ಸಮ್ಮಿಶ್ರ ಸರ್ಕಾರಕ್ಕೆ ಒಂದು ವರ್ಷ: ನಾಡಿಗೆ ಮುಖ್ಯಮಂತ್ರಿಗಳ ಸಂದೇಶ
ಸಮ್ಮಿಶ್ರ ಸರಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ಜನತೆಗೆ ಸಂದೇಶವನ್ನು ಕಳುಹಿಸಿದ್ದಾರೆ. ಅದರ ಸಾರಾಂಶ ಇಂತಿದೆ:
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹೊಂಗನಸಿನೊಂದಿಗೆ ನಮ್ಮ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುತ್ತಿದೆ. ಈ ಅವಧಿಯಲ್ಲಿ ನಾವು ಮಂಡಿಸಿದ ಎರಡು ಆಯವ್ಯಯಗಳು ನಮ್ಮ ಸರ್ಕಾರದ ಒಲವು, ನಿಲುವುಗಳು, ಸಾಗಬೇಕಾದ ಹಾದಿಯನ್ನು ಸ್ಪಷ್ಟಪಡಿಸಿವೆ.
ಈ ಅವಧಿಯಲ್ಲಿ ನಾವು ರೂಪಿಸಿರುವ ಕಾರ್ಯಕ್ರಮಗಳು ಜನರಲ್ಲಿ ಜನಪರ ಸರ್ಕಾರ, ರೈತರ ಪರವಾದ ಸರ್ಕಾರ, ಎಲ್ಲ ವರ್ಗದವರ ಆಶೋತ್ತರಗಳಿಗೆ ಸ್ಪಂದಿಸುವ ಸರ್ಕಾರ ಎಂಬ ಭಾವನೆ ಮೂಡಿಸಿರುವುದು ತೃಪ್ತಿ ತಂದಿದೆ. ಜೊತೆಗೆ ನಮ್ಮ ಮುಂದಿನ ನಡೆಗೆ ಸ್ಫೂರ್ತಿಯೂ ಆಗಿದೆ.
ಮೈತ್ರಿ ಸರಕಾರ ಕೆಡವುವ ಉತ್ಸಾಹದಲ್ಲಿದ್ದ ಯಡಿಯೂರಪ್ಪನವರಿಗೆ ಹೈಕಮಾಂಡ್ ಬ್ರೇಕ್!
ರೈತರ ನೋವಿಗೆ ಸ್ಪಂದಿಸಿದ ನಮ್ಮ ಮೈತ್ರಿ ಸರ್ಕಾರ ಈ ನಿಟ್ಟಿನಲ್ಲಿ ಕೆಲವು ಮಹತ್ವಪೂರ್ಣ ಹೆಜ್ಜೆಗಳನ್ನಿಟ್ಟಿದೆ. ಕೃಷಿ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ.
ನಾಳೆ ಸಂಜೆ ವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ: ಸದಾನಂದಗೌಡ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್ಲ ಅರ್ಹ ರೈತರಿಗೂ ಈ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಇಸ್ರೇಲ್ ಮಾದರಿ ಕೃಷಿ, ಸಾವಯವ ಕೃಷಿಗೆ ಒತ್ತು, ರೈತ ಸಲಹಾ ಸಮಿತಿ ಸ್ಥಾಪನೆ ಮತ್ತಿತರ ಉಪಕ್ರಮಗಳು ರೈತರಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನಗಳು.
ರೈತರ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುವ ಆಶಯ
ಮುಂದಿನ ದಿನಗಳಲ್ಲಿಯೂ ಇಂತಹ ಹಲವಾರು ಉಪಕ್ರಮಗಳ ಮೂಲಕ ರೈತರ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುವ ಆಶಯ ನಮ್ಮದು.
ಅಂತೆಯೇ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿ, ಬೆಂಗಳೂರು ನಗರ, ಎರಡನೇ ಹಂತದ ನಗರಗಳ ಅಭಿವೃದ್ಧಿ, ನಾಡಿನ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿ ಉತ್ತಮಪಡಿಸುವತ್ತ ಅಡಿಯಿಟ್ಟಿದ್ದೇವೆ.
ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ
ಶಾಲೆಗಳ ಮೂಲಸೌಕರ್ಯಕ್ಕೆ ಆದ್ಯತೆ, ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಆಶಾದಾಯಕ ಬೆಳವಣಿಗೆಯನ್ನೂ ಸಾಧಿಸಿದ್ದೇವೆ. ಕಡು ಬಡವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿದಿದೆ.
ಜನಪರ ಆಡಳಿತದ ಹೊಸ ಮಾದರಿ ಸೃಷ್ಟಿಸುವತ್ತ ಮುನ್ನಡೆದಿದ್ದೇವೆ
ಸಾಮಾಜಿಕ ವಲಯದಲ್ಲಿಯೂ ನಮ್ಮ ಕಳಕಳಿ, ಕಾರ್ಯಕ್ರಮಗಳ ರೂಪು ತಳೆದು ದಮನಿತರ ಬದುಕು ಹಸನುಗೊಳಿಸಲು ಮುಂದಾಗಿದೆ. ನಮ್ಮ ಮಿತ್ರ ಪಕ್ಷ ತನ್ನ ಆಡಳಿತಾವಧಿಯಲ್ಲಿ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಹಾಗೂ ಜನಪ್ರಿಯ ಯೋಜನೆಗಳನ್ನೂ ಸಹ ಮುಂದುವರೆಸಿಕೊಂಡು ಜನಪರ ಆಡಳಿತದ ಹೊಸ ಮಾದರಿ ಸೃಷ್ಟಿಸುವತ್ತ ಮುನ್ನಡೆದಿದ್ದೇವೆ.
ಪ್ರವಾಹ, ಭೂಕುಸಿತ ಹಾಗೂ ತೀವ್ರ ಬರದಂತಹ ವೈರುಧ್ಯ
ಪ್ರಕೃತಿ ಮಾತೆಯ ಮುನಿಸಿನಿಂದ ನಾಡು ಪ್ರವಾಹ, ಭೂಕುಸಿತ ಹಾಗೂ ತೀವ್ರ ಬರದಂತಹ ವೈರುಧ್ಯವನ್ನು ಈ ವರ್ಷ ನಮ್ಮ ನಾಡು ಎದುರಿಸಿದೆ. ಈ ಪರಿಸ್ಥಿತಿಯನ್ನು ನಮ್ಮ ಸರ್ಕಾರ, ಕೇಂದ್ರ - ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ನೆರವಿನೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಕಳೆದ ಎರಡು ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ನಂತರವೂ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕಲ್ಯಾಣ ಕರ್ನಾಟಕದ ಆಶಯ, ಸಾಕಾರಗೊಳಿಸೋಣ
ಈ ನಿಟ್ಟಿನಲ್ಲಿ ನಮ್ಮ ಸರ್ಕಾರವನ್ನು ಬೆಂಬಲಿಸಿ ಸಹಕರಿಸಿದ ನಾಡಿನ ಜನತೆಗೆ, ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ನನ್ನ ಮಾರ್ಗದರ್ಶಕರೂ ಆದ ನನ್ನ ತಂದೆ, ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ, ಮಿತ್ರ ಪಕ್ಷದ ನೇತಾರರಾದ ಶ್ರೀ ರಾಹುಲ್ ಗಾಂಧಿ, ಶ್ರೀ ಕೆ.ಸಿ. ವೇಣುಗೋಪಾಲ್, ಶ್ರೀ ಸಿದ್ದರಾಮಯ್ಯನವರಿಗೆ, ಎಲ್ಲ ಜನಪ್ರತಿನಿಧಿಗಳಿಗೆ ಹಾಗೂ ಎಲ್ಲ ಅಧಿಕಾರಿ ವೃಂದದವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮೆಲ್ಲರ ಸಹಕಾರ, ಸ್ಫೂರ್ತಿ ನಮ್ಮ ಸರ್ಕಾರದ ಮುಂದಿನ 4 ವರ್ಷಗಳ ಅವಧಿಯಲ್ಲಿ ಹೀಗೇ ಮುಂದುವರೆಯಲಿ. ನಾಡಿನ ಪ್ರಗತಿಗೆ ಕೈಜೋಡಿಸಿ ದುಡಿಯೋಣ. ಕಲ್ಯಾಣ ಕರ್ನಾಟಕದ ಆಶಯ, ಸಾಕಾರಗೊಳಿಸೋಣ. ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ , ಕರ್ನಾಟಕ ಸರ್ಕಾರ.