ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ವಿಧಾನಸಭೆಯಲ್ಲಿ ಚರ್ಚೆ: ಕಾಗೇರಿ
ಬೆಂಗಳೂರು, ನ. 28: ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಕುರಿತ ಎರಡು ದಿನಗಳ ಕಾಲ ವಿಧಾನಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. ಬರುವ ವಿಧಾನಸಭಾ ಅಧಿವೇಶನ ನಡೆಯುವ ಸಂದರ್ಭದಲ್ಲಿ, ಡಿಸೆಂಬರ್ 14 ಮತ್ತು 15 ರಂದು ಎರಡು ದಿನಗಳ ಕಾಲ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಬರುವ ಡಿಸೆಂಬರ್ 07 ರಿಂದ 15 ರ ವರೆಗೆ ನಡೆಯಲಿರುವ 15 ನೇ ವಿಧಾನಸಭೆಯ ಎಂಟನೇ ಅಧಿವೇಶನದ ಪ್ರಮುಖ ಅಂಶಗಳ ಕುರಿತು ಸುದ್ದಿಗೋಷ್ಠಿ ತಿಳಿಸಿದರು. ನವೆಂಬರ್ 25 ಮತ್ತು 26 ರಂದು ಗುಜರಾತ್ನ ಕೆವಾಡಿಯಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಾರತದಲ್ಲೇ ಪ್ರಪಥಮವಾಗಿ ಈ ವಿಷಯವನ್ನು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಚಿಂತನ-ಮಂಥನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಭಾರತಕ್ಕೆ ಬೇಕು: ಮೋದಿ
ನಾಯಕರ ಸಹಕಾರ ಕೋರಿದ್ದೇನೆ
ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ಎಲ್ಲಾ ಮಜಲುಗಳ ಚರ್ಚೆ ಪೂರ್ಣ ಪ್ರಮಾಣದಲ್ಲಿ ಆಗಬೇಕೆಂಬ ಸದುದ್ದೇಶದ ಹಿನ್ನೆಲೆಯಲ್ಲಿ ತಾವು ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜಾತ್ಯಾತೀತ ಜನತಾದಳದ ಮುಖಂಡ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಪ್ರಸ್ತಾಪಿಸಿ ಈಗಾಗಲೇ ಎಲ್ಲರ ಸಹಕಾರವನ್ನು ಕೋರಿರುವುದಾಗಿ ಕಾಗೇರಿ ತಿಳಿಸಿದರು.
ಕೊರೊನಾ ಮುಂಜಾಗ್ರತೆ
ಡಿಸೆಂಬರ್ 07 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಒಳಗೊಂಡಂತೆ ಎಲ್ಲಾ ಕಾರ್ಯಕಲಾಪಗಳು ಇರುತ್ತವೆ ಎಂದು ಸ್ವಷ್ಟಪಡಿಸಿದ ಅವರು ಸದನದಲ್ಲಿ ಹತ್ತು ವಿಧೇಯಕಗಳು ಮಂಡನೆಗೆ ಸಿದ್ಧವಿದೆ ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದೆ ಕೈಗೊಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಆದರೆ ಕಲಾಪದಲ್ಲಿ ಪಾಲ್ಗೊಳ್ಳುವ ಸದಸ್ಯರು, ಕಲಾಪದ ಚಟುವಟಿಕೆಗಳಿಗೆ ನೆರವಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕಲಾಪದ ವರದಿಯ ವೀಕ್ಷಣೆಗೆ ಆಗಮಿಸುವ ಮಾಧ್ಯಮದವರಿಗೆ ಮತ್ತೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಂಡು ಬರಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಯೋಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಸಂವಿಧಾನ ಕುರಿತು ಚರ್ಚೆ
ಕಳೆದ ಅಧಿವೇಶನದಲ್ಲಿ ಸಂವಿಧಾನ ಕುರಿತಂತೆ ಎರಡು ದಿನಗಳ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಚರ್ಚೆಯಲ್ಲಿ 50 ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡು ಭಾರತೀಯ ಸಂವಿಧಾನದ ವಿವಿಧ ಮಜಲುಗಳತ್ತ ಬೆಳಕು ಚೆಲ್ಲಿದ್ದಾರೆ. ಸದಸ್ಯರ ಅಭಿಪ್ರಾಯಗಳಲ್ಲಿನ ಮುಖ್ಯಾಂಶಗಳನ್ನು ಪತ್ರ ರೂಪದಲ್ಲಿ ಕ್ರೋಢೀಕರಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದೇವೆ ಎಂದರು.
ಕೆವಾಡಿಯಾಕ್ಕೆ ಒಮ್ಮೆ ಭೇಟಿ ಕೊಡಿ
ಕೊರೋನಾ ಉಪಟಳ ಮುಗಿದೊಡನೆಯೇ ಎಲ್ಲರೂ ಕೆವಾಡಿಯಾಕ್ಕೆ ಒಮ್ಮೆ ಭೇಟಿ ಕೊಡಿ. ನರ್ಮದಾ ನದಿಯ ತಟದಲ್ಲಿ ನಿರ್ಮಿಸಿರುವ ಭಾರತದ ಉಕ್ಕಿನ ಮನುಷ್ಯ ಸರ್ದಾರ ಪಟೇಲ್ ಅವರ ಲೋಹದ ಏಕತಾ ಮೂರ್ತಿ, ಮಕ್ಕಳ ಪೋಷಕಾಂಶ ಉದ್ಯಾನ, ಆರೋಗ್ಯವನ, ಹೂಬನ, ಚಿಟ್ಟೆ ಉದ್ಯಾನ ಎಲ್ಲವನ್ನೂ ವರ್ಣಿಸಲು ಅಸಾಧ್ಯ. ಇದನ್ನು ಒಮ್ಮೆ ಕಂಡು ಕಣ್ತುಂಬಿಕೊಂಡರೆ ಮಾತ್ರ ಅರ್ಥವಾಗುತ್ತದೆ ಎಂದರು.
ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕುರಿತ 'ಪರಸ್ಪರ ಸಾಮರಸ್ಯ ಮತ್ತು ಸಮನ್ವತೆ ಸದೃಢ ಪ್ರಜಾಪ್ರಭುತ್ವಕ್ಕೆ ಬುನಾದಿ' ಎಂಬ ವಿಷಯ ಕುರಿತು ಕೆವಾಡಿಯಾದಲ್ಲಿ ನಡೆದ ಚರ್ಚೆ ಅತ್ಯಂತ ಉಪಯುಕ್ತವಾಗಿತ್ತು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಭಿಪ್ರಾಯಪಟ್ಟರು.