ಯೋಗಿಯ ಸ್ವಚ್ಛತಾ ನಾಟಕಕ್ಕೆ ವೇದಿಕೆಯಾದ ತಾಜ್ ಮಹಲ್
ಆಗ್ರಾ, ಅಕ್ಟೋಬರ್ 26: ಉತ್ತರ ಪ್ರದೇಶ ಪ್ರವಾಸೋದ್ಯಮ ಕೈಪಿಡಿಯಿಂದಲೇ ತಾಜ್ ಮಹಲ್ ಜಾಗ ಕಳೆದುಕೊಂಡಿತ್ತು. ಇದಾದ ಬಳಿಕ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಎಲ್ಲಾ ಹಿನ್ನಲೆಯಲ್ಲಿ ಬಿಜೆಪಿ ಸರಕಾರ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರೀ ಟೀಕೆಗೆ ಗುರಿಯಾಗಿದ್ದರು.
ಭಾರತೀಯ ಕಾರ್ಮಿಕರ ಬೆವರು, ರಕ್ತದಿಂದ ತಾಜ್ ಮಹಲ್ ನಿರ್ಮಾಣ: ಯೋಗಿ
ಇದೀಗ ವಿವಾದಕ್ಕೆ ಕೊನೆ ಹಾಡುವ ಪ್ರಯತ್ನಕ್ಕೆ ಮುಂದಾಗಿರುವ ಯೋಗಿ ಆದಿತ್ಯನಾಥ್ ಇಂದು ತಾಜ್ ಮಹಲ್ ಗೆ ಭೇಟಿ ನೀಡಿದರು. ಇಲ್ಲಿನ ಪಶ್ಚಿಮ ದ್ವಾರದಲ್ಲಿ ಕೈಗವಸು ತೊಟ್ಟು ಬೇಸ್ ಬಾಲ್ ಟೊಪ್ಪಿ ಹಾಕಿಕೊಂಡು ಸ್ವಚ್ಛತಾ ಕಾರ್ಯ ನಡೆಸಿದರು.
ಫೋಟೋಗೆ ಪೊರಕೆ ಪೋಸ್
ತಾಜ್ ಮಹಲ್ ಮುಂದೆ ಯೋಗಿ ಆದಿತ್ಯನಾಥ್ ಸ್ವಚ್ಛ ಮಾಡಬೇಕಾಗಿದ್ದ ಜಾಗ ಬಿಟ್ಟು ಉಳಿದೆಲ್ಲಾ ಜಾಗಗಳನ್ನೂ ಕಾರ್ಮಿಕರು ಸ್ವಚ್ಛ ಮಾಡಿದ್ದರು. ಈ ಮೂಲಕ ಅವರ ಪ್ರದರ್ಶನಕ್ಕೆಂದೇ ಒಂದಷ್ಟು ಜಾಗದಲ್ಲಿ ಕಸಗಳನ್ನು ಹಾಗೇ ಬಿಡಲಾಗಿತ್ತು. ಇಲ್ಲಿ ಪೊರಕೆ ಹಿಡಿದು ಯೋಗಿ ಫೊಟೋಗೆ ಪೋಸ್ ನೀಡಿ ನಿರ್ಗಮಿಸಿದರು.
30 ನಿಮಷಗಳ ತಾಜ್ ಭೇಟಿ
ನಂತರ ತಾಜ್ ಮಹಲ್ ನಿಂದ ಆಗ್ರಾ ಕೋಟೆಯನ್ನು ಸಂಪರ್ಕಿಸುವ ಪ್ರವಾಸಿಗರ ಪಾದಾಚಾರಿ ಮಾರ್ಗದ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿದರು. ಇದಾದ ಬಳಿಕ ತಾಜ್ ಮಹಲ್ ನಿರ್ಮಾತೃ ಶಹಜಹಾನ್ ಮತ್ತು ಆತನ ಪ್ರಿಯತಮೆ ಮುಮ್ತಾಜ್ ಮಹಲ್ ಸಮಾಧಿಗಳ ಪಕ್ಕದಲ್ಲಿ ಯೋಗಿ ಆದಿತ್ಯನಾಥ್ ಅರ್ಧ ಗಂಟೆ ಸಮಯ ಕಳೆದರು. ಈ ಮೂಲಕ ತಾಜ್ ಮಹಲ್ ಗೆ ಭೇಟಿ ನೀಡಿದ ಉತ್ತರ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಗುರುತಿಸಿಕೊಂಡಿದ್ದಾರೆ.
