ಚುನಾವಣೆಯ ದಿನ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ: ಇದು ಆಗುಹೋಗುವ ಮಾತಾ?
ಬೆಳಗಾವಿ, ಡಿ 5: ಸಮ್ಮಿಶ್ರ ಸರಕಾರ ಪತನಗೊಳ್ಳಲು ಪ್ರಮುಖ ಕಾರಣಕರ್ತರಾದ ರಮೇಶ್ ಜಾರಕಿಹೊಳಿ, ಉಪಚುನಾವಣೆಯ ಮತದಾನದ ದಿನ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಗೋಕಾಕ ಉಪಚುನಾವಣೆಯ ಬಿರುಸಿನ ಪ್ರಚಾರದ ನಂತರ, ತುಸು ನಿರಾಳರಾದಂತಿರುವ ಜಾರಕಿಹೊಳಿ, ತನ್ನ ಗೆಲುವಿನ ಬಗ್ಗೆ ವಿಶ್ವಾಸದ ಮಾತನ್ನಾಡಿದ್ದಾರೆ.
ಗೋಕಾಕ: ಜಾರಕಿಹೊಳಿ ಬ್ರದರ್ಸ್ 'ತಲ್ಲಣ'ಗೊಳ್ಳುವ ಗ್ರೌಂಡ್ ರಿಪೋರ್ಟ್!
ಗೋಕಾಕ್ ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಯಿಂದ ರಮೇಶ್, ಕಾಂಗ್ರೆಸ್ಸಿನಿಂದ ಲಖನ್ ಮತ್ತು ಜೆಡಿಎಸ್ಸಿನಿಂದ ಅಶೋಕ್ ಪೂಜಾರಿ ಕಣದಲ್ಲಿದ್ದಾರೆ.
ತಾನು ಮುಖ್ಯಮಂತ್ರಿಯಾಗಲು ರಮೇಶ್ ಕಾರಣ ಎಂದು ಹೊಗಳಿದ ಯಡಿಯೂರಪ್ಪ
ಉಪಚುನಾವಣೆಯ ಮತದಾನದ ದಿನವೇ ರಮೇಶ್, ತಮ್ಮ ಸಹೋದರರ ವಿರುದ್ದ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನವರ ಬಗ್ಗೆ, ನಾನು ಹಗುರವಾಗಿ ಮಾತನಾಡುವುದಿಲ್ಲ ಎಂದು ಅಚ್ಚರಿಕೆಯ ಹೇಳಿಕೆಯನ್ನೂ ರಮೇಶ್ ಜಾರಕಿಹೊಳಿ ನೀಡಿದ್ದಾರೆ.
ನನ್ನ ಸಹೋದರ ಲಖನ್, ಸತೀಶ್ ಮಾತನ್ನು ಕೇಳಿ ಚುನಾವಣೆಗೆ ಸ್ಪರ್ಧಿಸಿದ್ದಾನೆ
"ನನ್ನ ಸಹೋದರ ಲಖನ್, ಸತೀಶ್ ಜಾರಕಿಹೊಳಿ ಮಾತನ್ನು ಕೇಳಿ ಚುನಾವಣೆಗೆ ಸ್ಪರ್ಧಿಸಿದ್ದಾನೆ. ಅವನಿಗೆ ಸ್ವಂತ ಬುದ್ದಿ ಅನ್ನೋದು ಇಲ್ಲ. ಹರಾಮಿ ದುಡ್ಡು ಖಾಲಿಯಾಗ ಬೇಕು ಎನ್ನುವ ಕಾರಣಕ್ಕಾಗಿ ನನ್ನ ವಿರುದ್ದ ಸ್ಪರ್ಧಿಸಿದ್ದಾನೆ. ಅವನ ನೆರಳು ಸಹ ನನ್ನ ಜೊತೆ ಇರುವುದು ಬೇಡ" ಎಂದು ಸಹೋದರನ ವಿರುದ್ದ ಕಿಡಿಕಾರಿದ್ದಾರೆ.
