ಆನ್ಲೈನ್ ಗೇಮ್ಸ್ , ಬೆಟ್ಟಿಂಗ್ ನಿಷೇಧ ರದ್ದು: ಸುಪ್ರೀಂ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ
ಬೆಂಗಳೂರು, ಮಾ.29: ರಾಜ್ಯದಲ್ಲಿ ಎಲ್ಲ ಬಗೆಯ ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ಮಾಡಿದ್ದ ತಿದ್ದುಪಡಿಯನ್ನು ರದ್ದುಪಡಿಸಿ ಹೈಕೋರ್ಟ್ ಫೆ.14ರಂದು ನೀಡಿರುವ ತೀರ್ಪು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಆ ಮೂಲಕ ಸರ್ಕಾರ ಹೈಕೋರ್ಟ್ ನಲ್ಲಿ ಆಗಿದ್ದ ಹಿನ್ನೆಡೆಯನ್ನು ಸರಿಪಡಿಸಿಕೊಳ್ಳುವ ಜೊತೆಗೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ.
ಆನ್ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಗೊಳಿಸಿ ಕರ್ನಾಟಕ ಸರ್ಕಾರ ನೀಡಿದ್ದ ಆದೇಶ ರದ್ದು
ಸರ್ಕಾರದ ವಾದವೇನು?
ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮಾಡಲಾದ ಕಾಯಿದೆ ಎಂಬುದನ್ನು ಹೈಕೋರ್ಟ್ ಪುರಸ್ಕರಿಸಿಲ್ಲ. ಕಳೆದ ಮೂರು ವರ್ಷದಲ್ಲಿ ಪೊಲೀಸರು ಆನ್ ಲೈನ್ ಬೆಟ್ಟಿಂಗ್ ಕುರಿತು 28 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಹೂಡಿದೆ. ಈ ಎಲ್ಲ ಅಂಶಗಳನ್ನು ಹೈಕೋರ್ಟ್ ಪರಿಗಣಿಸಿರಲಿಲ್ಲ ಎಂದು ಹೇಳಿದೆ.
ಹೈಕೋರ್ಟ್ ಕರ್ನಾಟಕ ಪೊಲೀಸ್ ಕಾಯ್ದೆಗೆ ಮಾಡಿದ್ದ ತಿದ್ದುಪಡಿಯನ್ನು ರದ್ದುಪಡಿಸಿರುವುದರಿಂದ ಆನ್ ಲೈನ್ ಗೇಮ್ಸ್ ಮತ್ತು ಬೆಟ್ಟಿಂಗ್ ನಿಷೇಧಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಸರ್ಕಾರ ಮೇಲ್ಮನವಿಯಲ್ಲಿ ತಿಳಿಸಿದೆ.
ಹೈಕೋರ್ಟ್ ಆದೇಶವೇನು?
ಕರ್ನಾಟಕ ಪೊಲೀಸ್ ಕಾಯ್ದೆಗೆ ಮಾಡಿದ್ದ ತಿದ್ದುಪಡಿ ಸಂವಿಧಾನಬಾಹಿರವೆಂದು ಸಾರಿದ್ದ ಹೈಕೋರ್ಟ್, ಸರ್ಕಾರ ನಿಯಮಾನುಸಾರ ಹೊಸ ಕಾಯಿದೆ ಮಾಡಬಹುದೆಂದು ಆದೇಶಿಸಿತ್ತು. ಅಲ್ಲದೆ, ಸದ್ಯಕ್ಕೆ ಸರ್ಕಾರ ಆನ್ ಲೈನ್ ಗೇಮ್ಸ್ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು, ಅವುಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮಹತ್ವದ ಆದೇಶ ನೀಡಿದೆ.
ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪನಿಗಳು ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಶೇಷ ವಿಭಾಗೀಯ ಪೀಠ ಫೆ.14ರಂದು ತೀರ್ಪು ಪ್ರಕಟಿಸಿತು.
120 ಪುಟಗಳ ತೀರ್ಪಿನಲ್ಲಿ ವಿಭಾಗೀಯಪೀಠ, ಅರ್ಜಿಗಳನ್ನು ಪುರಸ್ಕರಿಸಿ 2021ರಲ್ಲಿ ಸರ್ಕಾರ ಪೊಲೀಸ್ ಕಾಯಿದೆಗೆ ಮಾಡಿದ್ದ ಸಂಪೂರ್ಣ ತಿದ್ದುಪಡಿಯನ್ನು ರದ್ದುಪಡಿಸಿಲ್ಲ. ಆದರೆ ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಕ್ಕೆ ಸಂಬಂಧಿಸಿದ ನಿಯಮಗಳನ್ನು ಸಂವಿಧಾನಬಾಹಿರ ಮತ್ತು ನಿಯಮ ಬದ್ಧವಾಗಿಲ್ಲವೆಂದು ಸಾರಿದೆ.
