ಕೊನೆಗೂ 'ಸಿಹಿ'ಯಾಯ್ತು ಈರುಳ್ಳಿ: ದಿಢೀರ್ ಬೆಲೆ ಇಳಿಕೆ
Recommended Video
ಬೆಂಗಳೂರು, ಜನವರಿ 14: ಈರುಳ್ಳಿ ಹೆಸರು ಕೇಳಿದರೆ ಬೆಚ್ಚಿಬೀಳುವಂತಾಗಿದ್ದ ಗ್ರಾಹಕರು ಕೊನೆಗೂ ಸುಧಾರಿಸಿಕೊಳ್ಳುವಂತಾಗಿದೆ. ಕೆ.ಜಿ.ಗೆ ದ್ವಿಶತಕದ ಗಡಿ ತಲುಪಿದ್ದ (200 ರೂ) ಈರುಳ್ಳಿ ದರ, ಎರಡು ತಿಂಗಳ ನಂತರ ಅರ್ಧಶತಕಕ್ಕಿಂತಲೂ ಕಡಿಮೆಯಾಗಿದೆ.
ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಹೊಸ ವರ್ಷದ ಆರಂಭದಲ್ಲಿ ತುಸು ನೆಮ್ಮದಿ ಸಿಕ್ಕಿತ್ತು. ಈಗ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವವರಿಗೆ ಈರುಳ್ಳಿ ಬೆಲೆ ಮತ್ತಷ್ಟು ಇಳಿಕೆಯಾಗಿರುವುದು ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸಿದೆ.
ದಿಢೀರ್ ಕುಸಿತ ಕಂಡ ಈರುಳ್ಳಿ ದರ: ಗ್ರಾಹಕರು ಫುಲ್ ಖುಷ್
ಕಳೆದ ಎರಡು ವಾರಗಳಿಂದ ಈರುಳ್ಳಿ ಹೊಸ ಬೆಳೆ ಬೆಂಗಳೂರು ನಗರದ ಮಾರುಕಟ್ಟೆಗೆ ಅಡಿಯಿಟ್ಟಿವೆ. ಹೀಗಾಗಿ ಪೂರೈಕೆ ಹೆಚ್ಚಳದಿಂದ ದಿಢೀರ್ ಬೆಲೆ ಕುಸಿತ ಉಂಟಾಗಿದೆ. ಪ್ರತಿ ಕೆ.ಜಿ. ಈರುಳ್ಳಿಯು ಹೋಲ್ಸೇಲ್ನಲ್ಲಿ 40 ರೂ.ನಂತೆ ಮಾರಾಟವಾಗುತ್ತಿದೆ.
ರೈತರಿಗೆ ನಿರಾಶೆ
ಅತಿ ಹೆಚ್ಚಿನ ಗುಣಮಟ್ಟದ ಈರುಳ್ಳಿ ಸೋಮವಾರ 60-80ರ ದರದಲ್ಲಿ ಮಾರಾಟವಾಗಿದೆ. ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಕೆ.ಜಿಗೆ 70 ರೂ.ನಂತೆ ಮಾರಾಟವಾಗಿದೆ. ಈ ದರ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಆದರೆ ದಿಢೀರ್ ಬೆಲೆ ಇಳಿಕೆಯು ಈರುಳ್ಳಿ ಬೆಳೆಗಾರರ ಬೇಸರಕ್ಕೆ ಕಾರಣವಾಗಿದೆ. ಬೆಲೆ ಹೆಚ್ಚಳದಿಂದ ಅಧಿಕ ಲಾಭ ಸಿಗಬಹುದು ಎಂಬ ನಿರೀಕ್ಷೆಯಿಂದ ಈರುಳ್ಳಿ ಸಂಗ್ರಹಿಸಿಟ್ಟುಕೊಂಡಿದ್ದ ರೈತರಿಗೆ ನಿರಾಶೆಯಾಗಿದೆ.
ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ
ವಿಜಯಪುರ, ಚಿತ್ರದುರ್ಗ ಮತ್ತು ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ಬೆಳೆ ಕೈಗೆ ಬಂದಿದೆ. ಇದರಿಂದಾಗಿ ರಾಜ್ಯದ ಹೋಲ್ ಸೇಲ್ ಮಾರುಕಟ್ಟೆಗಳಿಗೆ ಲೋಡ್ಗಟ್ಟಲೆ ಈರುಳ್ಳಿ ಹರಿದುಬರುತ್ತಿದೆ. ಹೀಗಾಗಿ ಬೆಲೆ ಕೂಡ ಏಕಾಏಕಿ ಕುಸಿತಕಂಡಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಪೂರೈಕೆ ಇಲ್ಲದೆ ವೇಳೆ 100-200ರವರೆಗೂ ತಲುಪಿದ್ದ ದರ, ಹೊಸ ಬೆಳೆಯ ಪೂರೈಕೆ ಬಳಿಕವೂ ಕನಿಷ್ಠ 80ರೂಗೆ ಸ್ಥಿರವಾಗಿರಲಿದೆ ಎಂದು ನಿರೀಕ್ಷಿಸಿದ್ದ ರೈತರಿಗೆ ಆಘಾತವಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ: ಕ್ಷಿಪ್ರಪಡೆಗೆ ಸಿಕ್ಕಿದ್ದು ಹಣವಲ್ಲ ಈರುಳ್ಳಿ!
