ಓಮಿಕ್ರಾನ್: ಸರಕಾರಕ್ಕೆ ವಾಟ್ಸಾಪ್ ನಲ್ಲಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿರುವ 10 ಸಲಹೆಗಳು
ಲಾಕ್ಡೌನ್ ಮಾಡುವ ಉದ್ದೇಶ ಸದ್ಯಕ್ಕಂತೂ ಇಲ್ಲ ಎಂದು ಸಚಿವರುಗಳು ಪದೇಪದೇ ಹೇಳುತ್ತಿದ್ದರೂ, ಸುದ್ದಿ ಮಾಧ್ಯಮಗಳ ಸತತ ಓಮ್ರಿಕಾನ್ ಸಂಬಂಧದ ಸುದ್ದಿಯಿಂದ ಜನರು ಭಯಭೀತರಾಗುತ್ತಿದ್ದಾರೆ.
"ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತದೆ, ಆದರೆ ಇದು ಮಾರಣಾಂತಿಕವಲ್ಲ. ಆಸ್ಪತ್ರೆಯ ಹೊರ ರೋಗಿಗಳ (ಒಪಿಡಿ) ವಿಭಾಗದಲ್ಲಿಯೇ ಅದಕ್ಕೆ ಚಿಕಿತ್ಸೆ ನೀಡಿ ಕಳುಹಿಸಬಹುದು. ಆ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಿ. ಐಸಿಯುಗಳ ಅಗತ್ಯ ಇರುವುದಿಲ್ಲ. ಇದು ದಕ್ಷಿಣ ಆಫ್ರಿಕಾದಲ್ಲಿ ಸಾಬೀತಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿರುವ ಸೌಮ್ಯ ಸ್ವಾಮಿನಾಥನ್ ಅವರು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಓಮಿಕ್ರಾನ್ ಭೀತಿ: ಆನ್ಲೈನ್ ತರಗತಿಯತ್ತ ಖಾಸಗಿ ಶೈಕ್ಷಣಿಕ ಸಂಸ್ಥೆಗಳು!
ಕರ್ನಾಟಕದಲ್ಲಿ ಓಮ್ರಿಕಾನ್ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ವಿಚಾರದಲ್ಲಿ ಮಹತ್ವದ ಸಭೆ ಇಂದು (ಜ 4) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆಯಲಿದೆ. ಹಾಗಾಗಿ, ಎಲ್ಲರ ಕಣ್ಣು ಈ ಸಭೆಯ ಮೇಲೆ ನೆಟ್ಟಿದೆ. ಜೀವದ ಜೊತೆಗೆ ಜೀವನವೂ ಮುಖ್ಯ ಎನ್ನುವ ನಿರ್ಧಾರಕ್ಕೆ ಸರಕಾರ ಬರುವ ಸಾಧ್ಯತೆಯಿದ್ದು, ಗುರುವಾರದ (ಜ 6) ಮುಂದಿನ ರೂಲ್ಸ್ ಬಗ್ಗೆ ಸ್ಪಷ್ಟತೆ ಸಿಗಬಹುದು.
ಸುದ್ದಿ ವಾಹಿನಿಗಳು ಸತತವಾಗಿ ಓಮಿಕ್ರಾನ್, ಕೊರೊನಾ ಸಂಬಂಧದ ಸುದ್ದಿಯನ್ನು ಪ್ರಸಾರ ಮಾಡುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ವಾಟ್ಸಾಪ್ ನಲ್ಲಿ ಸರಕಾರಕ್ಕೆ ಹತ್ತು ಸಲಹೆಗಳು ಮಿಂಚಿನ ವೇಗದಲ್ಲಿ ಹರಿದಾಡುತ್ತಿದೆ. ಅದು ಹೀಗಿದೆ:
ಸರಕಾರಕ್ಕೆ ಹೊಸ ತಲೆಬೇನೆ: ಓಮಿಕ್ರಾನ್, ಕೆಂಪು ಪಟ್ಟಿಗೆ ಬೆಂಗಳೂರು?
ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳನ್ನು ಸಜ್ಜುಗೊಳಿಸಿ
1. ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತದೆ. ಚಿಕಿತ್ಸೆಗಾಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳನ್ನು ಸಜ್ಜುಗೊಳಿಸಿ. ಜನರಲ್ಲಿ ಭರವಸೆ ಮೂಡಿಸಿ. ಭಯ ಪಡಬೇಡಿ ಎಂದು ಸಾರ್ವಜನಿಕರನ್ನು ಹುರಿದುಂಬಿಸಿ.