ತಾಜ್ ಮಹಲ್ ಮತ್ತು ಯೋಗಿ
ಕಳೆದ ಮೇನಲ್ಲಿ ಆಗ್ರಾಗೆ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್ ತಾಜ್ ಮಹಲ್ ಗೆ ಭೇಟಿ ನೀಡಿರಲಿಲ್ಲ. ಜತೆಗೆ ವಿದೇಶಿ ಗಣ್ಯರು ಬಂದಾಗ ಉಡುಗೊರೆಯಾಗಿ ನೀಡಲಾಗುತ್ತಿದ್ದ ತಾಜ್ ಮಹಲ್ ಪ್ರತಿಕೃತಿಯೂ ಸೂಕ್ತವಾದುದುಲ್ಲ. ಇದು ಭಾರತದ ಸಂಸ್ಕೃತಿಯನ್ನು ಪರಿಚಯಿಸುವ ಸೂಕ್ತ ಉಡುಗೊರೆಯಲ್ಲ ಎಂದು ಯೋಗಿ ತಕರಾರು ತೆಗೆದಿದ್ದರು.
ಇದಾದ ಬಳಿಕ ವಿಶ್ವದ ಏಳು ಅಧ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಉತ್ತರ ಪ್ರದೇಶದ ಪ್ರವಾಸೋದ್ಯಮ ಕೈಪಿಡಿಯಿಂದಲೇ ಮಾಯವಾಗಿತ್ತು. ಜತೆಗೆ ಬಿಜೆಪಿ ಸಾಸಕ ಸಂಗೀತ್ ಸೋಮ್ ರಂಥವರು ತಾಜ್ ಮಹಲ್ ಕಟ್ಟಿದ್ದು 'ದಾಳಿಕೋರರು' ಎಂದು ಕಿಡಿಕಾರಿದ್ದರು.
ಟೀಕಾಕಾರರ ಬಾಯಿ ಮುಚ್ಚಿಸಲು ಯೋಗಿ ನಾಟಕ
ಇದಾದ ಬೆನ್ನಿಗೆ ಬಿಜೆಪಿ ಹಾಗೂ ಉತ್ತರ ಪ್ರದೇಶ ಸರಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಬಹುಭಾಷಾ ನಟ ಪ್ರಕಾಶ್ ರೈ ಸೇರಿದಂತೆ ಹಲವರು ಉತ್ತರ ಪ್ರದೇಶ ಸರಕಾರವನ್ನು ಝಾಡಿಸಿದ್ದರು.
ಈ ಎಲ್ಲಾ ಟೀಕೆಗಳಿಂದ ಕಂಗೆಟ್ಟಿದ್ದ ಯೋಗಿ ಆದಿತ್ಯನಾಥ್ ತಾಜ್ ಮಹಲನ್ನು 'ಭಾರತೀಯರ ಬೆವರು ಮತ್ತು ರಕ್ತದಿಂದ ಕಟ್ಟಲಾಗಿದೆ'. ತಾಜ್ ಮಹಲನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರವಾಸೋದ್ಯಮ ಕಾರಣಕ್ಕೆ ಆದಾಯದ ಮೂಲವೆಂಬ ಕಾರಣಕ್ಕಾದರೂ ನಾವು ತಾಜ್ ಮಹಲ್ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಮತ್ತು ತಾವು ತಾಜ್ ಮಹಲ್ ಗೆ ಭೇಟಿ ನಿಡುತ್ತಿರುವುದಾಗಿ ಹೇಳಿದ್ದರು.
ಇದೀಗ ಮಾಧ್ಯಮದ ಕ್ಯಾಮೆರಾದ ಎದುರು ತಾಜ್ ಮಹಲ್ ಮುಂದೆ ಕಸ ಗುಡಿಸಿ ಯೋಗಿ ಚಿತ್ರಗಳಲ್ಲಿ ಬಂಧಿಯಾಗಿದ್ದಾರೆ. ಈ ಮೂಲಕ ಟೀಕಾಕಾರರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.