ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾದ ಕರ್ನಾಟಕದ 'ಪ್ರತ್ಯೇಕ ಧ್ವಜ'
ಬೆಂಗಳೂರು, ಜುಲೈ 18: ಕರ್ನಾಟಕಕ್ಕೆ ಪ್ರತ್ಯೇಕ ಅಧಿಕೃತ ಧ್ವಜ ಹೊಂದುವ ಸರಕಾರದ ನಿರ್ಧಾರ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದೆ. ಇಂದು ಬೆಳಗ್ಗೆಯಿಂದ ರಾಷ್ಟ್ರೀಯ ವಾಹಿನಿಗಳಲ್ಲಿ ಕರ್ನಾಟಕದ ಪ್ರತ್ಯೇಕ ಧ್ವಜದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ವಿಪಕ್ಷ ಬಿಜೆಪಿ ಸೇರಿ ಹಲವರು ಪ್ರತ್ಯೇಕ ಧ್ವಜ ಹೊಂದುವ ಕರ್ನಾಟಕ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಖಂಡಿಸಿದ್ದಾರೆ. ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಕೂಡ ಪ್ರತ್ಯೇಕ ಧ್ವಜ ಹೊಂದುವ ಸರಕಾರದ ತೀರ್ಮಾನದ ಬಗ್ಗೆ ಅಸಮಧಾನ ಹೊಂದಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕರ್ನಾಟಕ 'ರಾಜ್ಯ ಧ್ವಜ'ದ ವಿನ್ಯಾಸಕ್ಕೆ ತಜ್ಞರ ಸಮಿತಿ ರಚನೆ
'ಒನ್ ನೇಷನ್ ಒನ್ ಫ್ಲಾಗ್' ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ಕರ್ನಾಟಕ ಧ್ವಜ ವಿವಾದದ ಬಗ್ಗೆ ಈ ದಿನ ನಡೆದ ಚರ್ಚೆಯ ಪೂರ್ಣ ಪಾಠ ಇಲ್ಲಿದೆ.
ನಿರ್ಧಾರ ಸಮರ್ಥಿಸಿಕೊಂಡ ಸಿಎಂ
ಪ್ರತ್ಯೇಕ ಧ್ವಜ ಹೊಂದುವ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸಂವಿಧಾನದ ಯಾವ ವಿಧಿ ರಾಜ್ಯಗಳು ಧ್ವಜ ಹೊಂದದಂತೆ ನಿರ್ಬಂಧ ವಿಧಿಸುತ್ತದೆ?" ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಧ್ವಜ ಹೊಂದುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಒಂದೊಮ್ಮೆ ಬಿಜೆಪಿ ಇದನ್ನು ವಿರೋಧಿಸುವುದಾದರೆ ಅವರು ರಾಜ್ಯ ಧ್ವಜದ ವಿರುದ್ಧ ಇದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಾರಾ?," ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಉಲ್ಟಾ ಹೊಡೆದ ವೇಣುಗೋಪಾಲ್
ಪ್ರತ್ಯೇಕ ಧ್ವಜ ಹೊಂದುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಸಮಧಾನ ಹೊಂದಿದೆ ಎನ್ನುವುದಕ್ಕೆ ಪುಷ್ಠಿ ನೀಡುವಂತೆ ಪಕ್ಷದ ಕರ್ನಾಟಕ ಉಸ್ತುವಾರಿ ಕೆಸಿ ವೇಣುಗೋಪಾಲ್ ಹೇಳಿಕೆ ನೀಡಿದ್ದಾರೆ.
"ನಾನು ರಾಜ್ಯ ಸರಕಾರದಿಂದ ಸ್ಪಷ್ಟೀಕರಣ ಪಡೆಯಲಿದ್ದೇನೆ. ನಮಗೆ ಇರುವುದು ಒಂದೇ ಒಂದು ಧ್ವಜ ಅದು ರಾಷ್ಟ್ರ ಧ್ವಜ," ಎಂದು ಹೇಳಿದ್ದಾರೆ.
ಕಾನೂನು ತಜ್ಞರು ಹೇಳುವುದೇನು?
ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವುದು ಸಂವಿಧಾನ ವಿರೋಧಿಯೇನಲ್ಲ ಎಂದು ಹಿರಿಯ ವಕೀಲರೂ ಹೇಳಿಕೆಗಳನ್ನು ನೀಡಿದ್ದಾರೆ. "ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ಧ್ವಜ ಹೊಂದದಂತೆ ಸಂವಿಧಾನದಲ್ಲಿ ಎಲ್ಲೂ ನಿರ್ಬಂಧಗಳಿಲ್ಲ," ಎಂದು ಹಿರಿಯ ಸುಪ್ರಿಂ ಕೋರ್ಟ್ ವಕೀಲ ಪಿಪಿ ರಾವ್ ಹೇಳಿಕೆ ನೀಡಿದ್ದಾರೆ.
