ಆನ್ಲೈನ್ ಅವಾಂತರ 1: ಅಸಲಿ ವೃತ್ತಾಂತ ಬಿಚ್ಚಿಟ್ಟ ಕನ್ನಡ ಪ್ರಾಧ್ಯಾಪಕ ತಿಮ್ಮೇಗೌಡ
ಬೆಂಗಳೂರು, ಜೂ. 06: ಕೋವಿಡ್ 19 ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಭೌತಿಕ ತರಗತಿಗಳು ರದ್ದಾಗಿವೆ. ಅನಿವಾರ್ಯವಾಗಿ ಶಾಲಾ ಕಾಲೇಜುಗಳು ಅನಿವಾರ್ಯವಾಗಿ ಆನ್ಲೈನ್ ತರಗತಿ ಮೊರೆ ಹೋಗಿವೆ. ಪೂರ್ವ ತಯಾರಿ ಇಲ್ಲದೇ ಮೊಬೈಲ್, ಲ್ಯಾಪ್ಟಾಪ್ ಬಳಿಸಿ ಸಾಮಾಜಿಕ ಜಾಲ ತಾಣದಲ್ಲಿ ಜೂಮ್, ಗೂಗಲ್ ಮೀಟ್ ನಂತಹ ತಂತ್ರಜ್ಞಾನ ಬಳಿಸಿ ಆನ್ಲೈನ್ ತರಗತಿಗಳನ್ನು ಮಾಡಲಾಗುತ್ತಿದೆ. ಅಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವುದಕ್ಕಿಂತಲೂ ಪಾಠ ಮಾಡುವರನ್ನೇ ಕೀಟಲೆ ಮಾಡಿ ಅಪಹಾಸ್ಯ ಮಾಡುತ್ತಿದ್ದಾರೆ. ಭೌತಿಕ ತರಗತಿಗಳಲ್ಲಿ ಕೊನೆ ಬೆಂಚಿನ ಹುಡುಗರು ಆನ್ಲೈನ್ ನಲ್ಲೂ ಶಿಕ್ಷಕರಿಗೆ, ಪ್ರಾಧ್ಯಾಪಕರಿಗೆ ಕೊಡಬಾರದ ಕಷ್ಟ ಕೊಡುತ್ತಿದ್ದಾರೆ. ಆನ್ಲೈನ್ ತರಗತಿಗಳಲ್ಲಿ ಆಗುತ್ತಿರುವ ಅವಾಂತರಗಳ ಸರಣಿ ವರದಿಗಳನ್ನು ಒನ್ಇಂಡಿಯಾ ಕನ್ನಡ ಪ್ರಸ್ತುತ ಪಡಿಸುತ್ತಿದೆ.
Recommended Video
ಮಹಾಜನ ಕಾಲೇಜಿನ ತಿಮ್ಮೇಗೌಡ ಕನ್ನಡ ಕ್ಲಾಸ್ ಕಥೆ
ಮೈಸೂರಿನ ಮಹಾಜನ ಕಾಲೇಜು ಸ್ವಾತಂತ್ರ್ಯ ಪೂರ್ವದಲ್ಲಿ ಮಹತ್ವದ ಉದ್ದೇಶದಿಂದ ಆರಂಭವಾಗಿರುವ ಕಾಲೇಜು. ಇಲ್ಲಿ ಕನ್ನಡ ಪ್ರಾಧ್ಯಾಪಕ ತಿಮ್ಮೇಗೌಡ ಸರ್ ಕೂಡ ವಿನೂತನ ಪಾಠ ಮಾಡುವ ಶೈಲಿಯನ್ನು ಬಹುದೊಡ್ಡ ವಿದ್ಯಾರ್ಥಿ ಸಮುದಾಯ ಅವರನ್ನು ಇಷ್ಟ ಪಡುತ್ತಿದೆ. ಇತ್ತೀಚೆಗೆ ಪ್ರಾಧ್ಯಾಪಕ ತಿಮ್ಮೇಗೌಡ ಆರಂಭಿಸಿದ ಆನ್ಲೈನ್ ಮೊದಲ ತರಗತಿ ಆವಾಂತರಕ್ಕೆ ಒಳಗಾಗಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಕ್ಲಾಸ್ ಫುಲ್ ಹೆಬ್ಬುಲಿ ಕಥೆ
ಕಳೆದ ವರ್ಷದ ಬಿಎ, ಬಿಕಾಂ ಪದವಿಗೆ ಸೇರಿದ ವಿದ್ಯಾರ್ಥಿಗಳು ಭೌತಿಕವಾಗಿ ಒಂದು ತರಗತಿಗೂ ಭೇಟಿ ಮಾಡಿಲ್ಲ. ಶಿಕ್ಷಕರೊಬ್ಬರು ರಜೆ ಇದ್ದ ಕಾರಣದಿಂದ ಮೂರು ಕ್ಲಾಸಿಗೆ ಪ್ರಾಧ್ಯಾಪಕ ತಿಮ್ಮೇಗೌಡ ಅವರು ಆನ್ಲೈನ್ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ನಾಟಕಗಳ ಮಹತ್ವದ ಬಗ್ಗೆ ತರಗತಿ ತೆಗೆದುಕೊಂಡಿದ್ದೇ, ಅನಾಮಿಕ ವಿದ್ಯಾರ್ಥಿ ವಿಲನ್ ಸಿನಿಮಾದ ಡೈಲಾಗ್ನಿಂದಲೇ ಹಾವಳಿ ಶುರು ಮಾಡಿದ್ದಾನೆ. "ನಾನು ರಾವಣ ಕಂದಾ.. ನನಗೆ ಸಿಟ್ಟು ಹತ್ತಿದ್ರೆ ಹೊಡೆದೇ ಬಿಡ್ತೀನಿ.. ಹೆಬ್ಬುಲಿ ..ಹೆಬ್ಬಲಿ ನಾನು ಎಂಬ ಡೈಲಾಗ್ಗಳಿಂದ ಇಡೀ ತರಗತಿ ಹಾಳು ಮಾಡಿದ್ದಾನೆ.
ಕನ್ನಡ ಮೇಷ್ಟ್ರು ಪೇಚಾಟ
ಕನ್ನಡ ಪ್ರಾಧ್ಯಾಪಕ ತಿಮ್ಮೇಗೌಡರು, ಲೇ ಶಂಶಾಕು..ಯಾರೋ ಇವನು ಹೆಬ್ಬುಲಿ, ಮೀಟ್ ಮಾಡೋ ಅಂತ ಪರಿ ಪರಿ ಕೇಳಿಕೊಂಡರೂ, ಆ ಕಡೆಯಿಂದ " ತೋಟಕೊ ಹೋಗೋ ತಿಮ್ಮ, ಲಾಕ್ ಡೌನ್ ಅಮ್ಮ ಶಾಲೆಗೆ ಹೋಗೋ ತಿಮ್ಮ ಹಾಡು ಪ್ರಸಾರ ಮಾಡಿದ್ದಾನೆ" ಆನಂತರ ಹಿಂದಿ ಭಾಷೆಯ ಹಾಡುಗಳನ್ನು ಪ್ರಸಾರ ಮಾಡಿದ್ದಾನೆ. ಕನ್ನಡ ಮೇಷ್ಟ್ರು ಮೊದಲ ಪಾಠ ಕೇಳುವ ಆಸಕ್ತಿಯಿಂದ ಕೂತಿದ್ದ ವಿದ್ಯಾರ್ಥಿಗಳದ್ದು ಅತ್ತ ನಗಲಾರದ, ಅಳಲಾರದ ಪರಿಸ್ಥಿತಿ. ಆನ್ಲೈನ್ ತರಗತಿ ಹಾಳು ಮಾಡಿದ ವಿದ್ಯಾರ್ಥಿ ಯಾರು ಅನ್ನೋದು ಮಾತ್ರ ಸದ್ಯಕ್ಕೆ ಗೊತ್ತಾಗಿಲ್ಲ. ಶಶಾಂಕ್ ಎಂದು ಭಾವಿಸಿ ಮ್ಯೂಟ್ ಮಾಡಲು ಮನವಿ ಮಾಡಿದ ಪ್ರಾಧ್ಯಾಪಕರ ಮಾತಿಗೆ ಸೊಪ್ಪು ಹಾಕಿಲ್ಲ. ಆನ್ಲೈನ್ ತರಗತಿ ರಾವಣ, ಹೆಬ್ಬುಲಿ ಡೈಲಾಗ್ ಗಳ ಜತೆಗೆ ತಿಮ್ಮನ ಹಾಡುಗಳಲ್ಲೇ ಕಳೆದು ಹೋಗಿದೆ. ಇದನ್ನೇ ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರ ಮಾಡಿದ್ದು, ಆನ್ಲೈನ್ ತರಗತಿ ಶೈಲಿ ಇಡೀ ರಾಜ್ಯದೆಲ್ಲೆಡೆ ವೈರಲ್ ಆಗಿದೆ. ಇದೊಂದು ಮಾತ್ರವಲ್ಲ, ಈ ರೀತಿಯ ಅನುಭವ ಶಿಕ್ಷಕರಿಗೆ ಅಗುತ್ತಿದೆ.
ಪ್ರೊ ತಿಮ್ಮೇಗೌಡ ಬಿಚ್ಚಿಟ್ಟ ಅಸಲಿ ಸತ್ಯ
ಈ ಹಿಂದೆ ಶಾಲೆಯ ಲಾಸ್ಟ್ ಬೆಂಚ್ನಲ್ಲಿ ಕೂರುತ್ತಿದ್ದ ವಿದ್ಯಾರ್ಥಿಗಳು ಪಾಠ ಕೇಳದೇ ಶಿಕ್ಷಕರಿಗೆ , ಪ್ರಾಧ್ಯಾಪಕರಿಗೆ ಕಾಟ ಕೊಡುತ್ತಿದ್ದರು. ಇದೀಗ ಆನ್ಲೈನ್ನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕೊಡಬಾರದ ಕಾಟ ಕೊಡುತ್ತಿದ್ದಾರೆ. ಆನ್ಲೈನ್ ತರಗತಿ ಮಾಡುತ್ತಿರುವ ಶಿಕ್ಷಕರನ್ನು ಪ್ರಾಧ್ಯಾಪಕರದ್ದು ಒಂದೊಂದು ರೀತಿಯ ಅನುಭವ. ತಂತ್ರಜ್ಞಾನದ ಒಳಿತಿನ ಜತೆಗೆ ಆಗುತ್ತಿರುವ ಅವಾಂತರವನ್ನು ಪ್ರೊಫೇಸರ್ ತಿಮ್ಮಗೌಡ ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.
