ಲಂಚ..ಲಂಚ! ಬೊಮ್ಮಾಯಿ ಸರಕಾರದ ವಿರುದ್ದ ಪ್ರಧಾನಿಗೆ ಹೋಯಿತು ಇನ್ನೊಂದು ದೂರು
ಬೆಂಗಳೂರು, ನ 19: ಬಿಟ್ಕಾಯಿನ್ ಹಗರಣದ ನಂತರ, ಬಸವರಾಜ ಬೊಮ್ಮಾಯಿ ಸರಕಾರದ ವಿರುದ್ದ ಮತ್ತೊಂದು ದೂರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಹೋಗಿದೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಭ್ರಷ್ಟಾಚಾರದ ವಿರುದ್ದ ಪ್ರಧಾನಿಗೆ ಪತ್ರ ಬರೆದಿದೆ.
ಬಿಟ್ಕಾಯಿನ್ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಈಗ ಹೋಗಿರುವ ದೂರು ಬೊಮ್ಮಾಯಿ ಸರಕಾರಕ್ಕೆ ತೀರಾ ಇರಿಸುಮುರಿಸು ಉಂಟು ಮಾಡಿದೆ. ಸತತ ಮಳೆಯಿಂದ, ರಸ್ತೆಗಳೆಲ್ಲಾ ಕುಲಗೆಟ್ಟು ಹೋಗಿರುವ ಹೊತ್ತಿನಲ್ಲಿ ಗುತ್ತಿಗೆದಾರರ ದೂರು ಮಹತ್ವವನ್ನು ಪಡೆದುಕೊಂಡಿದೆ.
ಸಿದ್ದರಾಮಯ್ಯನವರ ದಿವಂಗತ ಪುತ್ರನ ಹೆಸರನ್ನು ಎಳೆದು ತಂದ ಬಿಜೆಪಿ
ಮಳೆಯಿಂದಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿಎಂ ಬೊಮ್ಮಾಯಿ ತುರ್ತು ಸಭೆಯನ್ನು ಇಂದು ಕರೆದಿದ್ದಾರೆ. ಗುತ್ತಿಗೆದಾರರ ಸಂಘ ನೀಡಿರುವ ದೂರಿನಲ್ಲಿ ಯಾವಯಾವ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಎಷ್ಟು ಪರ್ಸಂಟೇಜ್ ಕಮಿಷನ್ ನೀಡಬೇಕಾಗಿದೆ ಎನ್ನುವುದರ ಬಗ್ಗೆಯೂ ಪತ್ರದಲ್ಲಿ ವಿವರಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಮಂತ್ರಿ ಕಾರ್ಯಾಲಯ ಈ ದೂರನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನುವ ಮಾಹಿತಿಯಿದೆ.
ಪ್ರಮುಖ ಆರು ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸವಿವರವಾದ ಪತ್ರವನ್ನು ಪ್ರಧಾನಿ ಕಾರ್ಯಾಲಯಕ್ಕೆ ಗುತ್ತಿಗೆದಾರರು ಬರೆದಿದ್ದು, ಇಂದು ಮುಖ್ಯಮಂತ್ರಿಗಳು ಕರೆದಿರುವ ಸಭೆ, ಈ ಪತ್ರದ ಪರಿಣಾಮವೇ ಎನ್ನುವುದು ಚರ್ಚೆಯ ವಿಷಯವಾಗಿದೆ. "ಮಳೆ ಇಳಿದ ನಂತರ ಪ್ರವಾಹೋಪಾದಿಯಲ್ಲಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು, ನಾನೇ ಖುದ್ದಾಗಿ ಇದರ ಪರಿಶೀಲನೆ ನಡೆಸಲಿದ್ದೇನೆ"ಎಂದು ಸಿಎಂ ಬೊಮ್ಮಾಯಿಯವರು ಹೇಳಿದ್ದರು. ಗುತ್ತಿಗೆದಾರರ ಸಂಘದ ದೂರಿನ ಬಗ್ಗೆ ಪ್ರಜಾವಾಣಿ ಪತ್ರಿಕೆ ವಿಸ್ಕೃತ ವರದಿಯನ್ನು ಪ್ರಕಟಿಸಿದೆ.
ಬಿಟ್ಕಾಯಿನ್ ರಗಳೆ: ಕಾಂಗ್ರೆಸ್ ಪಟಾಕಿಗೆ ಬೆಂಕಿ ಹಚ್ಚಿದ ಬಿಜೆಪಿ?