ನನಗೂ ಡಿ.ಕೆ.ಶಿವಕುಮಾರ್ ಅವರಿಗೂ ವೈಯಕ್ತಿಕ ದ್ವೇಷ ಏನೂ ಇಲ್ಲ
"ನನಗೂ ಡಿ.ಕೆ.ಶಿವಕುಮಾರ್ ಅವರಿಗೂ ವೈಯಕ್ತಿಕ ದ್ವೇಷ ಏನೂ ಇಲ್ಲ. ಬೆಳಗಾವಿ ರಾಜಕೀಯಕ್ಕೆ ಮೂಗು ತೂರಿಸಲು ಬಂದಿದ್ದರಿಂದ, ನನಗೂ, ಅವರಿಗೂ, ದುಷ್ಮನಿ ಬೆಳೆಯಲು ಆರಂಭವಾಯಿತು. ಇಲ್ಲಿನ ರಾಜಕೀಯದ ತಂಟೆಗೆ ಬರದಿದ್ದರೇ, ಆತ, ನನಗೆ ಒಳ್ಳೆಯ ಸ್ನೇಹಿತ" ಎನ್ನುವ ಮಾತನ್ನು ರಮೇಶ್ ಜಾರಕಿಹೊಳಿ ಆಡಿದ್ದಾರೆ.
ಸಿದ್ದರಾಮಯ್ಯನವರನ್ನು ಬಿಜೆಪಿಗೆ ಕರೆತರುತ್ತೇನೆ
"ಸಿದ್ದರಾಮಯ್ಯನವರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಯಾಕೆಂದರೆ, ಮುಂದಿನ ದಿನಗಳಲ್ಲಿ ಅವರನ್ನೂ ಬಿಜೆಪಿಗೆ ಕರೆದುಕೊಂಡು ಬರುತ್ತೇನೆ" ಎನ್ನುವ ಅಚ್ಚರಿಯ ಹೇಳಿಕೆಯನ್ನು ನೀಡಿದ ಜಾರಕಿಹೊಳಿ, "ದಿನೇಶ್ ಗುಂಡೂರಾವ್ ಒಬ್ಬ ನಾಲಾಯಕ್" ಎಂದು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲಲು ಮಾತ್ರ ನಮಗೆ ಕಷ್ಟವಾಗಲಿದೆ
"ಉಪಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲಲು ಮಾತ್ರ ನಮಗೆ ಕಷ್ಟವಾಗಲಿದೆ" ಎಂದು ಹೇಳಿರುವ ಜಾರಕಿಹೊಳಿ, ಅದ್ಯಾವ ಕ್ಷೇತ್ರ ಎಂದು ಮಾತ್ರ ಹೇಳಲಿಲ್ಲ. "ಮುಂದಿನ ದಿನಗಳಲ್ಲಿ ಅಂಬಿ ರಾವ್ ಪಾಟೀಲ್ (ಅಳಿಯ) ಅವರನ್ನು ಸತೀಶ್ ಮತ್ತು ಲಖನ್ ವಿರುದ್ದ ಕಣಕ್ಕಿಳಿಸಲಿದ್ದೇನೆ" ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಕುತೂಹಲಕ್ಕೀಡು ಮಾಡಿದ ಕುಮಾರಸ್ವಾಮಿ ಹೇಳಿಕೆ
ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಪರಸ್ಪರ ಅಭ್ಯರ್ಥಿಗಳಾಗಿದ್ದು, ಇದರ ಹಿಂದೆ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆಯಾ ಎನ್ನುವ ಗುಸುಗುಸು ಸುದ್ದಿ ಬೇರೆ ಹರಿದಾಡುತ್ತಿದೆ. "ನಮ್ಮ ಅಭ್ಯರ್ಥಿ ಗೆದ್ದರೆ, ಯಾವ ಪಕ್ಷದ ಸರಕಾರವಿದ್ದರೂ, ಸಚಿವರಾಗುವುದು ಗ್ಯಾರಂಟಿ" ಎನ್ನುವ ಮಾತನ್ನು ಕುಮಾರಸ್ವಾಮಿ ಹೇಳಿರುವುದು ಕುತೂಹಲಕ್ಕೀಡು ಮಾಡಿದೆ.