ಅಪಾರ್ಟ್ಗಳಲ್ಲಿ ಮೂವರಿಗೆ ಸೋಂಕು ಇದ್ದರೂ ಕ್ಲಸ್ಟರ್ ಮಾಡಲು ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 4: ಕೋವಿಡ್-19 ರೂಪಾಂತರಿ 'ಓಮಿಕ್ರಾನ್' ವೇಗವಾಗಿ ಹರಡುತ್ತದೆಯಾದರೂ ಸಹ ಅಪಾಯಕಾರಿ ಎಂಬುದು ಯಾವ ದೇಶದಲ್ಲಿಯೂ ಕಂಡುಬಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಓಮಿಕ್ರಾನ್ ವೇಗವಾಗಿ ಹರಡುತ್ತದೆ. ಆದರೆ, ಪರಿಣಾಮಕಾರಿ ಅಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ತೀವ್ರವಾಗಿ ಹರಡುತ್ತಿದ್ದರೂ ಆತಂಕ ಇಲ್ಲ. ಆದರೆ, ಓಮಿಕ್ರಾನ್ ಬಂದವರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಈ ಸಂಬಂಧ ಹೆಚ್ಚಿನ ಗಮನ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಓಮಿಕ್ರಾನ್ ಲಕ್ಷಣಗಳ ಬಗ್ಗೆ ಪ್ರಾಥಮಿಕ ವರದಿ ಬಂದಿದೆ. ಪೂರ್ಣ ಪ್ರಮಾಣದ ವರದಿಯನ್ನು ಪಡೆಯಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ, ಚಿಕಿತ್ಸೆಯ ಪದ್ಧತಿ ಹೇಗಿದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ. ಸದ್ಯ ಬೇರೆ ಬೇರೆ ದೇಶಗಳಲ್ಲಿ ಡೆಲ್ಟಾಗೆ ನೀಡುತ್ತಿರುವ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ. ನಮ್ಮಲ್ಲೂ ಅದೇ ಪದ್ಧತಿಯನ್ನು ಸದ್ಯಕ್ಕೆ ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ದಕ್ಷಿಣ ಆಫ್ರಿಕಾದಿಂದ ಬಂದ ಹತ್ತು ಜನನಾಪತ್ತೆ ವಿಚಾರ ಕುರಿತು ಮಾತನಾಡಿದ ಮುಖ್ಯಮಂತ್ರಿ, ಅವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ಮಾಹಿತಿ ಪಡ್ಕೊಳ್ಳುತ್ತೇನೆ. ಈ ಸಂಬಂಧ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ಮೂವರಿಗೆ ಸೋಂಕು ಬಂದರೂ ಕ್ಲಸ್ಟರ್
ಶಾಲಾ- ಕಾಲೇಜುಗಳು, ಹಾಸ್ಟೆಲ್ಗಳು ಮತ್ತು ಅಪಾರ್ಟ್ಮೆಂಟ್ಗಳನ್ನು ಕ್ಲಸ್ಟರ್ಗಳು ಎಂದು ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮೊದಲು ಅಪಾರ್ಟ್ಮೆಂಟ್ಗಳಲ್ಲಿ 10 ಮಂದಿಗೆ ಸೋಂಕು ಬಂದರೆ ಮಾತ್ರ ಕ್ಲಸ್ಟರ್ ಎಂದು ಗುರುತಿಸುವಂತೆ ಸೂಚಿಸಲಾಗುತ್ತಿತ್ತು. ಈಗ ಮೂವರಿಗೆ ಸೋಂಕು ಬಂದರೂ ಅದನ್ನು ಕ್ಲಸ್ಟರ್ ಎಂದು ಪರಿಗಣಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಸಲಾಗಿದೆ. ಅಲ್ಲ ಇರುವ ಎಲ್ಲರಿಗೂ ತಪಾಸಣೆ, ಸೂಕ್ತ ಚಿಕಿತ್ಸೆ ಒದಸಲಾಗುವುದು ಎಂದ ಹೇಳಿದರು.
ಆಪಾರ್ಟ್ಮೆಂಟ್ಗಳ ಕಾಮನ್ ಏರಿಯಾದಲ್ಲಿ ಎಲ್ಲ ನಿವಾಸಿಗಳು ಸೇರಿ ಸಭೆಗಳನ್ನು ಮಾಡುತ್ತಾರೆ. ಇನ್ನು ಮುಂದೆ ಅಲ್ಲಿ ಎರಡೂ ಡೋಸ್ ಲಸಿಕೆ ಪಡೆದವರು ಇದ್ದರೆ ಮಾತ್ರ ಭೇಟಿ ಮಾಡಬೇಕು, ಹೊರಗಿನ ವ್ಯಕ್ತಿಗಳು ಅಪಾರ್ಟ್ಮೆಂಟ್ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಶಾಲಾ-ಕಾಲೇಜುಗಳಿಗೆ ಬರುವಂತಹ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಎರಡು ಲಸಿಕೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿಯೇ ಅಧಿವೇಶನ:
ಡಿ.13ರಿಂದ ಆರಭವಾಗುವ ವಿಧಾನಮಂಡಲ ಅಧಿವೇಶನವನ್ನು ಈ ಬಾರಿ ಬೆಳಗಾವಿಯಲ್ಲಿಯೇ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂದು ನೌಕರರ ಸಂಘಟನೆಗಳು ಒತ್ತಾಯ ಮಾಡಿವೆ ಎಂಬ ಪ್ರಶ್ನೆಗೆ, ಅಂತಹ ಯಾವುದೇ ನಿರ್ಧಾರ ಇಲ್ಲ. ಬೆಳಗಾವಿಯಲ್ಲಿಯೇ ಅಧಿವೇಶನ ನಡೆಯುತ್ತದೆ ಎಂದು ಹೇಳಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಶೇಷ ಮುತುವರ್ಜಿ ವಹಿಸಲಾಗಿದೆ. ಸ್ಯಾನಿಟೈಜ್ ಮಾಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ವಿಧಾನಸಭಾಧ್ಯಕ್ಷರು ಮತ್ತು ವಿಧಾನ ಪರಿಷತ್ ಸಭಾಪತಿ ಅಧಿವೇಶನದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ಎರಡು ಡೋಸ್ ಲಸಿಕೆ ಪಡೆದರಿಗೆ ಮಾತ್ರ ಇಲ್ಲಿ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದರು.
ಗೃಹ ಸಚಿವರೇ ಸ್ಪಷ್ಟಪಡಿಸಿದ್ದಾರೆ:
ಪೊಲೀಸರ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಸ್ಪಷ್ಟನೆ ನೀಡಿದ್ದಾರೆ.
ಆರಗ ಜ್ಞಾನೇಂದ್ರ ಅವರು ಪೊಲೀಸರ ಕುರಿತು ಬಹಳ ಕಳಕಳ ಹೊಂದಿದ್ದಾರೆ. ಪೊಲೀಸ್ ಕಲ್ಯಾಣಕ್ಕೆ ಸಂಬಂಧಿಸಿದಂತೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಎಲ್ಲ ಪೊಲೀಸರ ಕುರಿತು ಹೇಳಿಕೆ ನೀಡಿಲ್ಲ. ಸ್ಥಳೀಯವಾಗಿ ಕೆಲವು ಲೋಪಗಳನ್ನು ಮಾಡಿರುವವರ ಕುರಿತು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.
Recommended Video