ಡಿಕೆಶಿಗೆ ಎದುರಾದ ಮತ್ತೊಂದು ಸಂಕಷ್ಟ; ಹಳೇ ಕೇಸ್ ರೀಓಪನ್
ಬೆಂಗಳೂರು, ಅ11: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಎದುರಿಸುತ್ತಿರುವ ಸಂಕಷ್ಟದ ಸರಮಾಲೆಗೆ ಮತ್ತೊಂದು ಸೇರ್ಪಡೆಯಾಗಿದೆ.
ಆರು ವರ್ಷದ ಹಿಂದೆ ಸಲ್ಲಿಸಲಾಗಿದ್ದ ಪಿಐಎಲ್, ಗುರುವಾರ (ಅ 10) ನ್ಯಾ.ಎ.ಎಸ್.ಓಕ್ ನೇತೃತ್ವದ ಪೀಠಕ್ಕೆ ವಿಚಾರಣೆಗೆ ಬಂದಿತ್ತು. "ಈ ಕೇಸಿಗೆ ಸಂಬಂಧಪಟ್ಟ ಮಾಹಿತಿಯನ್ನು ನವೆಂಬರ್ 30ರೊಳಗೆ ನೀಡಬೇಕೆಂದು" ಕೋರ್ಟ್, ಸರಕಾರಕ್ಕೆ ಸೂಚಿಸಿದೆ.
ಡಿಕೆಶಿಗಾಗಿ ಅಲ್ಲ, ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ; ಮೃತನ ಕುಟುಂಬಸ್ಥರ ಸ್ಪಷ್ಟನೆ
ಕನಕಪುರ ಮತ್ತು ಸಾತನೂರು ವ್ಯಾಪ್ತಿಯ ಅರಣ್ಯದಲ್ಲಿ ಅಕ್ರಮ ಕಲ್ಲು ಗಣಿಗಾಗರಿಕೆ ಮತ್ತು ಅರಣ್ಯ ಒತ್ತುವರಿ ಸಂಬಂಧಿಸಿದ ಕೇಸ್ ಇದಾಗಿದೆ. ಈಗ, ಈ ಕೇಸಿಗೆ ಮರುಜೀವ ಬಂದಿದ್ದು, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ವಿರುದ್ದದ ಪ್ರಕರಣ ಇದಾಗಿದೆ.
ಇಬ್ಬರು ಕನಕಪುರ ನಿವಾಸಿಗಳು 2013ರಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಹಾಕಿ, ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದರು. ಆ ಅರ್ಜಿ ಈಗ ವಿಚಾರಣಾ ಪೀಠಕ್ಕೆ ಬಂದಿದೆ.
ಅರ್ಜಿದಾರರ ವಾದವನ್ನು ಆಲಿಸಿದ ಪೀಠ, "ಅರಣ್ಯಾಧಿಕಾರಿಗಳು ಸಹಿತ, ತಪ್ಪಿತಸ್ಥರು ಎಂದು ಹೇಳಲಾಗುತ್ತಿರುವ ಎಲ್ಲರ ವಿರುದ್ದದ ಕ್ರಮಗಳ ಸಹಿತ, ಸಂಪೂರ್ಣ ವಿವರವನ್ನು ನವೆಂಬರ್ 30ರೊಳಗೆ ಕೋರ್ಟಿಗೆ ಸಲ್ಲಿಸಬೇಕು" ಎಂದು ಹೇಳಿ ವಿಚಾರಣೆಯನ್ನು ಡಿಸೆಂಬರ್ ಐದಕ್ಕೆ ಮುಂದೂಡಿದೆ.
ಆರು ವರ್ಷದ ಹಿಂದೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಡಿ.ಕೆ.ಶಿವಕುಮಾರ್, ಅವರ ಪತ್ನಿ ಉಷಾ, ಸಹೋದರ ಡಿ.ಕೆ.ಸುರೇಶ್ ಸೇರಿದಂತೆ 64ಜನ ಪ್ರತಿವಾದಿಗಳಿದ್ದಾರೆ.