ ಬಿಜೆಪಿಯ ಸದಸ್ಯರು ಎಸ್ಐಟಿ ತನಿಖೆ ಬೇಡ ಎಂದು ಆಗ್ರಹಿಸಿದರು. ಎಸ್ಐಟಿ ಸರ್ಕಾರದ ನಿಯಂತ್ರಣದಲ್ಲಿದೆ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರಿತೇ ಆರೋಪವಿದೆ. ಹೀಗಿರುವಾಗ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಮತ್ತಿತರರು ವಾದಿಸಿದರು.
ಎಸ್ಐಟಿ ತನಿಖೆಯೇ ಸರಿ, ನ್ಯಾಯಾಂಗ ತನಿಖೆ ಸಾಧ್ಯವಿಲ್ಲ: ರಮೇಶ್ ಕುಮಾರ್ ಸ್ಪಷ್ಟನೆ
ಬಳಿಕ ಮಾತನಾಡಿದ ಶ್ರೀರಾಮುಲು, ನಿಮ್ಮ ಅನುಭವ ದೊಡ್ಡದು. ನಿಮ್ಮ ಬಗ್ಗೆ ಅಪಾರ ಗೌರವವಿದೆ. ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಸ್ಪೀಕರ್ ಹೆಸರು ಬಂದಿದೆ ಎಂದು ನೋವಾಗಿದೆ ಎಂದು ರಮೇಶ್ ಕುಮಾರ್ ಅವರ ಪರ ಸಹಾನುಭೂತಿ ವ್ಯಕ್ತಪಡಿಸಿದರು.
ಎಸ್ಐಟಿ ಮುಖ್ಯಮಂತ್ರಿ ಅವರ ಅಧೀನದಲ್ಲಿಯೇ ಬರುವುದರಿಂದ ಇಲ್ಲಿ ನ್ಯಾಯಸಮ್ಮತ ತನಿಖೆ ನಿರೀಕ್ಷಿಸುವುದು ಕಷ್ಟ. ನ್ಯಾಯಾಂಗ ತನಿಖೆ ನಡೆಸಿದರೆ ಬೇಡ ಎನ್ನುವುದಿಲ್ಲ. ಸದನ ಸಮಿತಿ ತನಿಖೆಗೂ ಬೇಡ ಎನ್ನುವುದಿಲ್ಲ. ಬೋಪಯ್ಯ ಅವರು ಸ್ಪೀಕರ್ ಆಗಿದ್ದಾಗ ಅವರ ಮೇಲೆಯೂ ಸಾಕಷ್ಟು ದೂರುಗಳು ಬಂದಿದ್ದವು. ಶಾಸಕರ ಅನರ್ಹತೆ ಪ್ರಕರಣ ಅವರ ಮೇಲೆ ಆರೋಪವಿತ್ತು. ಅವರ ಅವಧಿಯಿಂದಲೂ ಈಗಿನವರೆಗೂ ಎಲ್ಲ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಬೇಕು ಎಂದು ಶ್ರೀರಾಮುಲು ಹೇಳಿದರು.
ಈ ತನಿಖೆಯಲ್ಲಿ ಮುಖ್ಯಮಂತ್ರಿಗಳನ್ನೂ ಸಿದ್ದರಾಮಯ್ಯ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು.
ನಾಲ್ವರು ಶಾಸಕರ ಅಮಾನತಿಗೆ ಕೋರಿ ಸಿದ್ದರಾಮಯ್ಯರಿಂದ ದೂರು
ಇದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಸಿದ್ದರಾಮಯ್ಯ ಅವರನ್ನು ಏಕೆ ತನಿಖೆಗೆ ಒಳಪಡಿಸಬೇಕು? ಅವರು ಏನು ಮಾಡಿದ್ದಾರೆ? ಅವರ ಮೇಲೆ ಯಾವ ಆರೋಪ ಇದೆ ಎಂದು ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಕಡತದಿಂದ ತೆಗೆಯಲು ಒತ್ತಾಯ
ಜಮೀರ್ ಅಹ್ಮದ್, ವೆಂಕಟರಮಣಪ್ಪ, ಶಿವಣ್ಣ, ಭೀಮಾ ನಾಯ್ಕ್, ನಾಡಗೌಡ, ಸುರೇಶ್ ಮುಂತಾದವರು ಶ್ರೀರಾಮುಲು ವಿರುದ್ಧ ಕಿಡಿಕಾರಿದರು. ಅವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಿಸಿ ಎಂದು ಒತ್ತಾಯಿಸಿದರು.
