ರಾಜ್ಯದಲ್ಲಿ ಮುಂದಿನ 5 ವರ್ಷದೊಳಗೆ ಒಂದು ಕೋಟಿ ಉದ್ಯೋಗ ಸೃಷ್ಟಿ; ಯಡಿಯೂರಪ್ಪ
ಬೆಂಗಳೂರು, ಜುಲೈ 15: "ಮಿಷನ್ ಯುವ ಸಮೃದ್ಧಿ" ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಒಳಗೆ ಒಂದು ಕೋಟಿ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮಿಷನ್ ಯುವಸಮೃದ್ಧಿ ಯೋಜನೆಯಡಿ ಪ್ರಾಯೋಗಿಕ ಯೋಜನೆ ಕೈಗೊಳ್ಳಲಾಗಿದೆ. ಈ ವಿಶೇಷ ಯೋಜನೆ ಸಲುವಾಗಿ ಕಾರ್ಯಪಡೆ ರೂಪಿಸಲಾಗಿದೆ. ಶೀಘ್ರವೇ ಕಾರ್ಯಪಡೆ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ "ವಿಶ್ವ ಯುವ ಕೌಶಲ" ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
KSPCB ಅಧ್ಯಕ್ಷ ಹುದ್ದೆ ಡೀಲ್: ಯಡಿಯೂರಪ್ಪ ವಿರುದ್ದ ಎಸಿಬಿಗೆ ದೂರು
"ದೇಶದಲ್ಲಿನ ಮಾನವ ಸಂಪನ್ಮೂಲದ 18-35 ವಯೋಮಾನದವರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 16-35ರ ವಯೋಮಾನದವರ ಜನಸಂಖ್ಯೆ 2.21 ಕೋಟಿ ಇದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಯುವಜನತೆ ಕೌಶಲ ಹೆಚ್ಚಿಸುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧಿಸಲು ಹಲವು ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ" ಎಂದು ತಿಳಿಸಿದರು.
"ವಿಶ್ವ ಯುವ ಕೌಶಲ" ದಿನಾಚರಣೆ ಅಂಗವಾಗಿ ಆಗಸ್ಟ್ 21ರವರೆಗೂ ತಿಂಗಳಿಡೀ ಕೌಶಲ ಅಭಿವೃದ್ಧಿ ಚಟುವಟಿಕೆಗಳನ್ನು ಸರ್ಕಾರ ನಡೆಸುವುದಾಗಿ ತಿಳಿಸಿದರು.
ರಾಜ್ಯಾದ್ಯಂತ ಯುವಜನತೆಯಲ್ಲಿ ಕೌಶಲ್ಯ ಹೆಚ್ಚಿಸಿ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಖಾಸಗಿ ಕ್ಷೇತ್ರದ ನಡುವೆ ಎಂಟು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಬೆಂಗಳೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಆಟೋಮೇಟಿವ್ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ಕೋರ್ಸ್ಗಳನ್ನು ಆಯ್ದ ಐಟಿಐಗಳಲ್ಲಿ ಆರಂಭಿಸಲು ಟೊಯೊಟೊ ಮೋಟಾರ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಯುವಕರಿಗೆ ತರಬೇತಿ ನೀಡಲು ವಿಪ್ರೊ, ನಾರಾಯಣ ಹೃದಯಾಲಯ, ಸೆನ್ಸೆರಾ ಟೆಕ್ನಾಲಜೀಸ್ ಎಲಿಸಿಯಾ, ಇಎಸ್ಡಿಎಂ, ಕ್ಲಸ್ಟರ್, ಆದಿತ್ಯಾ ಬಿರ್ಲಾ ಗ್ರೂಪ್, ಹೋಮ್ಲೇನ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
Recommended Video
"ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಾಜ್ಯದಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಗ್ರಾಮಮಟ್ಟದ ಒಕ್ಕೂಟದ ಮುಖಾಂತರ ಸಮುದಾಯ ಹೂಡಿಕೆ ನಿಧಿಯಾಗಿ 400 ಕೋಟಿ ರೂ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. 2021-22ನೇ ಸಾಲಿನಲ್ಲಿ 121 ಸ್ವಸಹಾಯ ಗುಂಪುಗಳಿಗೆ 149.03 ಕೋಟಿ ರೂ ಬಿಡುಗಡೆ ಮಾಡಲಾಗಿದೆ" ಎಂದು ಯಡಿಯೂರಪ್ಪ ತಿಳಿಸಿದರು.