ಅಂದು ತನ್ನ ಮರ್ಯಾದೆ ಉಳಿಸಿದ್ದ ಡಿಕೆಶಿಗೆ ಅಹ್ಮದ್ ಪಟೇಲ್ ಋಣ ಸಂದಾಯ ಮಾಡಿದ್ದು ಹೀಗೆ..
ಹಿರಿಯ ಕಾಂಗ್ರೆಸ್ ಮುಖಂಡ, ಸೋನಿಯಾ ಗಾಂಧಿ ಕುಟುಂಬದ ಮನೆ ಸದಸ್ಯರಂತಿದ್ದ ಅಹ್ಮದ್ ಪಟೇಲ್, ಇಂದು (ನ 25) ನಸುಕಿನಲ್ಲಿ, ಹರ್ಯಾಣದ ಗುರುಗ್ರಾಮದ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅಲ್ಲಿಗೆ, ಸೋನಿಯಾಗೆ ಮತ್ತು ಪಕ್ಷನಿಷ್ಠೆಗೆ ಹೆಸರಾದ ವ್ಯಕ್ತಿಯನ್ನು ಕಾಂಗ್ರೆಸ್ ಕಳೆದುಕೊಂಡಂತಾಗಿದೆ.
ತಂತ್ರಗಾರಿಕೆ ರೂಪಿಸುವಲ್ಲಿ ಹೆಸರುವಾಸಿಯಾಗಿದ್ದ ಅಹ್ಮದ್ ಪಟೇಲ್ ಮತ್ತು ಕರ್ನಾಟಕದ ಕಾಂಗ್ರೆಸ್ ಮುಖಂಡರ ನಡುವೆ ಉತ್ತಮ ಒಡನಾಟವಿತ್ತು. ಎಐಸಿಸಿ ಮಟ್ಟದಲ್ಲಿ ಏನಾದರೂ ಕೆಲಸವಾಗ ಬೇಕಿದ್ದರೆ, ಅದು ಅಹ್ಮದ್ ಪಟೇಲ್ ಮುಖಾಂತರವೇ ನಡೆಯಬೇಕಿತ್ತು.
ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಬೆಳೆದು ಬಂದ ಹಾದಿ
ಗುಜರಾತ್ ರಾಜ್ಯದ ಮೂರು ಸ್ಥಾನದ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಅಹ್ಮದ್ ಪಟೇಲ್ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಉತ್ತಮ ಒಡನಾಟ ಆರಂಭವಾಯಿತು. ಮೂರು ಸ್ಥಾನಕ್ಕೆ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರ ಆಯ್ಕೆ ಸಲೀಸಾಗಿತ್ತು. ಇನ್ನುಳಿದ ಒಂದು ಸ್ಥಾನಕ್ಕೆ ಅಹ್ಮದ್ ಪಟೇಲ್ ಸ್ಪರ್ಧಿಸಿದ್ದರು.
ಅಹ್ಮದ್ ಪಟೇಲ್ ಸೋಲಿಸುವುದನ್ನು ಅಮಿತ್ ಶಾ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಆಪರೇಶನ್ ಕಮಲದ ಭೀತಿಯಿಂದ ಗುಜರಾತಿನ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಎಐಸಿಸಿ, ಬಿಡದಿಯ ಈಗಲ್ಟನ್ ರೆಸಾರ್ಟಿಗೆ ಶಿಫ್ಟ್ ಮಾಡಿತ್ತು. ಇವರ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಗೆ ವಹಿಸಲಾಗಿತ್ತು. ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ಡಿಕೆಶಿ ನಿಭಾಯಿಸಿ ಹೈಕಮಾಂಡ್ ಮಟ್ಟದಲ್ಲಿ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದರು. ಆದರೆ..
ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ವಿಧಿವಶ
ಡಿಕೆಶಿ, ಅಹ್ಮದ್ ಪಟೇಲ್ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು
ಗುಜರಾತ್ ರಾಜಕೀಯದ ಸಮಯದಲ್ಲಿ ನಡೆದಿತ್ತು ಎಂದು ಹೇಳಲಾಗುತ್ತಿರುವ ಮನಸ್ತಾಪದಿಂದಾಗಿ ಅಹ್ಮದ್ ಪಟೇಲ್ ಅವರನ್ನು ಶತಾಯಗತಾಯು ಸೋಲಿಸಲೇ ಬೇಕೆನ್ನುವ ಜಿದ್ದಿಗೆ ಅಮಿತ್ ಶಾ ಬಿದ್ದಿದ್ದರು. ಗುಜರಾತ್ ಕಾಂಗ್ರೆಸ್ ಶಾಸಕರು ರೆಸಾರ್ಟಿನಲ್ಲಿದ್ದ ವೇಳೆ, ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸುವ ಪ್ರಯತ್ನವನ್ನೂ ಬಿಜೆಪಿ ಮಾಡಿದ್ದು ಗುಟ್ಟಾಗಿರಲಿಲ್ಲ. ಆದರೆ, ಇದ್ಯಾವುದಕ್ಕೂ ಜಗ್ಗದ ಬಂಡೆ ಡಿಕೆಶಿ, ಅಹ್ಮದ್ ಪಟೇಲ್ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.