ಈ ವೇಳೆ ಗದ್ದಲ ಜೋರಾದಾಗ ಸದನವನ್ನು ನಿಯಂತ್ರಣ ತಂದ ಸ್ಪೀಕರ್ ರಮೇಶ್ ಕುಮಾರ್, ಆಡಳಿತ ಪಕ್ಷದವರು ಅರ್ಥ ಮಾಡಿಕೊಳ್ಳಿ, ಶ್ರೀರಾಮುಲು ಅಸಂಸದೀಯ ಪದ ಹೇಳಿದರೆ ಕಡತದಿಂದ ತೆಗೆಸುತ್ತಿದ್ದೆ. ಅವರ ಅಭಿಪ್ರಾಯ ಹೇಳಿದ್ದಾರೆ. ತಾವೆಲ್ಲ ಸಿದ್ದರಾಮಯ್ಯ ಅವರ ಅಭಿಮಾನಿಗಳು. ನಿಮಗೂ ಕಾಲಾವಕಾಶ ನೀಡಲಾಗುವುದು. ಅವರ ಪರ ವಾದವನ್ನು ಸಮರ್ಥವಾಗಿ ಮಂಡಿಸಿ. ನಾವು ಸಾರ್ವಜನಿಕವಾಗಿ ಅಪಕೀರ್ತಿಗೆ ಪಾತ್ರರಾಗುವುದು ಬೇಡ ಎಂದು ಕಿವಿಮಾತು ಹೇಳಿದರು.
ನಾನು ಹೇಗೆ ದುರ್ಬಳಕೆ ಮಾಡಲು ಸಾಧ್ಯ?
ನಿನ್ನೆಯಿಂದಲೂ ಗಮನಿಸುತ್ತಿದ್ದೇನೆ. ಎಸ್ಐಟಿ ಬಗ್ಗೆ, ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎಂದಿದ್ದಾರೆ. ನನ್ನ ಸಣ್ಣ ಚಕಾರ ಎತ್ತಿಲ್ಲ. ಅವರ ಜತೆಗೂ ಸರ್ಕಾರ ಮಾಡಿದ್ದೇನೆ. ಎರಡೇ ತಿಂಗಳಿಗೆ 150 ಕೋಟಿ ಎತ್ತಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡಿದವರ ವಿರುದ್ಧವೇ ನಾನು ತನಿಖೆ ಮಾಡಲಿಲ್ಲ. ಶಾಸಕರ ಕೊಲೆ ಪ್ರಯತ್ನದ ಆರೋಪ ಬಂದಾಗಲೂ ನಾನು ತನಿಖೆ ಮಾಡಲಿಲ್ಲ. ಈಗ ನಾನು ಪೊಲೀಸರನ್ನು ದುರ್ಬಳಕೆ ಮಾಡಲು ಸಾಧ್ಯವೇ? ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.
ಹಣ ಪಡೆದ ಆರೋಪ: ಗದ್ಗದಿತರಾದ ರಮೇಶ್ ಕುಮಾರ್ ರಾಜೀನಾಮೆ ಮಾತು
25 ಬಾರಿ ಕರೆ ಮಾಡಿದ್ದಾರೆ
ನನ್ನ ಪಕ್ಷದ ಶಾಸಕರ ಮಗನಿಗೆ ರಾತ್ರಿ 12 ಗಂಟೆಗೆ 25 ಬಾರಿ ಕರೆ ಮಾಡಿದ್ದಾರೆ. ನಾನು ಹೇಳಿದ್ದೇ ಇವರಿಗೆ ಮಾಡಿ ಎಂದು. ಆತ ನನ್ನನ್ನು ಕೇಳಿದ. ಹೋಗಿ ಬಾ ಎಂದೆ. ಅವರೇ ಕರೆದಿದ್ದಕ್ಕೆ ಹೋಗಿದ್ದು. ಇಲ್ಲಿರುವುದು ಸದನದ ತನಿಖೆ, ನ್ಯಾಯಾಂಗ ತನಿಖೆ ನಡೆಸುವುದೆಂಬ ಪ್ರಶ್ನೆ ಅಲ್ಲ. ಶಾಸಕರ ಖರೀದಿ ಪ್ರಯತ್ನದ ವಿಚಾರ. ಈ ಹಿಂದೆ ಎಸ್ ಆರ್ ಬೊಮ್ಮಾಯಿ ಅಧಿಕಾರ ಕಳೆದುಕೊಂಡರು. ರಾಜ್ಯಪಾಲರ ನಿರ್ಧಾರದ ವಿರುದ್ಧ ಕೋರ್ಟಿಗೆ ಹೋಗಿದ್ದರು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಇತಿಹಾಸ ಪ್ರಾರಂಭವಾಯಿತು. ಶಾಸಕರ ಬೆಂಬಲ ಯಾರಿಗೆ ಇದೆ ಎಂಬುದನ್ನು ಸಾಬೀತುಪಡಿಸಲು ರಾಜ್ಯಪಾಲರ ಕಚೇರಿಯಲ್ಲ, ಸದನ ಎನ್ನುವುದು ತೀರ್ಮಾನವಾಯಿತು. ಆ ನಿಯಮ ಬರಲು ಕಾರಣ ಕರ್ನಾಟಕ ರಾಜ್ಯದ ರಾಜಕಾರಣ.
ಶಾಸಕರ ಖರೀದಿ ಶುರುವಾಗಿದ್ದು ಯಾವಾಗ?
ಗಡುವು ಕೊಟ್ಟುಕೊಳ್ಳುತ್ತಾ ಹೋದರಲ್ಲ, ದೀಪಾವಳಿ, ಸಂಕ್ರಾಂತಿ, ಯುಗಾದಿ- ಇದು ನಾನು ಹೇಳಿದ್ದೇ? ಶಾಸಕರ ಖರೀದಿ ವಸ್ತುಗಳೆಂದು ಆರಂಭವಾಗಿದ್ದು ಯಾವಾಗ? ನನ್ನ ಕಾಲದಲ್ಲಿ ಅಲ್ಲ. ನನ್ನ ಕಡೆ ಕೈತೋರಿಸುತ್ತೀರಿ? ನನ್ನ ಶಾಸಕ ಮಿತ್ರರೇ, ನೀವು ವಿಶ್ವಾಸ ಇಟ್ಟು ನನಗೊಂದು ಅವಕಾಶ ಕೊಟ್ಟಿದ್ದೀರಿ. ನಿಮ್ಮ ಪರವಾಗಿ ಮಾತನಾಡುವುದು, ನಿಮ್ಮ ಗೌರವ ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ಜೆಡಿಎಸ್ ಶಾಸಕರಿಗೆ ಹೇಳಿದರು.
