ಮಹಾರಾಷ್ಟ್ರ ಉದ್ಧವ್ ಠಾಕ್ರೆ ಸರ್ಕಾರದ ಬುಡಕ್ಕೆ ಬೆಂಕಿ ಇಟ್ಟ 'ಆಪರೇಷನ್ ಕಮಲ'
ಬೆಂಗಳೂರು, ಜೂ. 22: ಆಪರೇಷನ್ ಕಮಲ ಭಾಗ - 02 :
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ ಚುಕ್ಕಾಣಿ ತಂದುಕೊಟ್ಟಿದ್ದ ಆಪರೇಷನ್ ಕಮಲ ಇದೀಗ ಉತ್ತರ ಭಾರತಕ್ಕೆ ಕಾಲಿಟ್ಟಿದೆ. ಬಿಜೆಪಿಯ ದುರಂತ ನಾಯಕ ಬಿ.ಎಸ್ ಯಡಿಯೂರಪ್ಪ ಅವರಿಗೆ ಎರಡು ಬಾರಿ ಸಿಎಂ ಸ್ಥಾನ ಕೊಡಿಸಿದ್ದ ಆಪರೇಷನ್ ಕಮಲ 2020 ರಲ್ಲಿ ಮಧ್ಯ ಪ್ರದೇಶದಲ್ಲಿ ಕಮಲನಾಥ್ ಸರ್ಕಾರವನ್ನು ಬೀಳಿಸಿತ್ತು. ಇದೀಗ ಮಹಾರಾಷ್ಟ್ರಕ್ಕೆ ಆಪರೇಷನ್ ಕಮಲ ಕಾಲಿಟ್ಟಿದೆ. ಶಿವಸೇನಾ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಂಡಾಯ ಎಬ್ಬಿಸುವ ಮೂಲಕ ಉದ್ಧವ್ ಠಾಕ್ರೆ ಸರ್ಕಾರದ ಪತನಕ್ಕೆ ಡೆಡ್ ಲೈನ್ ನೀಡಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಪರಿಚಯಿಸಿದ ಆಪರೇಷನ್ ಕಮಲ ಉತ್ತರ ಭಾರತದ ರಾಜಕಾರಣಕ್ಕೂ ಕಾಲಿಟ್ಟಿದೆ. ಈ ಕುರಿತ ಭಾಗ - 2 ರ ಸಮಗ್ರ ಚಿತ್ರಣ ಇಲ್ಲಿದೆ.
ಯಡಿಯೂರಪ್ಪ ಆರಂಭಿಸಿದ 'ಆಪರೇಷನ್ ಕಮಲ': ಬಿಜೆಪಿಗೆ ದೇಶದೆಲ್ಲೆಡೆ 'ಗದ್ದುಗೆ ಬಲ'
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಉರುಳಿಸಿದ ಆಪರೇಷನ್ ಕಮಲ 2.0
ಯಡಿಯೂರಪ್ಪ ತನ್ನ ಬೆಂಬಲಿಗರೊಂದಿಗೆ ಬಿಜೆಪಿಗೆ ಮರು ಎಂಟ್ರಿ ಕೊಟ್ಟಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ವರ್ಚಸ್ಸಿನ ಪರಿಣಾಮ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸರ್ಕಾರ ರಚನೆ ಮಾಡುವ ಆಜುಬಾಜು ಸೀಟು ಗೆದ್ದಿತ್ತು. ಅಷ್ಟೊತ್ತಿಗಾಗಲೇ ಜಾವು ಜಾತ್ಯತೀತರು ಎಂಬ ಬಾಂಧವ್ಯ ಮುಂದಿಟ್ಟು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಸ್ಥಾಪನೆಯಾಗಿತ್ತು. ಆದರೆ ಇದು ಜಾಸ್ತಿ ದಿನ ಉಳಿಯಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದರೂ ಅಂತರಿಕ ಕಚ್ಚಾಟದಿಂದ 2018 ಮೇ ನಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ 2019 ಜುಲೈನಲ್ಲಿ ಪತನವಾಗಿತ್ತು. ಈ ಪತನಕ್ಕೆ ಮೂಲ ಕಾರಣವಾಗಿದ್ದು ಬಿಎಸ್ ವೈ ಅವರ ಆಪರೇಷನ್ ಕಮಲ 2.0
ಕಾಂಗ್ರೆಸ್ ಜೆಡಿಎಸ್ 'ಬಾಂಬೆ ಬಾಯ್ಸ' ಆಪರೇಷನ್ :