ಇನ್ನಷ್ಟು ಇಳಿಯಲಿದೆ ಬೆಲೆ
ಸದ್ಯದ ಪರಿಸ್ಥಿತಿಯಲ್ಲಿ ಈರುಳ್ಳಿ ಬೆಳೆ ಉತ್ತಮವಾಗಿ ಬಂದಿದೆ. ಇದರಿಂದ ಪೂರೈಕೆಯ ಅಸಮತೋಲನ ನಿವಾರಣೆಯಾಗಲಿದೆ. ಪೂರೈಕೆ ಮಾತ್ರವೇ ಹೆಚ್ಚಳವಾಗಲಿದೆ. ಈ ತಿಂಗಳ ಅಂತ್ಯಕ್ಕೆ ಬೆಲೆಯು ರೂ. 20ರಷ್ಟು ಕುಸಿಯಲಿದೆ. ಫೆಬ್ರವರಿ ಅಂತ್ಯದ ವೇಳೆಗೆ ಮತ್ತೆ 10 ರೂ.ನಷ್ಟು ತಗ್ಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
2019ರ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ಈರುಳ್ಳಿ ದರ 30 ರೂ.ನಿಂದ ಒಮ್ಮೆಲೆ 100 ರೂ., ಬಳಿಕ ಡಿಸೆಂಬರ್ ವೇಳೆಗೆ 200 ರೂ.ಗೆ ತಲುಪಿತ್ತು. ಇದು ದೇಶದಾದ್ಯಂತ ವ್ಯಾಪಕ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರವು ಬೆಲೆ ನಿಯಂತ್ರಣಕ್ಕೆ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿತ್ತು.
ಕೆಲವರು ರೈತರಿಗೆ ಲಾಭ
ಕಳೆದ ಕೆಲವು ತಿಂಗಳು ಬೆಲೆ ಏರಿಕೆಯಿಂದ ಉತ್ತಮ ಲಾಭವಾಗಿದೆ ಎಂದು ರೈತರು ಸಂತಸ ಹಂಚಿಕೊಂಡಿದ್ದಾರೆ. ಡಿಸೆಂಬರ್ನಲ್ಲಿ ಬೆಂಗಳೂರಿಗೆ ನಮ್ಮ ಟ್ರಕ್ಗಳಲ್ಲಿ 800 ಚೀಲಗಳನ್ನು ತುಂಬಿಕೊಂಡು ಬಂದಿದ್ದೆವು. ಅದರಿಂದ 12 ಲಕ್ಷ ರೂಪಾಯಿಗೂ ಅಧಿಕ ಲಾಭ ಸಿಕ್ಕಿದೆ ಎಂದು ಗದಗದ ರೈತ ಸಂಜೀವ್ ರೆಡ್ಡಿ ಹೇಳಿದ್ದಾಗಿ 'ದಿ ನ್ಯೂಸ್ ಮಿನಿಟ್' ವರದಿ ಮಾಡಿದೆ.
ಚಿನ್ನದಿಂದಲ್ಲ, ಈರುಳ್ಳಿಯಿಂದ 90 ಲಕ್ಷ ಆದಾಯ ಗಳಿಸಿದ ರೈತ.!
ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರೈತರಿಗೆ ಲಾಭವಾಗಿತ್ತು. ಮಳೆಯಿಂದ ಬೆಳೆ ನಷ್ಟ ಅನುಭವಿಸಿದ್ದ ಅವರಿಗೆ ಬೆಲೆಯ ಭಾರಿ ಏರಿಕೆ ಸಮಾಧಾನ ನೀಡಿತ್ತು. ಅನೇಕರು ಒಂದು ಕ್ವಿಂಟಲ್ಗೆ 20,000 ರೂ.ವರೆಗೂ ಪಡೆದಿದ್ದಾರೆ. ಸಾಮಾನ್ಯವಾಗಿ ಕ್ವಿಂಟಲ್ ಈರುಳ್ಳಿ ದರ 4,000 ರೂ. ಇರುತ್ತದೆ. ಆದರೆ ಇದನ್ನು ಅವರಿಗೆ ಆದ ಲಾಭ ಎನ್ನುವಂತಿಲ್ಲ. ಏಕೆಂದರೆ ಅವರು ಮಾರುಕಟ್ಟೆಯಲ್ಲಿ ಲಾಭ ಪಡೆದರೂ, ಹೊಲದಲ್ಲಿ ಕಳೆದುಕೊಂಡಿದ್ದೇ ಹೆಚ್ಚು. ಹೆಚ್ಚಿನ ಕಡೆ ಕೈಗೆ ಬಂದಿದ್ದ ಬೆಳೆ ನಾಶವಾಗಿದೆ. ಒದ್ದೆಯಾಗಿದ್ದ ಈರುಳ್ಳಿಯನ್ನು ಒಣಗಿಸಲೂ ಸಾಧ್ಯವಾಗದೆ ಹಾಗೆಯೇ ಎಸೆದಿದ್ದಾರೆ. ಈಗ ಬೆಳೆ ಚೆನ್ನಾಗಿ ಬರುವ ವೇಳೆ ಬೆಲೆ ತೀವ್ರ ಇಳಿಕೆಯಾಗಿದೆ.
