Oneindia Impact: ಆನ್ಲೈನ್ ಲೋನ್ ಆಪ್ಗಳ ಅಕ್ರಮ ಬುಡಕ್ಕೆ ಬೆಂಕಿ ಇಟ್ಟ ಇಡಿ!
ಬೆಂಗಳೂರು, ಮೇ. 12: ಆನ್ಲೈನ್ನಲ್ಲೇ ಬಿಡಿಗಾಸು ತುರ್ತು ಸಾಲ ಕೊಟ್ಟು ಮಾನ ಹರಾಜು ಹಾಕಿ ಜೀವ ತೆಗೆಯುತ್ತಿದ್ದ ಇನ್ಸ್ಟೆಂಟ್ ಲೋನ್ ಆಪ್ಗಳ ವಿರುದ್ಧ ಜಾರಿ ನಿರ್ದೇಶನಾಲಯ ಸದ್ದಿಲ್ಲದೇ ಸಮರ ಸಾರಿದೆ. ಬೇನಾಮಿ ವ್ಯವಹಾರ, ಜನರಿಂದ ದುಬಾರಿ ಬಡ್ಡಿ ಸುಲಿಗೆ ಸಂಬಂಧ ಏಳು ಆನ್ಲೋನ್ ಲೋನ್ ಆಪ್ಗಳ ಕೋಟ್ಯಂತರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಆನ್ಲೈನ್ ಲೋನ್ ಆಪ್ಗಳ ವಂಚನೆ, ಮರ್ಯಾದೆ ತೆಗೆಯುವ ಬಗ್ಗೆ ಒನ್ಇಂಡಿಯಾ ಕನ್ನಡ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಭಾರತದ ವಿವಿಧ ರಾಜ್ಯಗಳಲ್ಲಿ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸಿದ್ದ ಚೀನಾ ಮೂಲದ ಏಳು ಆನ್ಲೈನ್ ಲೋನ್ ಆಪ್ ಹೆಸರಿನ ಬ್ಯಾಂಕ್ ಖಾತೆಗಳಲ್ಲಿದ್ದ 76.67 ಕೋಟಿ ರೂ. ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮನಿ ಲಾಂಡರಿಂಗ್ ಆಕ್ಟ್ 2002 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ದೇಶದಲ್ಲಿ ಬೇನಾಮಿ ವಹಿವಾಟು ನಡೆಸುತ್ತಿರುವ ಆನ್ಲೈನ್ ಲೋನ್ ಆಪ್ಗಳ ಅಕ್ರಮದ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಇಡಿ 40 ಅಧಿಕಾರಿಗಳ ಈ ಕಾರ್ಯ ಇದೀಗ ಮತ್ತೆ ತಲೆಯೆತ್ತಿರುವ ತುರ್ತುಸಾಲ ಲೋನ್ ಆಪ್ಗಳಲ್ಲಿ ನಡುಕ ಹುಟ್ಟಿಸಿದೆ.
ಲೋನ್ ಆಪ್ಗಳ ಮೀಟರ್ ಬಡ್ಡಿ ಕೇಸಿಗೆ ಪೊಲೀಸರು ಎಳ್ಳುನೀರು ಬಿಟ್ಟರೇ ?
