'ಕೈ' ಶಾಸಕರಿಗೆ ಹಣದ ಆಮಿಷವೊಡ್ಡಿದ ಬಿಜೆಪಿ ನಾಯಕರ ಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 14 : 'ಯಾವ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುತ್ತಿಲ್ಲ. ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ಡಿದ ಬಿಜೆಪಿ ಶಾಸಕರ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್ ಅವರು, 'ಬಿಜೆಪಿ ಸರ್ಕಾರ ಸಂವಿಧಾನ ಬಾಹಿರವಾಗಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿದೆ. ರಾಜ್ಯದ ಜನರು ಎಲ್ಲವನ್ನೂ ನೋಡುತ್ತಿದ್ದಾರೆ' ಎಂದರು.
ಆಪರೇಷನ್ ಕಮಲ : ಆರ್ಎಸ್ಎಸ್ನಿಂದ ಅಮಿತ್ ಶಾಗೆ ವರದಿ!
'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕಳಂಕ ತರಲು ಬಿಜೆಪಿ ಪ್ರಯತ್ನ ನಡೆಸಿದೆ. ನಿರಂತರವಾಗಿ ಸರ್ಕಾರ ಬೀಳಿಸಲು ಪ್ರಯತ್ನ ಪಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸಹಚರರು ಸರ್ಕಾರ ಬೀಳಿಸಲು ತೀವ್ರವಾದ ಪ್ರಯತ್ನ ನಡೆಸಿದ್ದಾರೆ' ಎಂದು ದೂರಿದರು.
ಆಪರೇಷನ್ ಕಮಲ : ಬಿಜೆಪಿ ವಿರುದ್ಧ ಎಸಿಬಿಗೆ ಕಾಂಗ್ರೆಸ್ ದೂರು?
ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?
* ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ, ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ಶಾಸಕರ ಮನೆಯ ಬಳಿ ಹೋಗಿ, ಶಾಸಕರ ಸಂಬಂಧಿಗಳನ್ನು ಭೇಟಿ ಮಾಡಿ ಹಣದ ಆಮಿಷವೊಡ್ಡುತ್ತಿದ್ದಾರೆ.
* 50 ಕೋಟಿ, 100 ಕೋಟಿ ಹಣದ ಆಮಿಷ ಹಾಕುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಫೈನಾನ್ಸ್ ನಡೆಸುವ ಉದ್ಯಮಿಯೊಬ್ಬರು ಬಿಜೆಪಿ ನಾಯಕರ ಜೊತೆ ಇದ್ದಾರೆ. ಇಷ್ಟೊಂದು ಹಣ ಬಿಜೆಪಿಯ ನಾಯಕರ ಬಳಿ ಎಲ್ಲಿಂದ ಬಂತು.
ಜಾರಕಿಹೊಳಿ ಸಹೋದರರು ಬಿಜೆಪಿ ಸೇರಿದರೆ ಆಗುವ 5 ಲಾಭಗಳು!
* ಕಾಂಗ್ರೆಸ್ ಶಾಸಕರಾದ ಸಿ.ಎಸ್.ಶಿವಳ್ಳಿ, ಅನಿಲ್ ಚಿಕ್ಕಮಾದು, ಬಿ.ಸಿ.ಪಾಟೀಲ್ ಮುಂತಾದ ಶಾಸಕರಿಗೆ ಆಮಿಷವೊಡ್ಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಈ ಕುರಿತು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ.
* ಹಣ ಎಲ್ಲಿಂದ ಬಂತು?, ಇದು ಕಪ್ಪು ಹಣ ಎಂಬ ಅನುಮಾನವಿದೆ. ಆದ್ದರಿಂದ, ತನಿಖೆ ನಡೆಸು ಕ್ರಮ ಕೈಗೊಳ್ಳಿ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
* ಬಿಜೆಪಿ ನಾಯಕರು ಹಣದ ಆಮಿಷವೊಡ್ಡುತ್ತಿರುವ ಬಗ್ಗೆ ಎಸಿಬಿಗೂ ದೂರು ನೀಡುವ ಕುರಿತು ಚರ್ಚೆ ನಡೆದಿದೆ.
* ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ. ಕಾಂಗ್ರೆಸ್ನ ಯಾವ ಶಾಸಕರು ಸಹ ನಿಮ್ಮ ಪಕ್ಷಕ್ಕೆ ಬರುವುದಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ.
* ಜಾರಕಿಹೊಳಿ ಸಹೋದರರು ಈಗಾಗಲೇ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಬಿಜೆಪಿ ನಾಯಕರು ಈ ವಿಚಾರದಲ್ಲಿ ಗೊಂದಲ ಮಾಡುತ್ತಿದ್ದಾರೆ.
* ಅಧಿಕಾರ ದಾಹದಿಂದಾಗಿ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಇಂತಹ ಕಾರ್ಯ ಮಾಡುತ್ತಿದ್ದಾರೆ. ಇದನ್ನು ನೋಡಿ ಸ್ವತಃ ಬಿಜೆಪಿಯ ಕೆಲವು ನಾಯಕೇ ಬೇಸತ್ತು ಹೋಗಿದ್ದಾರೆ.