ಕುಮಾರಸ್ವಾಮಿ ಆಡಳಿತಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆಯುವ ಪರ್ವ ಶುರುವಾಗಿತ್ತು. ಅದಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲ ಮೂಲಕ ಖೆಡ್ಡಾಗೆ ಬೀಳಿಸಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರು ಬಾಂಬೆ ಹೋಟೆಲ್ ಸೇರಿದ್ದರು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿತ್ತು. ಸರ್ಕಾರ ರಚನೆಗೆ ಅಗತ್ಯಕ್ಕಿಂತಲೂ ಹೆಚ್ಚು ಶಾಸಕರನ್ನು ಬಿಜೆಪಿ ಖರೀದಿ ಮಾಡಿ ಆಗಿತ್ತು. ಬಾಂಬೆ ಹೋಟೆಲ್ ಸೇರಿದ್ದ ಬಾಂಬೆ ಬಾಯ್ಸ್ ಅವರನ್ನು ಮನವೊಲಿಸುವ ಪ್ರಯತ್ನಗಳು ವಿಫಲವಾದವು. ಯಡಿಯೂರಪ್ಪ ಸರ್ಕಾರ ರಚನೆ ಮಾಡುವ ಪ್ರಸ್ತಾಪ ರಾಜ್ಯಪಾಲರಿಗೆ ಸಲ್ಲಿಸಿದ್ದರು. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಶಾಸಕ ಅರವಿಂದ ಲಿಂಬಾವಳಿ,ಆರ್, ಅಶೋಕ್,ಅಶ್ವತ್ಥ ನಾರಾಯಣ, ಸಿಪಿ ಯೋಗೇಶ್ವರ್ ಕಾರ್ಯಗತಗೊಳಿಸಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. 2019 ಜುಲೈ ನಿಂದ 2021 ಜುಲೈ ವರೆಗೆ ಸಿಎಂ ಆಗಿ ಯಡಿಯೂರಪ್ಪ ಅಧಿಕಾರ ನಡೆಸಿದ್ದರು. ಎರಡು ಬಾರಿ ಯಡಿಯೂರಪ್ಪ ಅವರು ಪ್ರಯೋಗಿಸಿದ ಆಪರೇಷನ್ ಕಮಲದಿಂದಲೇ ಸಿಎಂ ಸ್ಥಾನ ಅಲಂಕರಿಸಿ ಆಳ್ವಿಕೆ ನಡೆಸಿದ್ದರು. ವಯೋ ಸಹಜ ಕಾರಣ ನೀಡಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲಾಗಿದೆ. ಆದ್ರೆ ಯಡಿಯೂರಪ್ಪ ಅವರು ಅಧಿಕಾರ ದಾಹ ಪರಿಚಯಿಸಿದ ಆಪರೇಷನ್ ಕಮಲ ಸೂತ್ರ ಬಿಜೆಪಿ ಪಾಲಿಗೆ ಯಶಸ್ಸಿನ ಸೂತ್ರವಾಗಿದೆ. ಇದೇ ಸೂತ್ರ ಇಟ್ಟುಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದೆ.
ಶಿವರಾಜ್ ಸಿಂಗ್ ಚವ್ಹಾಣ್ ಗೆ ಸಿಎಂ ಪಟ್ಟ ಕರುಣಿಸಿದ ಆಪರೇಷನ್
ಕರ್ನಾಟಕದಲ್ಲಿ ಯಡಿಯೂರಪ್ಪ ಪರಿಚಯಿಸಿ ಪೋಷಣೆ ಮಾಡಿದ 'ಆಪರೇಷನ್ ಕಮಲ' ಹೆಮ್ಮರವಾಗಿ ಬೆಳೆದು ದೇಶದ ರಾಜಕಾರಣದಲ್ಲಿ ಪ್ರಯೋಗ ಮಾಡಲಾಗುತ್ತಿದೆ. ಆಪರೇಷನ್ ಕಮಲದ ಮೂಲಕ ಎರಡು ಬಾರಿ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ದ ಆಪರೇಷನ್ ಕಮಲ ಸೂತ್ರ ಮಧ್ಯ ಪ್ರದೇಶದಲ್ಲಿ ಕಮಲನಾಥ್ ಸರ್ಕಾರವನ್ನು ಬೀಳಿಸಿತ್ತು. ಹದಿನೈದು ತಿಂಗಳು ಸಿಎಂ ಆಗಿದ್ದ ಕಮಲನಾಥ ಸರ್ಕಾರದಲ್ಲಿ 23 ಶಾಸಕರು ರಾಜೀನಾಮೆ ನೀಡಿದ್ದರು. ಮಧ್ಯ ಪ್ರದೇಶದಲ್ಲಿ ಆಪರೇಷನ್ ಕಮಲ ಮೂಲಕ ಕಮಲನಾಥ ಸರ್ಕಾರ ಬೀಳಿಸಿ ಬಿಜೆಪಿಯ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಸಿಎಂ ಖುರ್ಚಿಯಲ್ಲಿ ಕೂರಿಸಿದೆ.
