Breaking: ಕರ್ನಾಟಕದಲ್ಲಿ 3ನೇ ಡೋಸ್ ಕೋವಿಡ್ ಲಸಿಕೆ ಪಡೆದವರು ಎಷ್ಟು?
ಬೆಂಗಳೂರು, ಆಗಸ್ಟ್ 11: "ರಾಜ್ಯದಲ್ಲಿ ಕೋವಿಡ್ ಮೂರನೇ ಡೋಸ್ ಲಸಿಕೆಯನ್ನು ಶೇ 17 ರಷ್ಟು ಮಂದಿ ಮಾತ್ರ ಪಡೆದಿದ್ದಾರೆ. ಉಚಿತವಾಗಿ ನೀಡುತ್ತಿದ್ದರೂ ಲಸಿಕೆ ಪಡೆಯದಿರುವುದು ತೀವ್ರ ಬೇಸರದ ಸಂಗತಿ. ಉತ್ತಮ ಆರೋಗ್ಯಕ್ಕಾಗಿ ಅರ್ಹರೆಲ್ಲರೂ ಲಸಿಕೆ ಪಡೆಯಬೇಕು" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, "ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ನೀಡುವಿಕೆ ಪ್ರಮಾಣ ಶೇ 100 ದಾಟಿದ್ದರೂ, ಮೂರನೇ ಡೋಸ್ ಪಡೆದವರ ಪ್ರಮಾಣ ಶೇ 17 ರಷ್ಟು ಮಾತ್ರ ಆಗಿದೆ" ಎಂದರು.
ವಿದೇಶಿಗರೇ ಭಾರತಕ್ಕೆ ಬರುವ ಮೊದಲು ಈ ಮಾರ್ಗಸೂಚಿ ಓದಿರಿ
"ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಡೋಸ್ ಕೂಡ ಉಚಿತವಾಗಿ ನೀಡಲು ಕ್ರಮ ವಹಿಸಿದ್ದಾರೆ. ಆದರೂ ಈ ಡೋಸ್ ಪಡೆದವರ ಪ್ರಮಾಣ ಕಡಿಮೆ ಇದೆ. ಲಕ್ಷಾಂತರ ಲಸಿಕೆ ಡೋಸ್ ಲಭ್ಯವಿದ್ದರೂ ಜನರು ಲಸಿಕೆ ಪಡೆಯಲು ಮುಂದೆ ಬಾರದಿರುವುದು ಬೇಸರ ತಂದಿದೆ" ಎಂದು ಸಚಿವರು ತಿಳಿಸಿದರು.
"ಲಸಿಕೆ ಪಡೆದವರಲ್ಲಿ 6-7 ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಮೂರನೇ ಡೋಸ್ ನೀಡಲಾಗುತ್ತಿದೆ. ಮೂರನೇ ಡೋಸ್ ಪಡೆದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ" ಎಂದು ಸಚಿವರು ವಿವರಣೆ ನೀಡಿದರು.
"ರಾಜ್ಯದಲ್ಲಿ ಈ ತಿಂಗಳ 10 ರವರೆಗೂ 24 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು 60 ವರ್ಷ ವಯಸ್ಸು ಮೇಲ್ಪಟ್ಟವರಾಗಿದ್ದಾರೆ. ಯುವಜನರು ಲಸಿಕೆ ಪಡೆಯುವುದರೊಂದಿಗೆ ತಮ್ಮ ಮನೆಯ ಹಿರಿಯರಿಗೂ ಕೊಡಿಸಬೇಕು" ಎಂದು ಮನವಿ ಮಾಡಿದರು.
"ರಾಜ್ಯದಲ್ಲಿ ಶೇ 7.2 ಕೋವಿಡ್ ಪಾಸಿಟಿವಿಟಿ ದರ ಇದೆ. ಆದರೆ ಕೆಲ ಜಿಲ್ಲೆಗಳಲ್ಲಿ ರಾಜ್ಯದ ಪಾಸಿಟಿವಿಟಿ ದರಕ್ಕಿಂತ ಹೆಚ್ಚು ದರ ದಾಖಲಾಗಿದೆ. ಧಾರವಾಡದಲ್ಲಿ ಅತಿ ಹೆಚ್ಚು ದಾಖಲಾಗಿದೆ. ರಾಜ್ಯದಲ್ಲಿ ಪ್ರತಿ ದಿನ 30 ಸಾವಿರ ಮಾದರಿಗಳನ್ನು ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಯಂತೆ, ರೋಗ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಲಾಗುತ್ತಿದೆ" ಎಂದು ಸಚಿವ ಸುಧಾಕರ್ ವಿವರಿಸಿದರು.
