ಶಿರಾಡಿ ಘಾಟ್ ರಸ್ತೆ ಜುಲೈ 15ಕ್ಕೆ ವಾಹನಗಳಿಗೆ ಮುಕ್ತವಾಗಲ್ಲ?
ಬೆಂಗಳೂರು, ಜೂನ್ 27 : ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಜುಲೈ 15ಕ್ಕೆ ಮುಕ್ತವಾಗುವ ನಿರೀಕ್ಷೆ ಇತ್ತು. ಪ್ರಸ್ತುತ ಈ ಗುಡುವು ಇನ್ನೂ 10 ದಿನ ಮುಂದಕ್ಕೆ ಹೋಗುವ ನಿರೀಕ್ಷೆ ಇದೆ.
ಶಿರಾಡಿ ಘಾಟ್ನ 12.38 ಕಿ.ಮೀ ಉದ್ದದ ರಸ್ತೆಯನ್ನು 74 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದ್ದರಿಂದ ಜನವರಿಯಿಂದ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.
ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ದಿನಾಂಕ ನಿಗದಿ
ಜುಲೈ 15ಕ್ಕೆ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇತ್ತು. ಆದರೆ, ಈಗ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಈ ಗುಡುವು 10 ದಿನ ವಿಸ್ತರಣೆಯಾಗುವ ನಿರೀಕ್ಷೆ ಇದೆ.
ಓಷನ್ ಕನ್ಸ್ಟ್ರಕ್ಷನ್ ಕಂಪನಿ ಕಾಂಕ್ರಿಟ್ ರಸ್ತೆ ಕಾಮಗಾರಿ ಕೈಗೊಂಡಿದೆ. ಈ ಕಂಪನಿ ಜರ್ಮನಿಯ ವಿರ್ಟಜರ್ ಕಂಪನಿಯಿಂದ 10 ಕೋಟಿ ವೆಚ್ಚದ ಅತ್ಯಾಧುನಿಕ ಸೆನ್ಸರ್ ಪೇವರ್ ಯಂತ್ರವನ್ನು ಕಾಮಗಾರಿಗಾಗಿ ತಂದಿತ್ತು. ಈ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಶಿರಾಡಿ ಘಾಟ್ ಕಾಮಗಾರಿಗೆ ಅಕಾಲಿಕ ಮಳೆಯ ಅಡ್ಡಿ
ಮೇ ತಿಂಗಳಿನಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಆದ್ದರಿಂದ ಕಾಮಗಾರಿಯೂ ವಿಳಂಬವಾಗಿದೆ. ಈ ಎಲ್ಲಾ ಕಾರಣದಿಂದಾಗಿ ಶಿರಾಡಿ ಘಾಟ್ ರಸ್ತೆ ಜುಲೈ 15ರಂದು ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಕಡಿಮೆ ಇದೆ.