ರೆಬಲ್ ಲೀಡರ್ ಏಕನಾಥ್ ಶಿಂಧೆ ಬಿಜೆಪಿಗೆ ಬೆಂಬಲ ?
ಕರ್ನಾಟಕ ರಾಜಕಾರಣದಲ್ಲಿ ಎರಡು ಬಾರಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾರಣವಾಗಿದ್ದ, ಮಧ್ಯ ಪ್ರದೇಶದಲ್ಲಿ ಕಮಲನಾಥ ಸರ್ಕಾರ ಬೀಳಿಸಿದ್ದ ಆಪರೇಷನ್ ಕಮಲ ಇದೀಗ ಮಹಾರಾಷ್ಟ್ರಕ್ಕೆ ಎಂಟ್ರಿ ಕೊಟ್ಟಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಶಿವಸೇನಾ ಸರ್ಕಾರ ರಚನೆ ಮಾಡಿತ್ತು. ಉದ್ದವ್ ಠಾಕ್ರೆ ಸಿಎಂ ಅಗಿದ್ದರು. ಶಿವಸೇನೆಯ ಸಚಿವ ಏಕನಾಥ ಶಿಂಧೆ ತನ್ನ ಬೆಂಬಲಿಗ ಶಾಸಕರೊಂದಿಗೆ ಗುಜರಾತ್ ಗೆ ತೆರಳಿದ್ದಾರೆ. ಶಿವಸೇನೆಯ 33 ಶಾಸಕರು, ಏಳು ಸ್ವತಂತ್ರ್ಯ ಶಾಸಕರೊಂದಿಗೆ ಏಕನಾಥ್ ಶಿಂಧೆ ರೆಸಾರ್ಟ್ ಟೂರ್ ಹೊರಟಿದ್ದಾರೆ. ಉದ್ಧವ್ ಠಾಕ್ರೆ ಇನ್ನೇನು ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ. ಅಂತೂ ಬಿಜೆಪಿಯ ಆಪರೇಷನ್ ಕಮಲದ ತಂತ್ರಕ್ಕೆ ಮಹಾರಾಷ್ಟ್ರ ಶಿವಸೇನಾ ಸರ್ಕಾರ ಇನ್ನೇನು ಪತನವಾಗಲಿದೆ. ರೆಬಲ್ ಲೀಡರ್ ಏಕನಾಥ್ ಶಿಂಧೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಸಾಧ್ಯತೆ ಕಂಡು ಬಂದಿದೆ. ಕಟ್ಟರ್ ಹಿಂಧುತ್ವ ಶಿವಸೇನೆ ಅಧಿಕಾರಕ್ಕಾಗಿ ಸಹೋದರ ತತ್ವ ಬಿಜೆಪಿ ಬದಿಗಿಟ್ಟು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿತ್ತು. ಕರ್ನಾಟಕದಲ್ಲಿ ಆಪರೇಷನ್ ಕಮಲ ಯಶಸ್ಸಿನ ಬಳಿಕ ಇದೀಗ ಮಹಾರಾಷ್ಟ್ರದಲ್ಲಿ ಪರಿಚಯಿಸಲಾಗಿದೆ. ಏಕನಾಥ್ ಶಿಂಧೆ ನಾಯಕತ್ವದಲ್ಲಿ ಬಿಜೆಪಿ ದಾಳ ಉರುಳಿಸಿದೆ. ಪ್ರಜಾಪ್ರಭುತ್ವ ವಿರೋಧಿ, ಅನೈತಿಕ ಎಂಬ ಅಪವಾದದ ನಡುವೆಯೂ ಆಪರೇಷನ್ ಕಮಲ ಮೂಲಕ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ.
Recommended Video