ಐದೇ ಐದು ಜನರಿಗೆ ತಿಳಿದಿದ್ದ ಬಿಜೆಪಿಯ 'ಮಹಾ ಕಾರ್ಯಾಚರಣೆ' ?
ಈಗ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಬಿಜೆಪಿ ಬಯಸಿದಂತೆ ತಾರ್ಕಿಕ ಅಂತ್ಯ ಕಾಣುತ್ತದೋ ಇಲ್ಲವೋ ಎನ್ನುವುದು ಮುಖ್ಯಮಂತ್ರಿಗಳ ಬೆಂಗಳೂರು ಪುರಪ್ರವೇಶದ ನಂತರ ತಿಳಿದು ಬರಲಿದೆ.
ಆದರೆ, ಸದ್ದಿಲ್ಲದೇ ನಡೆದ ಈ ಕಾರ್ಯಾಚರಣೆ ಸಮ್ಮಿಶ್ರ ಸರಕಾರವನ್ನು ಬೆಚ್ಚಿಬೀಳುವಂತೆ ಮಾಡಿದ್ದಂತೂ ಹೌದು. ಮೈತ್ರಿ ಪಕ್ಷಗಳ ಅಸಮಾಧಾನವನ್ನು ನಿರ್ಲಕ್ಷ್ಯ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ಈಗ ತಮ್ಮ ತಪ್ಪಿನ ಅರಿವಾಗುತ್ತಿದೆ.
ಬಿಜೆಪಿಯ ಆಪರೇಷನ್ ಸಕ್ಸಸ್ ಆದರೆ ಅರವಿಂದ ಲಿಂಬಾವಳಿ ಮುಂಚೂಣಿಗೆ
ಅಸಲಿಗೆ, ಒಂದು ವಾರದ ಹಿಂದೆಯೇ ಈ ಕಾರ್ಯಾಚರಣೆಯ ರೂಪುರೇಷೆಗಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸವಿವರವಾಗಿ ವಿವರಿಸಿ, ಅವರ ಅನುಮತಿಯನ್ನು ಪಡೆಯಲಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿದೆ.
ಈ ಎಲ್ಲಾ ಆಪರೇಷನಿನ ಸೂತ್ರಧಾರ ಬೆಂಗಳೂರು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಎನ್ನಲಾಗುತ್ತಿದೆ. ಈ ಕಾರ್ಯಾಚರಣೆಯ ಕ್ಷಣಕ್ಷಣದ ಮಾಹಿತಿಯನ್ನು ಲಿಂಬಾವಳಿ, ಯಡಿಯೂರಪ್ಪನವರಿಗೆ ಅಪ್ಡೇಟ್ ಮಾಡಿ, ಅವರ ಸಲಹೆಗಳನ್ನು ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕಾರ್ಯಾಚರಣೆ ಒಂದು ಹಂತ ಬಂದ ನಂತರ, ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರನ್ನು ಇದರಲ್ಲಿ ಶಾಮೀಲು ಮಾಡಲಾಯಿತು ಎನ್ನುವ ಮಾತೂ ಕೇಳಿಬರುತ್ತಿದೆ. ಅರವಿಂದ ಲಿಂಬಾವಳಿ, ಯಡಿಯೂರಪ್ಪ, ಅಮಿತ್ ಶಾ ಸೇರಿದಂತೆ ಕೇವಲ ಐವರಿಗೆ ಮಾತ್ರ ಈ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಇತ್ತು ಎಂದು ಹೇಳಲಾಗುತ್ತಿದೆ.
ಸದಸ್ಯತ್ವ ಅಭಿಯಾನ ಸೇರಿದಂತೆ, ಪಕ್ಷದ ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಅರವಿಂದ ಲಿಂಬಾವಳಿ ಭಾಗವಹಿಸಿರಲಿರಲಿಲ್ಲ. ಎಲ್ಲವನ್ನೂ ಎಷ್ಟು ಗೌಪ್ಯವಾಗಿ ಮಾಡಲು ಸಾಧ್ಯವೋ ಅದನ್ನು ಲಿಂಬಾವಳಿ ಮಾಡಿ ಮುಗಿಸಿ, ಪಕ್ಷದ ವರಿಷ್ಠರ ಮಟ್ಟದಲ್ಲಿ ಸೈ ಎನಿಸಿಕೊಂಡಿದ್ದಾರೆ.
ರಾಜೀನಾಮೆ ನೀಡಿದ ಅತೃಪ್ತರು ರಾಜ್ಯಪಾಲರಿಗೆ ನೀಡಿದ ಸ್ಪೋಟಕ ಮಾಹಿತಿ
ಜಗದೀಶ್ ಶೆಟ್ಟರ್, ಆರ್ ಅಶೋಕ್, ಈಶ್ವರಪ್ಪ ಸೇರಿದಂತೆ, ಬಿಜೆಪಿ ರಾಜ್ಯ ಘಟಕದ ಯಾವ ಮುಖಂಡರಿಗೂ ಕಾರ್ಯಾಚರಣೆಯ ಮಾಹಿತಿ ಇರಲಿಲ್ಲ. ಅರವಿಂದ ಲಿಂಬಾವಳಿ, ಅತೃಪ್ತ ಶಾಸಕರ ಜೊತೆಗೆ ಮುಂಬೈಗೆ ಶನಿವಾರ (ಜುಲೈ 6) ತೆರಳಿದ್ದಾರೆ.