ನಿಮ್ಮಂತೆ ಪಲಾಯನ ಮಾಡುವುದಿಲ್ಲ
ನನ್ನದು ಯಾವ ಪ್ರಕರಣ? ಅಲ್ಲಿಂದಲೇ ತನಿಖೆ ಪ್ರಾರಂಭವಾಗಲಿ. ಇವತ್ತೂ ತಯಾರಾಗಿದ್ದೇನೆ ಚರ್ಚೆಗೆ. ನಿಮ್ಮಂತೆ ಪಲಾಯನವಾದ ಮಾಡುವುದಿಲ್ಲ. ಎಂಎಲ್ಸಿ ಸ್ಥಾನಕ್ಕೆ ಹಣ ಕೇಳಿದ್ದೇನೆಂದು ನನ್ನ ಪಕ್ಷದ ವ್ಯಕ್ತಿ ಕ್ಯಾಸೆಟ್ ಮಾಡಿದ್ದಾನೆ ಎಂದಿದ್ದಾರೆ. ಕ್ಯಾಸೆಟ್ ಕೊಟ್ಟಿದ್ದಾರಲ್ಲ, ಅದರ ಚರ್ಚೆಗೆ ತಯಾರಾಗಿದ್ದೇನೆ, ನಾನೇನು ಹೆದರಿಕೊಂಡು ಹೋಗುವುದಿಲ್ಲ. ನನ್ನ ಮನೆಯಲ್ಲಿ, ನನ್ನ ಪಕ್ಷದ ಕಾರ್ಯಕರ್ತನ ಜೊತೆ ನಡೆದ ಘಟನೆ ಅದು. ಪ್ರಾದೇಶಿಕ ಪಕ್ಷ ನನ್ನದು. ಪ್ರತಿವರ್ಷ ಪಕ್ಷದ ಚಟುವಟಿಕೆಯ ಆದಾಯ ತೆರಿಗೆ ಕಟ್ತೀವಿ. ಎಲ್ಲರೂ ಅದೇನು ಮಾಡುತ್ತಾರೋ ಅದನ್ನೂ ನಾವೇ ಮಾಡುತ್ತೇವೆ ಎಂದು ಸವಾಲು ಹಾಕಿದರು.
ಪ್ರತ್ಯೇಕವಾಗಿ ಚರ್ಚೆಗೆ ತನ್ನಿ
ಕೇಂದ್ರ ಸರ್ಕಾರ ಇವರದ್ದೇ ಅಲ್ಲವೇ. 2014ರ ಘಟನೆ ಅದು. ಈ ಘಟನೆಗೆ ಯಾಕೆ ಹೋಲಿಕೆ ಮಾಡುತ್ತೀರಿ. ಪ್ರತ್ಯೇಕವಾಗಿ ಚರ್ಚೆಗೆ ತನ್ನಿ. ಅದು ನಡೆದು ನಾಲ್ಕೈದು ವರ್ಷಗಳಾಗಿವೆ,. ಅವತ್ತೇ ಪ್ರಶ್ನಿಸಬೇಕಿತ್ತು. ನಿಮ್ಮದೇ ಸರ್ಕಾರ ನಡೆಯುತ್ತಿತ್ತಲ್ಲ. ಅಷ್ಟು ವರ್ಷದಿಂದ ಏಕೆ ಸುಮ್ಮನಿದ್ದೀರಿ ಎಂದಾಗ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ಮುಂಬೈನಲ್ಲಿ ನನ್ನ ಪಕ್ಷದ ಶಾಸಕರೊಬ್ಬರಿದ್ದಾರೆ. ಅವರ ಪರಿಸ್ಥಿತಿ ಏನಾಗಿದೆ ಎಂದು ಪ್ರಸ್ತಾಪಿಸದೆ ಕುಳಿತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದಾಗ ಕೋಲಾಹಲ ಸೃಷ್ಟಿಯಾಯಿತು. ನೀವು ಮಾತನಾಡಿದಾಗ ನಾವು ಕೇಳಿಸಿಕೊಳ್ಳಬೇಕು. ನಾವು ಮಾತನಾಡುವಾಗ ಏಕೆ ಕೇಳಿಸಿಕೊಳ್ಳುವುದಿಲ್ಲ ಎಂದು ಆಡಳಿತಪಕ್ಷದವರು ಕಿಡಿಕಾರಿದರು. ಗದ್ದಲ ಜೋರಾದಾಗ ಸದನವನ್ನು 15 ನಿಮಿಷ ಮುಂದೂಡಲಾಯಿತು.