ಟರ್ಕಿಗಿಂತ ಭಾರತದ ಈರುಳ್ಳಿಯೇ ದುಬಾರಿ
ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದರಿಂದ ಮತ್ತು ಬೆಲೆ ಏರಿಕೆಯಾಗಿದ್ದರಿಂದ ಮಾರುಕಟ್ಟೆಯಲ್ಲಿನ ಕೊರತೆ ತಗ್ಗಿಸಲು ಕೇಂದ್ರ ಸರ್ಕಾರ ಟರ್ಕಿಯಿಂದ ಈರುಳ್ಳಿ ಆಮದು ಮಾಡಿಕೊಂಡಿತ್ತು. ವಿಶೇಷವೆಂದರೆ ಪುಣೆಯ ಮಾರುಕಟ್ಟೆಯಲ್ಲಿ ಟರ್ಕಿಯಿಂದ ಆಮದಾದ ಈರುಳ್ಳಿಗಿಂತಲೂ ಭಾರತದ ಈರುಳ್ಳಿಯೇ ದುಬಾರಿ.
ಟರ್ಕಿ ಈರುಳ್ಳಿ ಪ್ರತಿ ಕೆ.ಜಿಗೆ 30-35 ರೂ.ನಂತೆ ಮಾರಾಟವಾಗುತ್ತಿದ್ದರೆ, ಭಾರತದ ಈರುಳ್ಳಿ ಕೆ.ಜಿಗೆ 40-55 ರೂ.ನಂತೆ ಮಾರಾಟವಾಗುತ್ತಿದೆ. ಇದಕ್ಕೆ ಕಾರಣ ರುಚಿ. ಭಾರತದ ಈರುಳ್ಳಿಯಲ್ಲಿ ಸಿಗುವ ರುಚಿ ವಿದೇಶಿ ಈರುಳ್ಳಿಯಲ್ಲಿಲ್ಲ. ಈ ಕಾರಣಕ್ಕಾಗಿಯೇ ಹೊರದೇಶಗಳಲ್ಲಿ ಭಾರತದ ಈರುಳ್ಳಿಗೆ ಬೇಡಿಕೆ ಹೆಚ್ಚು.
ದುಬಾರಿಯಾಗುತ್ತಿದೆ ತರಕಾರಿ
ಈ ನಡುವೆ ತರಕಾರಿಗಳ ಬೆಲೆಯಲ್ಲಿ ಇತ್ತೀಚೆಗೆ ಭಾರಿ ಹೆಚ್ಚಳವಾಗಿದೆ. ತರಕಾರಿಗಳ ಬಿತ್ತನೆ ಕಾರ್ಯಕ್ಕೆ ಹೆಚ್ಚಿನ ವೆಚ್ಚವಾಗುತ್ತಿದೆ. 2019ರ ಡಿಸೆಂಬರ್ನಲ್ಲಿ ಚಿಲ್ಲರೆ ಹಣದುಬ್ಬರ ಶೇ 7.35ರಷ್ಟಿತ್ತು. ಇದು 2014ರ ಮೇನಿಂದ ಅತ್ಯಧಿಕವಾಗಿದೆ. ಕಳೆದ ತಿಂಗಳು ಭಾರತದಾದ್ಯಂತ ತರಕಾರಿಗಳ ಬೆಲೆ ಶೇ 60.50ರಷ್ಟು ಹೆಚ್ಚಳವಾಗಿದೆ.
ತೆಂಗಿನಕಾಯಿ ಬೆಲೆ ಇಳಿಕೆ
ತೆಂಗು ಬೆಳೆಗಾರರು ಕೂಡ ದರ ಇಳಿಕೆಯ ಹೊಡೆತಕ್ಕೆ ಸಿಲುಕಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಒಣಕೊಬ್ಬರಿ ಕ್ವಿಂಟಲ್ಗೆ 17,000-18,000 ರೂ. ಇದ್ದ ಬೆಲೆ, ಶನಿವಾರ ತುಮಕೂರಿನ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ 11,500ಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ. ತೆಂಗಿನಕಾಯಿಗಳ ಬೆಲೆ ಕೂಡ ಇಳಿಕೆಯಾಗಿದೆ. 20 ರೂ ಇದ್ದ ಒಂದೆ ತೆಂಗಿನ ಕಾಯಿ ಬೆಲೆ 17 ರೂ.ಗೆ ಇಳಿದಿದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅವು 25-30ರೂ ನಂತೆ ಮಾರಾಟವಾಗುತ್ತಿವೆ.