ಸರಕಾರದ ವಿರುದ್ದ ಪ್ರಧಾನಿ ಮೋದಿಗೆ ಮತ್ತೊಂದು ದೂರು
ಲೋಕೋಪಯೋಗಿ, ಆರೋಗ್ಯ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ, ಸಣ್ಣ ನೀರಾವರಿ ಮತ್ತು ನಗರಾಭಿವೃದ್ದಿ ಇಲಾಖೆಯಲ್ಲಿನ ಲಂಚಾವತಾರದ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ನೇರವಾಗಿ ಪ್ರಧಾನಮಂತ್ರಿಯವರಿಗೆ ದೂರು ನೀಡಿದೆ. ಯಾವಯಾವ ಹಂತದಲ್ಲಿ ಎಷ್ಟು ಪರ್ಸೆಂಟೇಜ್ ಕಮಿಷನ್ ನೀಡಬೇಕು, ಯಾರ್ಯಾರಿಗೆ ಎಷ್ಟೆಷ್ಟು, ಯಾವಯಾವ ಸಂಸದರು, ಶಾಸಕರು, ಸ್ಥಳೀಯ ಪ್ರತಿನಿಧಿಗಳು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಗುಣಮಟ್ಟದ ಕೆಲಸ ನಡೆಸಲು ಹೇಗೆ ಸಾಧ್ಯ
ಮಂಜೂರಾಗುವ ಒಟ್ಟು ಹಣದಲ್ಲಿ ಶೇ. 40-45ರಷ್ಟು ಲಂಚ ನೀಡಬೇಕಾದಂತಹ ಅನಿವಾರ್ಯತೆ ಸೃಷ್ಟಿಯಾಗಿದೆ. ಟೆಂಡರ್ ಕರೆಯುವ ಮುನ್ನವೇ ಕಮಿಷನ್ ನೀಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ. ಇಲ್ಲೇ ಇಷ್ಟು ಹಣವನ್ನು ವ್ಯಯಿಸಿದರೆ, ಗುಣಮಟ್ಟದ ಕೆಲಸ ನಡೆಸಲು ಹೇಗೆ ಸಾಧ್ಯ ಎನ್ನುವ ಸತ್ಯವನ್ನೂ ಗುತ್ತಿಗೆದಾರರ ಸಂಘ ಪತ್ರದಲ್ಲಿ ವಿವರಿಸಿದೆ. 52 ಅಸೋಶಿಯೇಷನ್ ಗಳ ಸುಮಾರು ಒಂದು ಲಕ್ಷ ಗುತ್ತಿಗೆದಾರರ ಕೂಗು ಇದಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೂ ದೂರು
ಪ್ರಧಾನಿ ಮೋದಿಗೆ ಮಾತ್ರವಲ್ಲದೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೂ ದೂರು ಹೋಗಿದೆ. ರಾಜ್ಯದ ಹಿರಿಯ ಇಬ್ಬರು ಸಚಿವರು ಕಾಮಗಾರಿ ಆರಂಭಕ್ಕೂ ಮುನ್ನವೇ ಶೇಕಡಾ ಹದಿನೈದರಷ್ಟು ಲಂಚ ನೀಡುವುದನ್ನು ಕಡ್ಡಾಯ ಮಾಡಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದ್ದು, ಆ ಇಬ್ಬರು ಯಾರು ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಕಳೆದ ಎರಡು ವರ್ಷಗಳಿಂದ ಲಂಚದ ಹಾವಳಿ ಮತ್ತು ಪ್ರಮಾಣ ವಿಪರೀತವಾಗಿದೆ ಎಂದು ಗುತ್ತಿಗೆದಾರರು ಪತ್ರದಲ್ಲಿ ನೋವನ್ನು ತೋಡಿಕೊಂಡಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿ
"ಕೆಲವೊಂದು ಕಾಮಗಾರಿಯಲ್ಲಿ ಲಂಚದ ಪ್ರಮಾಣ ಶೇಕಡಾ ಐವತ್ತನ್ನೂ ಮೀರಿದೆ. 2019ರಿಂದ ಲಂಚದ ಪ್ರಮಾಣದಲ್ಲೂ ಏರಿಕೆಯಾಗಿದೆ. ಜನ ಪ್ರತಿನಿಧಿಗಳಿಗೇ ಇಷ್ಟು ಲಂಚವನ್ನು ಕೊಟ್ಟರೆ, ಗುಣಮಟ್ಟದ ಕೆಲಸವನ್ನು ಮಾಡಲು ಹೇಗೆ ಸಾಧ್ಯ. ಟೆಂಡರ್ ಕರೆಯುವ ಮುನ್ನ ಮತ್ತು ಪ್ರತೀ ಹಂತದಲ್ಲೂ ಲಂಚ ನೀಡುವ ಪರಿಸ್ಥಿತಿಯಿದೆ" ಎಂದು ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಯೊಬ್ಬರು ನೋವು ತೋಡಿಕೊಂಡಿದ್ದಾರೆ.