ಕ್ಲಾಸ್ ಆರಂಭವೇ ಆಗಿರಲಿಲ್ಲ. ಪಿಯುಸಿ ಮುಗಿಸಿ ಪದವಿಗೆ ಬಂದವರು ಇನ್ನೂ ನಮ್ಮ ಮುಖ ನೋಡಿಲ್ಲ. ಹುಡುಗರು ಇನ್ನೂ ಕ್ಲಾಸ್ಗೆ ಬಂದಿಲ್ಲ. ಆನ್ಲೈನ್ನಲ್ಲಿ ಅವನೊಬ್ಬ ತೀಟೆ ಮಾಡಿದ. ಆದರೆ ಅವನು ಯಾರು ಅಂತ ಗೊತ್ತಾಗಿಲ್ಲ. ಮೊದಲ ದಿನದ ಮೊದಲನೇ ಕ್ಲಾಸ್. ಬಿಕಾಂ, ಬಿಬಿಎ ಎಲ್ಲಾ ತರಗತಿಗಳನ್ನು ಒಂದೇ ಕ್ಲಾಸ್ ತೆಗೆದುಕೊಂಡೆ. ಯಾವನೋ ಒಬ್ಬ ಆನ್ಲೈನ್ನಲ್ಲಿ ತೀಟೆ ಮಾಡಿ ಅದನ್ನು ಹೋಗಿ ಆನ್ಲೈನ್ ನಲ್ಲಿ ಅವನೇ ಹಾಕಿಕೊಂಡಿದ್ದಾನೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅನೇಕರು ಬಿಟ್ಟಿದ್ದಾರೆ. ಅದರಲ್ಲಿ ಒಂದು ಐಡಿ ಕಾರ್ಡ್ ಇಟ್ಟುಕೊಂಡು ಒಳಗೆ ಬಂದು ಬಿಟ್ಟಿದ್ದಾನೆ. ಈಗ ಟೆಕ್ನಿಕಲಿ ಸರಿ ಪಡಿಸಿಕೊಂಡಿದ್ದೇವೆ. ಅವರನ್ನು ಮಾತನಾಡೋಕೆ ಬಿಟ್ಟಾಗಲೇ ಸಮಸ್ಯೆ. ಆನ್ಲೈನ್ ಕೇಳುವ ವಿದ್ಯಾರ್ಥಿಗಳು ಇದ್ದಾರೆ. ತೀಟೆ ಮಾಡುವ ವಿದ್ಯಾರ್ಥಿಗಳು ಇದ್ದಾರೆ. ಆನ್ಲೈನ್ ಶಿಕ್ಷಣಕ್ಕೆ ನೆಟ್ ವರ್ಕ್ ಸಿಸ್ಟಂ ಸರಿಯಿಲ್ಲ. ನಮ್ಮ ಮನೆಗಳಲ್ಲಿ ಆ ರೀತಿಯ ವಾತಾವರ ಇರಬೇಕು. ಅವರು ಕೇಳುವಂತಹ ವಾತಾವರಣ ಇರಬೇಕು.
ನಾವು ಮಾತು ಎತ್ತಿದರೆ ಅಮೆರಿಕ, ಜರ್ಮನಿ ಅಂತ ಉದಾಹರಣೆ ಕೊಡ್ತೇವೆ. ಆ ದೇಶದ ಜನಸಂಖ್ಯೆ, ಆ ದೇಶದ ಅನುಕೂಲಗಳ ಬಗ್ಗೆ ನೋಡ್ತೀವಿ. ನಮ್ಮ ದೇಶದಲ್ಲಿ ಮೂಲ ತಯಾರಿ ಆಗಿಲ್ಲ. ತರಗತಿಗಳು ಸಹಜವಾಗಿ ನಡೆದರೂ ಶೇ. 40 ರಷ್ಟು ತರಗತಿ ಆನ್ಲೈನ್ನಲ್ಲಿ ಮಾಡಬೇಕು ಎಂದು ಯುಜಿಸಿ ಸೂಚಿಸಿದೆ. ಹೀಗಿರುವಾಗ ಪ್ರಾಧ್ಯಾಪಕರಿಗೆ ಕಾಲೇಜುಗಳಲ್ಲಿ ಅನುಕೂಲ ಮಾಡಿಕೊಡಬೇಕು. ನಾವು ಬಹಳಷ್ಟು ಕಾಲ ತಳ್ಳಬೇಕಿದೆ. ವ್ಯವಸ್ಥೆಯಲ್ಲಿ ಸಿದ್ಧತೆ ಮಾಡಿಕೊಂಡು ಆನ್ ಲೈನ್ ಮಾಡಬೇಕು. ಪ್ರತಿಯೊಂದಕ್ಕೂ ಸಿದ್ಧತೆ ಇಲ್ಲದಿದ್ದರೆ ಯಶಸ್ವಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದು ಮೈಸೂರಿನ ಮಹಾಜನ ಕಾಲೇಜಿನ ಕನ್ನಡ ಪ್ರಾಧ್ಯಾಪಕ ತಿಮ್ಮೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.