ಏನಿದು ಅಕ್ರಮ
ಕೊರೊನಾ ಮೊದಲ ಅಲೆ ಬಂದ ಕೂಡಲೇ ಜನರು ಅರ್ಥಿಕ ಸಂಕಷ್ಟಕ್ಕೆ ಒಳಗಾದರು. ಈ ವೇಳೆ ಆನ್ಲೈನ್ನಲ್ಲಿ ಐದು ನಿಮಿಷಕ್ಕೆ ಸಾಲ ಕೊಡುವ ಲೋನ್ ಆಪ್ಗಳು ಹುಟ್ಟಿಕೊಂಡಿದ್ದವು. ಲೋನ್ ಬಯಸುವ ಮೊಬೈಲ್ ಎಲ್ಲಾ ಸಂಪರ್ಕ ಸಂಖ್ಯೆ, ಡಾಟಾ ಕದ್ದು ಸಾಲ ನೀಡುತ್ತಿದ್ದ ಲೋನ್ ಆಪ್ಗಳು, ಶೇ. 40 ರಿಂದ 50 ರಷ್ಟು ಬಡ್ಡಿ, ಚಕ್ರಬಡ್ಡಿ ವಸೂಲಿ ಮಾಡುತ್ತಿದ್ದವು. ಸಾಲ ಮರುಪಾವತಿ ಮಾಡದವರ ಮರ್ಯಾದೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ತೆಗೆಯುತ್ತಿದ್ದರು. ಬಿಡಿಗಾಸು ಪಾವತಿಸಲಾಗದೇ ಮರ್ಯಾದೆಗೆ ಅಂಜಿ ತೆಲಂಗಾಣದಲ್ಲಿ ಕೆಲವರು ಆತ್ಮಹತ್ಯೆಗೆ ಶರಣಾದರು. ಮೊದಲು ಸೈಬರಾಬಾದ್ ಪೊಲೀಸರು ಆನ್ಲೈನ್ ಲೋನ್ ಆಪ್ಗಳ ಅಕ್ರಮವನ್ನು ಬಯಲಿಗೆ ಎಳೆದಿದ್ದರು.
400 ಆಪ್ಗಳ ವಿರುದ್ಧ ದಾಳಿ
ಲೋನ್ ಆಪ್ಗಳ ಅಕ್ರಮ ಜಾಲ ನಡೆಸುತ್ತಿದ್ದ ಕಂಪನಿಗಳ ಮೇಳೆ ದಾಳಿ ನಡೆಸಿದ್ದ ಸೈಬರಾಬಾದ್ ಪೊಲೀಸರು, ಸುಮಾರು 400 ಲೋನ್ ಆಪ್ಗಳನ್ನು ಪಟ್ಟಿ ಮಾಡಿದ್ದರು. ಈ ಜಾಲದಲ್ಲಿ ಶಾಮೀಲಾಗಿದ್ದ ಹಲವರನ್ನು ಬಂಧಿಸಿದ್ದರು. ಲೋನ್ ಆಪ್ ಜಾಲ ಇಡೀ ದೇಶವ್ಯಾಪ್ತಿ ಹರಡಿರುವ ಸಂಗತಿ ಅದಾಗಲೇ ಬೆಳಕಿಗೆ ಬಂದಿತ್ತು. ಆರ್ಬಿಐ ನಿಯಮಗಳನ್ನು ಉಲ್ಲಂಘನೆ ಮಾಡಿ ಆನ್ಲೈನ್ ನಲ್ಲಿ ಕಾನೂನು ಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದ ಆಪ್ಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಅವನ್ನು ಪ್ಲೇ ಸ್ಟೋರ್ನಿಂದ ತೆಗೆಯುವಂತೆ ಗೂಗಲ್ ಸಂಸ್ಥೆಗೆ ಪತ್ರ ಬರೆದಿತ್ತು. ಸೈಬರಾಬಾದ್ ಪೊಲೀಸರು ಕ್ರಮ ಜರುಗಿಸುತ್ತಿದ್ದಂತೆ ಹಲವು ಆಪ್ಗಳು ಪ್ಲೇ ಸ್ಟೋರ್ನಿಂದ ಕಣ್ಮರೆಯಾಗಿದ್ದವು.
