ಇತಿಹಾಸ ಸೇರಿದ ಯಡಿಯೂರಪ್ಪ ಆಡಳಿತ, ಅಭಿನಂದಿಸಿದ ಜೆಡಿಎಸ್
Recommended Video
ಬೆಂಗಳೂರು, ಆಗಸ್ಟ್ 26 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಒಂದು ತಿಂಗಳ ಆಡಳಿತ ಇತಿಹಾಸದ ಪುಟಗಳಿಗೆ ಸೇರಿದೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಕರ್ನಾಟಕ ಜೆಡಿಎಸ್ ವ್ಯಂಗ್ಯವಾಡಿದೆ.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಇಂದಿಗೆ ಒಂದು ತಿಂಗಳು ಕಳೆದಿದೆ.
ಮುಗಿದ ಖಾತೆ ಕಿತ್ತಾಟ: ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?
"ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಿ ಇಂದಿಗೆ ಒಂದು ತಿಂಗಳು. ಹಿಂದಿನ ಸಮ್ಮಿಶ್ರ ಸರ್ಕಾರದ ಮೇಲೆ ಕಾರಣ ಇಲ್ಲದೆ ಆರೋಪಗಳನ್ನು ಮಾಡುತ್ತಿದ್ದ ಇವರು ಇನ್ನೂ ಪೂರ್ಣ ಪ್ರಮಾಣದ ಸರ್ಕಾರ ರಚನೆ ಮಾಡಲು ಸಾಧ್ಯ ಆಗದೇ ಇರುವುದು ವೈಫಲ್ಯದ ಸಂಕೇತ" ಎಂದು ಜೆಡಿಎಸ್ ದೂರಿದೆ.
ಮೈತ್ರಿ ಸರ್ಕಾರ ಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದು ಸಿದ್ದರಾಮಯ್ಯ: ಜಗದೀಶ್ ಶೆಟ್ಟರ್
"ರಾಜ ಪ್ರಭುತ್ವದಲ್ಲಿ ಏಕ ಚಕ್ರಾಧಿಪತ್ಯದ ಆಡಳಿತವನ್ನು ನಾವು ಇತಿಹಾಸದಲ್ಲಿ ಓದಿದ್ದೆವು. ಬಿಜೆಪಿ ನಮ್ಮ ರಾಜ್ಯಕ್ಕೆ ಬಿ. ಎಸ್. ಯಡಿಯೂರಪ್ಪ ಅವರ ಏಕ ಚಕ್ರಾಧಿಪತ್ಯದ ಆಡಳಿತವನ್ನು ನೀಡುವ ಮೂಲಕ ಜನತಂತ್ರದಲ್ಲೂ ಇದು ಸಾಧ್ಯ ಎಂದು ರುಜುವಾತು ಮಾಡಿದೆ" ಎಂದು ಜೆಡಿಎಸ್ ಟೀಕಿಸಿದೆ....
ದೇವೇಗೌಡರು ತುಳಿದ ರಾಜಕಾರಣಿಗಳ ಪಟ್ಟಿ ನೀಡಿದ ಸಿದ್ದರಾಮಯ್ಯ
ಬಿಜೆಪಿಗೆ ಅಭಿನಂದನೆಗಳು
"ಬಿ. ಎಸ್. ಯಡಿಯೂರಪ್ಪ ಏಕ ಚಕ್ರಾಧಿಪತ್ಯದ ಆಡಳಿತವನ್ನು ನೀಡುವ ಮೂಲಕ ಜನತಂತ್ರದಲ್ಲೂ ಇದು ಸಾಧ್ಯ ಎಂದು ರುಜುವಾತು ಮಾಡಿದ್ದಾರೆ. ಇದಕ್ಕಾಗಿ ಬಿಜೆಪಿಗೆ ಮತ್ತು ಸಂಘ ಪರಿವಾರಕ್ಕೆ ಅಭಿನಂದನೆಗಳು. ಬಿ. ಎಸ್. ಯಡಿಯೂರಪ್ಪ ಒಂದು ತಿಂಗಳಿನಿಂದ ಏಕ ವ್ಯಕ್ತಿ ಆಡಳಿತದ ಮೂಲಕ ಸಮೃದ್ಧಿಯಾಗಿ ಊಟ ಮಾಡುತ್ತಿದ್ದಾರೆ" ಎಂದು ಜೆಡಿಎಸ್ ಟೀಕಿಸಿದೆ.
ಭೋಜನಕ್ಕೆ ಅಡೆ ತಡೆ ಮಾಡುವುದಿಲ್ಲ
"ಬಿಜೆಪಿ ಅಥವಾ ಸಂಘ ಪರಿವಾರ ಪೂರ್ಣ ಪ್ರಮಾಣದ ಸಚಿವ ಸಂಪುಟದ ರಚನೆ ಅಥವಾ ಖಾತೆಗಳ ಹಂಚಿಕೆ ಮುಖಾಂತರ ಅವರ ಸಮೃದ್ಧಿಯ ಭೋಜನಕ್ಕೆ ಅಡೆ ತಡೆ ಮಾಡುವುದಿಲ್ಲ ಎಂದು ನಂಬಿರುತ್ತೇವೆ" ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಲಾಗಿದೆ.
ಯಾರ ಹಂಗೂ ಇಲ್ಲದೆ ನಡೆಯುತ್ತಿದೆ
"ಕರ್ನಾಟಕದ ಸಮಸ್ಯೆಗಳು ಬಿಜೆಪಿ ಪಕ್ಷದ ಆದ್ಯತೆಗಳು ಆಗದೇ ಇರುವುದರಿಂದ ನಮ್ಮ ರಾಜ್ಯದಲ್ಲಿ ಏಕ ಚಕ್ರಾಧಿಪತ್ಯದ ಆಡಳಿತ ಮತ್ತು ಭ್ರಷ್ಟಾಚಾರದ ಮೂಲಕ ಮುಖ್ಯಮಂತ್ರಿಗಳ ಸಮೃದ್ಧ ಭೋಜನ ಯಾರ ಹಂಗೂ ಇಲ್ಲದೆ ನಡಿಯುತ್ತಿದೆ" ಎಂದು ಜೆಡಿಎಸ್ ದೂರಿದೆ.
ಯಡಿಯೂರಪ್ಪಗೆ ಅಭಿನಂದನೆಗಳು
"ಯಡಿಯೂರಪ್ಪ ಅವರ ಒಂದು ತಿಂಗಳ ಆಡಳಿತ ಇತಿಹಾಸದ ಪುಟಗಳಿಗೆ ಸೇರಿದೆ. ಅದಕ್ಕಾಗಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆಗಳು" ಎಂದು ಜೆಡಿಎಸ್ ಪಕ್ಷ ವ್ಯಂಗ್ಯವಾಡಿದೆ. ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.