ಡಿ.ಕೆ.ಶಿವಕುಮಾರ್ ಅವರ ಬಂಧನವಾಗಿ ಜೈಲು ಪಾಲಾದರು
ಅಂದು ತಾನು ತೆಗೆದುಕೊಂಡ ಗಟ್ಟಿ ನಿಲುವು ಮುಂದೆ ತನ್ನ ರಾಜಕೀಯ ಜೀವನಕ್ಕೇ ದೊಡ್ಡ ರಿಸ್ಕ್ ಆಗಲಿದೆ ಎನ್ನುವ ಊಹೆಯನ್ನು ಡಿಕೆಶಿ ಮಾಡಿಕೊಂಡಿರಲಿಕ್ಕಿಲ್ಲ. ಗುಜರಾತ್ ರಾಜ್ಯಸಭಾ ಚುನಾವಣೆಯ ನಂತರ, ಕೇಂದ್ರದ ವಿವಿಧ ತನಿಖಾ ದಳದಿಂದ ಒಂದಲ್ಲಾ ಒಂದು ಕುಣಿಕೆ ಆರಂಭವಾಗಿ, ಡಿ.ಕೆ.ಶಿವಕುಮಾರ್ ಅವರ ಬಂಧನವಾಗಿ ಜೈಲು ಪಾಲಾದರು. ಇದು, ಒಂದು ರೀತಿಯಲ್ಲಿ ಡಿಕೆಶಿಗೆ ಟರ್ನಿಂಗ್ ಪಾಯಿಂಟ್ ಆಗಿ ಪರಿಣಮಿಸಿತು ಎಂದೇ ವ್ಯಾಖ್ಯಾನಿಸಲಾಗಿತ್ತು.
ಅಹ್ಮದ್ ಪಟೇಲ್ ಅವರು ಸೋನಿಯಾ ಗಾಂಧಿ ಮನವೊಲಿಸುವಲ್ಲಿ ಯಶಸ್ವಿ
ಆ ವೇಳೆ, ಡಿಕೆಶಿಗೆ ಬೆನ್ನೆಲುಬಾಗಿ ನಿಂತಿದ್ದ ಇದೇ ಅಹ್ಮದ್ ಪಟೇಲ್. ರಾಜ್ಯ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ನಂತಿದ್ದ ಡಿಕೆಶಿ ಜೈಲಿಗೆ ಹೋಗಿದ್ದೇ ಪಕ್ಷಕ್ಕಾಗಿ ಎಂದು ಅಹ್ಮದ್ ಪಟೇಲ್ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಲಾರಂಭಿಸಿದರು. ಪಕ್ಷದ ಸೂಚನೆ ಮೇರೆಗೆ ಗುಜರಾತ್ ಶಾಸಕರನ್ನ ಡಿಕೆಶಿ ರಕ್ಷಿಸಿದ್ದರು. ತಮ್ಮ ರಾಜ್ಯಸಭಾ ಗೆಲುವಿಗಾಗಿ ಡಿಕೆಶಿ ಜೈಲಿಗೆ ಹೋದರು ಎಂದು ಅಹ್ಮದ್ ಪಟೇಲ್ ಅವರು ಸೋನಿಯಾ ಗಾಂಧಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
Recommended Video
ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಮೂಲಕ ಋಣ ಸಂದಾಯ ಮಾಡಿದ್ದ ಅಹ್ಮದ್ ಪಟೇಲ್
ಎಐಸಿಸಿ ಮಟ್ಟದಲ್ಲಿ ಹಲವು ಮುಖಂಡರಿಗೆ ಗಾಡ್ ಫಾದರ್ ನಂತಿದ್ದ ಅಹ್ಮದ್ ಪಟೇಲ್, ಡಿಕೆಶಿಗೂ ಆಸರೆಯಾಗಿ ನಿಂತರು. ಕೆಪಿಸಿಸಿ ಅಧ್ಯಕ್ಷ ಹುದ್ದೆ ಡಿ.ಕೆ.ಶಿವಕುಮಾರ್ ಅವರಿಗೆ ಒಲಿಯುವ ಹಿಂದೆ, ಅಹ್ಮದ್ ಪಟೇಲ್ ಪಾತ್ರ ಬಹಳ ಮಹತ್ವದ್ದು. ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಅವರ ಬಂಧನವಾದರೆ ಎನ್ನುವ ಮಾತು ಹೈಕಮಾಂಡ್ ಅಂಗಣದಲ್ಲಿ ಕೇಳಿ ಬರುತ್ತಿದ್ದ ಸಮಯದಲ್ಲೂ, ಅಹ್ಮದ್ ಪಟೇಲ್ ಗಟ್ಟಿಯಾಗಿ ಡಿಕೆಶಿ ಪರವಾಗಿ ನಿಲ್ಲುವ ಮೂಲಕ, ಅಂದು ತನ್ನ ಮರ್ಯಾದೆ ಉಳಿಸಿದ್ದ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಮೂಲಕ ಋಣ ಸಂದಾಯ ಮಾಡಿದ್ದರು.