ಒನ್ ಇಂಡಿಯಾ ಸರಣಿ ವರದಿಗಳು
ಆನ್ಲೈನ್ ಲೋನ್ ಆಪ್ಗಳ ಅಕ್ರಮ ರಾಜಧಾನಿ ಬೆಂಗಳೂರಿನಲ್ಲಿ ಲೋನ್ ರೀಕವರಿ ಗುತ್ತಿಗೆ ಪಡೆದಿದ್ದ ಕಾಲ್ ಸೆಂಟರ್ಗಳ ಜಾಲದ ಬಗ್ಗೆ ಒನ್ಇಂಡಿಯಾ ಕನ್ನಡ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಕರ್ನಾಟಕದಲ್ಲಿ ತುರ್ತುಸಾಲ ಆನ್ಲೈನ್ ಲೋನ್ ಆಪ್ಗಳ ಬಡ್ಡಿ ದಂಧೆಯನ್ನು ಎಳೆಎಳೆಯಾಗಿ ಒನ್ಇಂಡಿಯಾ ಕನ್ನಡ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಸಾಮಾಜಿಕ ಜಾಲ ತಾಣದಲ್ಲಿ ಒನ್ಇಂಡಿಯಾ ಪ್ರಕಟಿಸಿದ್ದ ಸರಣಿ ವರದಿಗಳು ಬಹುದೊಡ್ಡ ಚರ್ಚೆ ಹುಟ್ಟು ಹಾಕಿದ್ದವು. ಒನ್ಇಂಡಿಯಾ ಕನ್ನಡ ವರದಿ ಬೆನ್ನಲ್ಲೇ ಸೈಬರಾಬಾದ್ ಪೊಲೀಸರು ಈ ಅಕ್ರಮ ಜಾಲದ ವಿರುದ್ಧ ಕೇಸು ದಾಖಲಿಸಿದ್ದು ಕಾಕತಾಳೀಯ. ಆನಂತರ ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ದೇಶವ್ಯಾಪ್ತಿ ಲೋನ್ ಆಪ್ಗಳ ಅಕ್ರಮದ ವಿರುದ್ಧ ಪ್ರಕರಣಗಳು ದಾಖಲಾದವು. ಚೀನಾ ಮೂಲದ ಲೋನ್ ಆಪ್ಗಳಲ್ಲಿ ಬೇನಾಮಿ ಹಣ ಹೂಡಿಕೆ ಮಾಡಿರುವ ಸುಳಿವಿನ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು.
Recommended Video
ಸಿಸಿಬಿ ಪೊಲೀಸರ ಅರ್ಧ ಕೆಲಸ
ರಾಜ್ಯದಲ್ಲಿ ಆನ್ಲೈನ್ ಲೋನ್ ಆಪ್ಗಳ ವಿರುದ್ಧ ಒಂದಡೆ ಸಿಸಿಬಿ ಪೊಲೀಸರು ಇನ್ನೊಂದಡೆ ಸಿಐಡಿ ಸೈಬರ್ ಘಟಕದ ಪೊಲೀಸರು ಸಮರ ಸಾರಿದ್ದರು. ತುರ್ತು ಸಾಲ ವಸೂಲಿ ಮಾಡಲು, ಸಾಲ ಪಡೆದವರ ಮರ್ಯಾದೆ ತೆಗೆಯಲು ಬೆಂಗಳೂರಿನಲ್ಲಿ ತೆರೆದಿದ್ದ ಕಾಲ್ ಸೆಂಟರ್ ಗಳ ಮೇಲೂ ದಾಳಿ ನಡೆದಿತ್ತು. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಆನ್ಲೈನ್ ಲೋನ್ ಆಪ್ಗಳ ವಿರುದ್ಧ ಕೇಸು ದಾಖಲಿಸಿದ್ದರು. ಆದರೆ, ಲೋನ್ ಆಪ್ಗಳ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಸಿಸಿಬಿ ಪೊಲೀಸರು ಸಂಪೂರ್ಣ ವಿಫಲರಾದರು. ಸಿಸಿಬಿ ಪೊಲೀಸರಂತೆ ಸಿಐಡಿ ಸೈಬರ್ ಘಟಕದ ಪೊಲೀಸರು ಕೂಡ ಆರಂಭದಲ್ಲಿ ತನಿಖೆ ನಡೆಸಿ ನಂತರ ಕೈತೊಳೆದುಕೊಂಡದ್ದರು. ನೆರೆ ರಾಜ್ಯ ತಮಿಳುನಾಡಿನಲ್ಲಿ ಸುಮಾರು 25 ಸಾವಿರ ಕೋಟಿ ವಹಿವಾಟು ನಡೆಸಿದ್ದ ಚೀನಾ ಮೂಲದ ಲೋನ್ ಆಪ್ ಗಳ ಕಿಂಗ್ ಪಿನ್ಗಳನ್ನು ಬಂಧಿಸಿದ್ದನ್ನು ಸ್ಮರಿಸಬಹುದು. ಇದೀಗ ಇಡಿ ಅಧಿಕಾರಿಗಳು ಲೋನ್ ಆಪ್ಗಳಿಗೆ ತಕ್ಕ ಬುದ್ಧಿ ಕಲಿಸುವ ಭರವಸೆ ಮೂಡಿಸಿದ್ದಾರೆ.