ಬಜೆಟ್ ಮಂಡನೆಗೂ ಮುನ್ನ ಮತ್ತೊಂದು ಸುತ್ತಿನ ಆಪರೇಷನ್ ಕಮಲ?
ಬೆಂಗಳೂರು, ಜನವರಿ 29 : ಕರ್ನಾಟಕದ ರಾಜಕೀಯ ಅಸ್ಥಿರತೆ ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. ಬಜೆಟ್ ಅಧಿವೇಶನಕ್ಕೆ ಮೊದಲು ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಕೈ ಹಾಕಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಮೂರು ಬಾರಿ ಆಪರೇಷನ್ ಕಮಲ ವಿಫಲವಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ದಿನಗಳ ಹಿಂದೆ, 'ಆಪರೇಷನ್ ಕಮಲ ಇನ್ನೂ ನಿಂತಿಲ್ಲ. ಕಾಂಗ್ರೆಸ್ ಶಾಸಕರೊಬ್ಬರಿಗೆ ಬಿಜೆಪಿ ಬಿಗ್ ಆಫರ್ ನೀಡಿದೆ' ಎಂದು ಹೇಳಿದ್ದರು. ಈ ಹೇಳಿಕೆ ನಿಜವಾಗುವಂತೆ ಕಾಣುತ್ತಿದೆ.
ಇಬ್ಬರು ಶಾಸಕರಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್
ಫೆಬ್ರವರಿ 8ಕ್ಕೆ ಹಣಕಾಸು ಸಚಿವರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮೊದಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ 6 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಆಪರೇಷನ್ ಕಮಲ : ಕರ್ನಾಟಕ ವಿಧಾನಸಭೆ ಬಲಾಬಲದ ಲೆಕ್ಕಾಚಾರ
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಪಕ್ಷದಿಂದ ಅಮಾನತುಗೊಂಡಿರುವ ಕಂಪ್ಲಿ ಶಾಸಕರ ಜೆ.ಎನ್.ಗೇಶ್ ಅವರು ಸಹ ಬಿಜೆಪಿ ಜೊತೆ ಕೈ ಜೋಡಿಸಲಿದ್ದು, ಎಲ್ಲಾ ಶಾಸಕರು ಒಟ್ಟಾಗಿ ಫೆಬ್ರವರಿ ಮೊದಲ ವಾರದಲ್ಲಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಿಜೆಪಿಗೆ ಹಾರುತ್ತಿರುವ 15 ಶಾಸಕರು ಯಾರು? ಇವರ ಮೇಲಿದೆ ಗುಮಾನಿ
ಯಾವ-ಯಾವ ಶಾಸಕರು?
ಶಾಸಕರಾದ ರಮೇಶ್ ಜಾರಕಿಹೊಳಿ, ಡಾ.ಉಮೇಶ್ ಜಾಧವ್, ಜೆ.ಎನ್.ಗಣೇಶ್, ಕೆಪಿಜೆಪಿ ಶಾಸಕ ಆರ್.ಶಂಕರ್, ಮುಳಬಾಗಿಲು ಶಾಸಕ ಎಚ್.ನಾಗೇಶ್, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಶಾಸಕರು ಕ್ಷೇತ್ರದಲ್ಲಿಲ್ಲ
ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಕ್ಷೇತ್ರದಲ್ಲಿ ಇಲ್ಲ. ನಾಲ್ವರು ಮುಂಬೈನಲ್ಲಿ, ಒಬ್ಬರು ಪುಣೆಯಲ್ಲಿ, ಜೆ.ಎನ್.ಗಣೇಶ್ ಗೋವಾದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲರೂ ಒಟ್ಟಾಗಿ ಫೆಬ್ರವರಿ 6ಕ್ಕೂ ಮೊದಲು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ರಾಜ್ಯಪಾಲರ ಪ್ರವೇಶ
6 ಶಾಸಕರು ರಾಜೀನಾಮೆ ನೀಡಿದರೆ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರ ಮೊರೆ ಹೋಗಲಿದೆ. ಸರ್ಕಾರಕ್ಕೆ ಬಹುಮತವಿಲ್ಲ, ವಿಶ್ವಾಸ ಮತ ಸಾಬೀತು ಮಾಡಲು ಅನುಮತಿ ನೀಡಬೇಕು ಎಂದು ಪಕ್ಷ ಮನವಿ ಮಾಡಲಿದೆ. ಆಗ ಇನ್ನಷ್ಟು ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡಲಿದೆ.
11 ಶಾಸಕರು ಬೇಕು
104 ಶಾಸಕರ ಬಲವನ್ನು ಬಿಜೆಪಿ ಹೊಂದಿದೆ. ಕನಿಷ್ಠ 11 ಶಾಸಕರು ರಾಜೀನಾಮೆ ನೀಡಿದರೆ ಸಮ್ಮಿಶ್ರ ಸರ್ಕಾರ ಬಹುಮತವನ್ನು ಕಳೆದುಕೊಳ್ಳಲಿದೆ. 2019ರ ಲೋಕಸಭಾ ಚುನಾವಣೆಯೊಳಗೆ ಕರ್ನಾಟಕದಲ್ಲಿನ ಸಮ್ಮಿಶ್ರ ಸರ್ಕಾರ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಪಣ ತೊಟ್ಟಿದ್ದಾರೆ.
ಸಮ್ಮಿಶ್ರ ಸರ್ಕಾರದಿಂದ ಪ್ಲಾನ್ ಬಿ
11 ಶಾಸಕರಿಂದ ರಾಜೀನಾಮೆ ಕೊಡಿಸುವುದು ಅಷ್ಟು ಸುಲಭದ ಮಾತಲ್ಲ. ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಸಹ ಪ್ಲಾನ್ ಬಿ ರಚಿಸಿ ಕಾರ್ಯಾಚರಣೆಗೆ ಇಳಿಯುತ್ತದೆ. ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಲಿದ್ದಾರೆಯೇ, ಇಲ್ಲವೇ? ಎಂಬುದು ಸದ್ಯದ ಪ್ರಶ್ನೆ.