ಬೆಟ್ಟಿಂಗ್ ಬಾಜಿಗೆ ಸಮ:
ಸರಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ "ಆಟದ ಫಲಿತಾಂಶದ ಬಗ್ಗೆ ತಿಳಿಯದಿರುವಾಗ ಆಟದ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುವುದು ಆಯ್ಕೆಯೋ ಅಥವಾ ಕೌಶಲವೋ ಅದು ಬಾಜಿಗೆ ಸಮನಾಗಿರುತ್ತದೆ" ಎಂದು ವಾದಿಸಿದ್ದರು.
"ಬಾಜಿ ಅಥವಾ ಬೆಟ್ಟಿಂಗ್ ಅನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ ಒಬ್ಬರಿಂದ ಹಣ ಸಂಗ್ರಹಿಸಿ, ಹಣದ ರೂಪದಲ್ಲಿ ಬಹುಮಾನದ ಮೊತ್ತ ಹಂಚಿಕೆ ಮಾಡುವುದಾಗಿದೆ. ಮುಂದೆ ಹೊರ ಹೊಮ್ಮಬಹುದಾದ ಫಲಿತಾಂಶದ ಬಗ್ಗೆ ತಿಳಿಯದೇ ತಮ್ಮ ಹಣ ಅಥವಾ ಇನ್ನವುದಾದರ ಮೇಲೆ ರಿಸ್ಕ್ ತೆಗೆದುಕೊಳ್ಳುವುದು ಬಾಜಿ ಅಥವಾ ಬೆಟ್ಟಿಂಗ್ ಗೆ ಸಮನಾಗುತ್ತದೆ. ಗೊತ್ತಿಲ್ಲದ ಫಲಿತಾಂಶವು ಆಯ್ಕೆಯ ಆಟ ಅಥವಾ ಕೌಶಲದ ಆಟವಾಗಿರಬಹುದು" ಎಂದು ಹೇಳಿದ್ದರು.
ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಉದಾಹರಿಸಿದ ಎಜಿ ನಾವದಗಿ ಅವರು "ಭಾರತ ವರ್ಸಸ್ ಪಾಕಿಸ್ತಾನ ಆಟವಾಡುತ್ತಿದ್ದರೆ ಅದು ಕೌಶಲದ ಆಟ. ಸದರಿ ಆಟದ ಫಲಿತಾಂಶ ತಿಳಿಯದಿರುವಾಗ ಹಲವರಿಂದ ಬೆಟ್ಟಿಂಗ್ ಹಣವನ್ನು ನಾನು ಸಂಗ್ರಹಿಸುತ್ತೇನೆ. ಅದು ಕೌಶಲದ ಆಟವಾಗಿರಬಹುದು" ಎಂದು ನಾವದಗಿ ಹೇಳಿದರು.
ಕಾಯಿದೆಯನ್ನು ಪ್ರಶ್ನಿಸಿರುವ ಯಾವುದೇ ಅರ್ಜಿದಾರರ ವಿರುದ್ಧ ದೂರು ದಾಖಲಿಸಲಾಗಿಲ್ಲ ಎಂದ ನಾವದಗಿ ಅವರು ತಡೆಯಾಜ್ಞೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದರು.
ಸರ್ಕಾರಕ್ಕೆ ಅಧಿಕಾರವಿಲ್ಲ:
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ "ಆನ್ ಲೈನ್ ಗೇಮ್ ಗಳನ್ನು ನಿಷೇಧಸಲು ಸರ್ಕಾರಕ್ಕೆ ಅಧಿಕಾರವಿಲ್ಲ. ಗೇಮ್ಸ್ಗೂ ಸ್ಕಿಲ್ ಗೂ ವ್ಯತ್ಯಾಸವಿದೆ. ಆದರೆ ಸರ್ಕಾರ ತಪ್ಪಾಗಿ ಅರ್ಥಿಸಿಕೊಂಡು ನಿಷೇಧಿಸಿದೆ. ಈ ಕಾನೂನಿನಿಂದ ನಮ್ಮ ರಾಜ್ಯವು ಆದಾಯ, ಉದ್ಯೋಗ ನಷ್ಟ ಅನುಭವಿಸಲಿದೆ. ರಾಜ್ಯ ಸರ್ಕಾರದ ಕಾಯಿದೆಯು 19(1)(g) ಅಡಿ ನಮ್ಮ ಹಕ್ಕುಗಳನ್ನು ಕಸಿಯಲಿದೆ. ಇದು ಸ್ವೇಚ್ಛೆಯಿಂದ ಕೂಡಿದ್ದು, ಅರ್ಥಹೀನವಾಗಿದೆ" ಎಂದು ವಿರೋಧ ದಾಖಲಿಸಿದರು.
Recommended Video