ರಾಜ್ಯದಲ್ಲಿ ಮಂಕಿ ಪಾಕ್ಸ್ ಕಂಡುಬಂದಿಲ್ಲ
"ದೇಶದಲ್ಲಿ ಈವರೆಗೆ 9 ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಆದರೆ ರಾಜ್ಯದಲ್ಲಿ ಈವರೆಗೂ ಪ್ರಕರಣ ಕಂಡುಬಂದಿಲ್ಲ. ಆದರೂ ಗಡಿ ಭಾಗದ ಐದಾರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಆಸ್ಪತ್ರೆಗಳಲ್ಲೂ ಅದಕ್ಕೆ ಬೇಕಾದ ಔಷಧಿ, ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ" ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
"ತುಮಕೂರು, ಧಾರವಾಡ, ಬೆಂಗಳೂರಿನಲ್ಲಿ 16, 21 ವರ್ಷ ವಯಸ್ಸಿನವರು ಕೋವಿಡ್ ಸೋಂಕಿಗೊಳಗಾಗಿ ಮೃತಪಟ್ಟಿದ್ದಾರೆ. ಇದು ಬಹಳ ದುರದೃಷ್ಟಕರವಾಗಿದ್ದು, ಅವರ ಡೆತ್ ಆಡಿಟ್ ನಡೆಸಲಾಗುತ್ತಿದೆ" ಎಂದು ಸಚಿವರು ತಿಳಿಸಿದರು.
ಡೆಂಗ್ಯು, ಚಿಕನ್ ಗುನ್ಯಾ, ಎಚ್1ಎನ್1 ಹೆಚ್ಚಳ
"ರಾಜ್ಯದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ಇದೇ ಸಮಯದಲ್ಲಿ 419 ಮಲೇರಿಯಾ ಪ್ರಕರಣ ಕಂಡುಬಂದರೆ, ಈ ಬಾರಿ 114 ಕಂಡುಬಂದಿದೆ. ಇದು ಕಡಿಮೆ ಪ್ರಮಾಣದಲ್ಲಿದೆ. ಆದರೆ ಕಳೆದ ವರ್ಷ 1,266 ಡೆಂಘೀ ಪ್ರಕರಣ ಕಂಡುಬಂದಿದ್ದು, ಈ ವರ್ಷ 4,405 ಆಗಿದೆ. ಹಾಗೆಯೇ, ಈ ಬಾರಿ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣ ಹೆಚ್ಚಿದೆ. ಕಳೆದ ವರ್ಷ ಚಿಕೂನ್ಗುನ್ಯಾ ಪ್ರಕರಣ 454 ಇದ್ದು, ಈ ಬಾರಿ 978 ಆಗಿದೆ. ಎಚ್1ಎನ್1 ಕಳೆದ ವರ್ಷ 3 ಇದ್ದು, ಈ ಬಾರಿ 345 ಆಗಿದೆ" ಎಂದು ಸಚಿವರು ಹೇಳಿದರು.
3ನೇ ಡೋಸ್ ಆಗಿ ಕೋರ್ಬಿವ್ಯಾಕ್ಸ್ ಪಡೆಯಲು ಅವಕಾಶ
"ಕೋರ್ಬಿವ್ಯಾಕ್ಸ್ ಎಂಬ ಹೊಸ ಲಸಿಕೆಯನ್ನು ಹೈದರಾಬಾದ್ ಸಂಸ್ಥೆ ಆವಿಷ್ಕಾರ ಮಾಡಿದ್ದು, ಅದಕ್ಕೆ ಪರವಾನಗಿ ದೊರೆತಿದೆ. ಮೂರನೇ ಡೋಸ್ ಆಗಿ ಕೋರ್ಬಿವ್ಯಾಕ್ಸ್ ಪಡೆಯಲು ಶುಕ್ರವಾರದಿಂದ (ಆಗಸ್ಟ್ 12) ಅವಕಾಶವಿದೆ. 60 ವರ್ಷ ವಯಸ್ಸು ಮೇಲ್ಪಟ್ಟವರು, ಕೋ ಮಾರ್ಬಿಡಿಟಿ ಇರುವವರು ಕಡ್ಡಾಯವಾಗಿ 3 ನೇ ಡೋಸ್ ಪಡೆಯಬೇಕು" ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ
"ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ನಿರಾಕರಿಸುವ ಬಗ್ಗೆ ದೂರು ಬಂದಿದೆ. ಇದು ಅಮಾನವೀಯ ನಡೆ. ಇಂತಹ ಪ್ರಕರಣ ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯಕ್ಕೆ ದಂಡ ವಿಧಿಸುವ ಪ್ರಸ್ತಾಪ ಇಲ್ಲ. ಪರಿಸ್ಥಿತಿ ನೋಡಿಕೊಂಡು ಮತ್ತೆ ಸಭೆ ನಡೆಸಿ ಚರ್ಚಿಸಲಾಗುವುದು. ಮಾಸ್ಕ್ ವಿಚಾರದಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಎಲ್ಲರೂ ಮಾಸ್ಕ್ ಧರಿಸುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು" ಎಂದು ಸಚಿವರು ಹೇಳಿದರು.