2. ಸುದ್ದಿ ಭಯೋತ್ಪಾದಕರ ಪ್ರಭಾವಕ್ಕೆ ಒಳಗಾಗಿ ಅವೈಜ್ಞಾನಿಕ ಲಾಕ್ ಡೌನ್ ಘೋಷಿಸಬೇಡಿ. ಲಾಕ್ ಡೌನ್ ಪರಿಣಾಮ ಓಮಿಕ್ರಾನ್ ಗಿಂತ ನೂರು ಪಟ್ಟು ದೊಡ್ಡದಾಗುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ.
ಲಾಕ್ ಡೌನ್ ಮಾಡಿದರೂ ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತದೆ
3. ಡೆಲ್ಟಾಗಿಂತ ಓಮಿಕ್ರಾನ್ ನಾಲ್ಕು ಪಟ್ಟು ಹೆಚ್ಚು ಹರಡುತ್ತದೆ. ಆದರೆ, ಒಳ ರೋಗಿಗಳ ಮತ್ತು ಸಾವಿನ ಸಂಖ್ಯೆ ಕನಿಷ್ಠವಾಗಿರುತ್ತದೆ.
4. ನೀವು ಎಷ್ಟೇ ಪ್ರಯತ್ನ ಪಟ್ಟರೂ, ಲಾಕ್ ಡೌನ್ ಮಾಡಿದರೂ ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತದೆ ಅಥವಾ ಈಗಾಗಲೇ ಭಾರತದಲ್ಲಿ ಹರಡಿಯಾಗಿದೆ. ಹಾಗಾಗಿ, ಲಾಕ್ ಡೌನ್ ಬೇಡ.
5. ಓಮಿಕ್ರಾನ್ ಹೆಸರಲ್ಲಿ ಇಲ್ಲಸಲ್ಲದ ತುರ್ತು ಯೋಜನೆಗಳನ್ನು (ಹತ್ತು ಸಾವಿರ ಬೆಡ್ ನ ಕೋವಿಡ್ ಚಿಕಿತ್ಸಾ ಕೇಂದ್ರ) ಜಾರಿಗೆ ತಂದು ಅದರ ಹೆಸರಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬೇಡಿ.
ಚುನಾವಣಾ ರ್ಯಾಲಿ, ಪಕ್ಷದ ರ್ಯಾಲಿಗಳನ್ನು ತಕ್ಷಣ ನಿಲ್ಲಿಸಿ
6. ಸುದ್ದಿ ಭಯೋತ್ಪಾದಕರು ಸೃಷ್ಟಿಸಿದ ಆತಂಕವನ್ನೇ ಅಸ್ತ್ರ ಮಾಡಿಕೊಂಡು ಖಾಸಗೀ ಆಸ್ಪತ್ರೆಗಳು ಜನರನ್ನು ದೋಚದಂತೆ ನೋಡಿಕೊಳ್ಳಿ.
7. ಜನರಲ್ಲಿ ಸಾಕಷ್ಟು ಜಾಗೃತೆ ಮೂಡಿಸಿ. ಶುಚಿತ್ವ ಕಾಪಾಡಲು ಹೇಳಿ.
8. ಚುನಾವಣಾ ರ್ಯಾಲಿ, ಪಕ್ಷದ ರ್ಯಾಲಿಗಳನ್ನು ತಕ್ಷಣ ನಿಲ್ಲಿಸಿ. ದೊಡ್ಡ-ದೊಡ್ಡ ಪ್ರಮಾಣದಲ್ಲಿ ಜನಗುಂಪು ಸೇರದಂತೆ ಅವರಲ್ಲಿ ಎಚ್ಚರಿಕೆ ಮೂಡಿಸಿ.
ವಿಜ್ಞಾನಿಗಳ ಪ್ರಕಾರ ಓಮಿಕ್ರಾನ್ ಕೋವಿಡ್ 19ರ ಮುಕ್ತಿ ಮಾರ್ಗ
9. ಸುಳ್ಳು-ಸುಳ್ಳೇ ಸುದ್ದಿ ಮಾಡಿ ಆತಂಕದ ಅಲೆ ಎಬ್ಬಿಸುತ್ತಿರುವ ಪ್ರತಿಯೊಂದು ಮಾಧ್ಯಮ ಸಂಸ್ಥೆ ಮೇಲೆ ಮೊಕದ್ದಮೆ ದಾಖಲು ಮಾಡಿ.
10. ಜಗತ್ತಿನ ಬಹುತೇಕ ವಿಜ್ಞಾನಿಗಳ ಪ್ರಕಾರ ಓಮಿಕ್ರಾನ್ ಕೋವಿಡ್ 19ರ ಮುಕ್ತಿ ಮಾರ್ಗ ಎಂದು ಹೇಳಿರುವುದನ್ನು ಗಮನಿಸಿ. ವೈಜ್ಞಾನಿಕವಾಗಿ ಯೋಚಿಸಿ, ಯೋಜನೆಗಳನ್ನು ಜಾರಿಗೆ ಗೊಳಿಸಿ.
Recommended Video