ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ: ಉನ್ನತಾಧಿಕಾರಿಯಿಂದಲೇ ದೂರು
ಬೆಂಗಳೂರು, ಅಕ್ಟೋಬರ್ 23: ಉಪನೊಂದಾವಣಿ (ಸಬ್ ರಿಜಿಸ್ಟ್ರಾರ್) ಕಚೇರಿಗಳಲ್ಲಿ ಭಾರಿ ಅಕ್ರಮ ನಡೆದಿದೆ ಈ ಬಗ್ಗೆ ವಿಸ್ತೃತ ತನಿಖೆ ಮಾಡಬೇಕೆಂದು ಇಲಾಖೆಯ ಉನ್ನತಾಧಿಕಾರಿಯೇ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯದ ಉಪ ನೊಂದಾವಣಿ ಕಚೇರಿಗಳಲ್ಲಿ ನಡೆಯುವ ಆನ್ಲೈನ್ ಆಸ್ತಿ ನೊಂದಾವಣಿ ಸೇರಿ ಇತರ ನೊಂದಾವಣಿಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ನೊಂದಾವಣಿ ವಿಭಾಗದ ಮಹಾನಿರ್ದೇಶಕರಾದ ತ್ರಿಲೋಕ್ ಚಂದ್ರಾ ಅವರೇ ದೂರು ನೀಡಿದ್ದಾರೆ.
ರಾಜ್ಯದ 20 ಕ್ಕೂ ಹೆಚ್ಚು ಉಪನೊಂದಾವಣಿ ಕಚೇರಿಗಳಲ್ಲಿ ಭಾರಿ ಅಕ್ರಮ ನಡೆದಿದೆ. ಇದರಲ್ಲಿ ಸ್ವತಃ ಉಪ ನೊಂದಾವಣೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ, ಅಕ್ರಮಗಳಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹಣ ನಷ್ಟವಾಗಿದೆ ಎಂದು ತ್ರಿಲೋಕ್ ಚಂದ್ರ ದೂರು ನೀಡಿದ್ದಾರೆ.
ದಲ್ಲಾಳಿಗಳ ಉಪಟಳ ತಪ್ಪಿಸಿ, ಭ್ರಷ್ಟಾಚಾರ ಇಲ್ಲವಾಗಿಸಿ, ಪಾರದರ್ಶಕತೆ ತರಬೇಕೆಂಬ ಉದ್ದೇಶದಿಂದ ಉಪ ನೊಂದಾವಣಿ ಕಚೇರಿಗಳಲ್ಲಿ ಆನ್ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಆದರೆ ಅದರಲ್ಲಿಯೂ ಅಕ್ರಮ ನಡೆದಿರುವುದು ಆತಂಕ ತಂದಿದೆ.
ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಕ್ರಮ ನಡೆದಿದೆ ಎಂದು ಸ್ವತಃ ಇಲಾಖೆಯ ಮಹಾನಿರೀಕ್ಷಕರೆ ಹೇಳಿದ್ದು, ಇದೊಂದು ಭಾರಿ ದೊಡ್ಡ ಅಕ್ರಮ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ತನಿಖೆಯ ನಂತರವಷ್ಟೆ ಉಳಿದ ಮಾಹಿತಿ ಹೊರಗೆ ಬೀಳಲಿದೆ.