"ರಾಷ್ಟ್ರೀಯ ಧ್ವಜಕ್ಕೆ ಅವಮಾನ ಸಲ್ಲಿಸುವವರೆಗೆ ವೈಯಕ್ತಿಕವಾಗಿ ನನಗೆ ಪ್ರತ್ಯೇಕ ಧ್ವಜ ಹೊಂದುವುದು ಕಾನೂನು ಬಾಹಿರ ಎಂದು ಅನಿಸುತ್ತಿಲ್ಲ," ಎಂದು ಮತ್ತೊಬ್ಬರು ಹಿರಿಯ ವಕೀಲರಾದ ಕೆಎನ್ ಭಟ್ ಹೇಳಿದ್ದಾರೆ. ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಪ್ರತ್ಯೇಕ ಧ್ವಜ ಹೊಂದುವುದು ಸಂವಿಧಾನ ಬಾಹಿರವಾಗುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಕಟು ವಿರೋಧ
"ರಾಷ್ಟ್ರೀಯ ಭಾವನೆಯನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕು," ಎಂದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಪ್ರತ್ಯೇಕ ಧ್ವಜ ಹೊಂದುವುದನ್ನು ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಶೋಭಾ ಕರಂದ್ಲಾಜೆ, "ಸಿದ್ಧರಾಮಯ್ಯ ಸಂಪೂರ್ಣವಾಗಿ ವೋಟ್ ಬ್ಯಾಂಕ್ ಹಿಂದೆ ಹೋಗಿದ್ದು ಜನರನ್ನು ಓಲೈಕೆ ಮಾಡುತ್ತಿದೆ," ಎಂದು ಕಿಡಿಕಾರಿದ್ದಾರೆ.
ದೇಶಕ್ಕೆ ಒಂದೇ ಬಾವುಟ – ಯಡಿಯೂರಪ್ಪ
"ರಾಜ್ಯದ ಗಮನ ಬೇರೆಡೆ ಸೆಳೆಯಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಪ್ರತ್ಯೇಕ ಬಾವುಟ ವಿಚಾರವನ್ನು ಎತ್ತಲಾಗಿದೆ. ಸರ್ಕಾರದ ವೈಫಲ್ಯವನ್ನು ಮರೆಮಾಚಲು ಸರ್ಕಾರ ಈ ಕೆಲಸ ಮಾಡುತ್ತಿದೆ. ಸಂವಿಧಾನದಲ್ಲಿ ಬೇರೆ ಬಾವುಟ ಹೊಂದುವ ಅವಕಾಶವಿಲ್ಲ. ದೇಶಕ್ಕೆ ಇರುವುದು ಒಂದೇ ಬಾವುಟ. ಸರ್ಕಾರದ ನಡೆ ಅಕ್ಷ್ಯಮ್ಯ ಅಪರಾಧ," ಎಂದು ಕಿಡಿಕಾರಿದ್ದಾರೆ.
ಜನರ ಬೇಡಿಕೆ ಪುರಸ್ಕರಿಸುವುದು ಸರಕಾರದ ಕರ್ತವ್ಯ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಹೇಳಿಕೆ ನೀಡಿ, "ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ ಧ್ವಜ ಹೊಂದುವಂತೆ ಜನರ ಬೇಡಿಕೆ ಇದೆ. ಅವರ ಬೇಡಿಕೆ ಪುರಸ್ಕರಿಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ಸರ್ಕಾರ ಪ್ರತ್ಯೇಕ ಧ್ವಜ ಹೊಂದಲು ಸಮಿತಿ ರಚಿಸಿದೆ. ಸಮಿತಿ ವರದಿ ನೀಡಿದ ನಂತರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಅಲ್ಲಿ ಅದರ ಬಗ್ಗೆ ಪರಿಶೀಲನೆ ನಡೆಯಲಿದೆ," ಎಂದು ಹೇಳಿದ್ದಾರೆ.
ಸಂವಿಧಾನ ವಿರೋಧಿ - ಸ್ವಾಮಿ
"ಇದು ಸಂಪೂರ್ಣ ಸಂವಿಧಾನ ವಿರೋಧಿ. ಪ್ರತ್ಯೇಕ ಧ್ವಜ ಹೊಂದಲು ಅನುಮತಿ ನೀಡಿದರೆ ಅದು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತದಂಥ ರಾಜ್ಯಗಳಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ," ಎಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ನ್ಯೂಸ್ 18ಗೆ ಹೇಳಿಕೆ ನೀಡಿದ್ದಾರೆ.
ಕಾಶ್ಮೀರದ ಜತೆ ಹೋಲಿಕೆ
ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಹಲವರು ಕರ್ನಾಟಕದ ಬೇಡಿಕೆಯನ್ನು ಕಾಶ್ಮೀರದ ಜತೆ ಹೋಲಿಕೆ ಮಾಡುತ್ತಿದ್ದಾರೆ. ಸ್ವಾಯತ್ತ ಸ್ಥಾನಮಾನ ಹೊಂದಿರುವ, ಆರಂಭದಿಂದಲೂ ಪ್ರತ್ಯೇಕ ದೇಶದ ಬೇಡಿಕೆ ಇಟ್ಟುಕೊಂಡು ಬಂದ ಕಾಶ್ಮೀರದ ಪರಿಸ್ಥಿತಿಯೇ ಬೇರೆ ಕರ್ನಾಟಕದ ಪರಿಸ್ಥಿತಿಯೇ ಬೇರೆ.
ಇನ್ನೊಂದು ಕಡೆ ಕರ್ನಾಟಕದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಬಾವುಟ ಹಲವಾರು ದಶಕಗಳಿಂದಲೇ ಚಾಲ್ತಿಯಲ್ಲಿದೆ. ಅಧಿಕೃತ ಸ್ಥಾನಮಾನ ಇಲ್ಲದಿದ್ದಾಗಲೂ ಜನರು ಕರ್ನಾಟಕದ ಬಾವುಟ ಎಂದೇ ಎದೆಗಪ್ಪಿಕೊಂಡು, ಧ್ವಜಾರೋಹಣ ಮಾಡುತ್ತಾ ತಮ್ಮ ಕನ್ನಡ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸುತ್ತಾ ಬಂದಿದ್ದಾರೆ.
ಹಾಗಾಗಿ ಅಧಿಕೃತ ಸ್ಥಾನಮಾನ ಸಿಗದಿದ್ದರೂ ಕನ್ನಡ ಬಾವುಟಕ್ಕೇನೂ ಧಕ್ಕೆ ಬರದು.