ಓಮಿಕ್ರಾನ್ ರೋಗಿ ಪರಾರಿ: ನಾಪತ್ತೆಯಾದ 10 ಪ್ರಯಾಣಿಕರ ಹುಡುಕಾಟ!
ಬೆಂಗಳೂರು, ಡಿಸೆಂಬರ್ 03: ಕರ್ನಾಟಕದಲ್ಲಿ ಕೊರೊನಾ ವೈರಸ್ನ ಓಮಿಕ್ರಾನ್ ರೂಪಾಂತರವು ವರದಿಯಾದ ಇಬ್ಬರ ಪೈಕಿ ಓರ್ವ ಪರಾರಿಯಾಗಿದ್ದಾನೆ ಎಂದು ಮಾಹಿತಿ ಲಭಿಸಿದೆ. ಖಾಸಗಿ ಲ್ಯಾಬ್ನಿಂದ ಕೋವಿಡ್ ನೆಗಟಿವ್ ವರದಿಯನ್ನು ಪಡೆದ ಬಳಿಕ ಈ ಓಮಿಕ್ರಾನ್ ಸೋಂಕಿತ ಪರಾರಿಯಾಗಿದ್ದಾನೆ ಎಂದು ಸರ್ಕಾರವು ಶುಕ್ರವಾರ ಮಾಹಿತಿ ನೀಡಿದೆ. ಇನ್ನು ಈ ನಡುವೆ ಹತ್ತು ಮಂದಿ ಪ್ರಯಾಣಿಕರು ಕೂಡಾ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದು, ಅವರ ಹುಡುಕಾಟವನ್ನು ನಡೆಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಕಂದಾಯ ಸಚಿವ ಆರ್ ಅಶೋಕ್ ಓಮಿಕ್ರಾನ್ ಬಗ್ಗೆ ಉನ್ನತ ಮಟ್ಟದ ಸಭೆಯ ಬಳಿಕ ಮಾತನಾಡಿ, "ಇಂದು ರಾತ್ರಿಯ ಒಳಗಡೆ ನಾಪತ್ತೆಯಾದ ಹತ್ತು ಮಂದಿಯನ್ನು ಪತ್ತೆ ಹಚ್ಚಿ ಅವರ ಕೋವಿಡ್ ಪರೀಕ್ಷೆಯನ್ನು ನಡೆಸಬೇಕು. ಕೋವಿಡ್ ಪರೀಕ್ಷೆ ನಡೆಸಿ ಅದರ ವರದಿ ಬರುವವರೆಗೂ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ ನೀಡಲಾಗದು," ಎಂದು ತಿಳಿಸಿದ್ದಾರೆ.
ಓಮಿಕ್ರಾನ್ ತೀವ್ರತೆ ಕಡಿಮೆಯಾಗುವ ಸಾಧ್ಯತೆ: ಆರೋಗ್ಯ ಸಚಿವಾಲಯ
ಓಮಿಕ್ರಾನ್ ಸೋಂಕು ಕಾಣಿಸಿಕೊಂಡ 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆಯೊಬ್ಬರು ಈಗ ಪರಾರಿಯಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಆಗಮಿಸಿದ್ದ ಸುಮಾರು 57 ಇತರರನ್ನು ಸಹ ಪರೀಕ್ಷಿಸಲಾಗಿದೆ. ಅವರೆಲ್ಲರ ವರದಿಯು ನೆಗೆಟಿವ್ ಆಗಿದೆ. ಇನ್ನು ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿರುವ ಹತ್ತು ಮಂದಿ ತಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರ ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿಯೂ ಲಭ್ಯವಾಗಿದೆ.
ಈ ಬಗ್ಗೆ ಅಧಿಕ ಮಾಹಿತಿ ನೀಡಿದ ಕರ್ನಾಟಕ ಕಂದಾಯ ಸಚಿವ ಆರ್ ಅಶೋಕ್, "ಓರ್ವ ಓಮಿಕ್ರಾನ್ ರೋಗಿಗೆ ಕೋವಿಡ್ ನೆಗೆಟಿವ್ ವರದಿ ಬಂದ ಬಳಿಕವೂ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಆದ್ದರಿಂದ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕಾಗಿದೆ," ಎಂದು ತಿಳಿಸಿದರು. ಈ ಪರಾರಿಯಾದ ವ್ಯಕ್ತಿಯು ನವೆಂಬರ್ 20 ರಂದು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದರು. ಬಳಿಕ ಏಳು ದಿನಗಳ ನಂತರ ದುಬೈಗೆ ತೆರಳಿದ್ದರು.
ಹೊಟೇಲ್ನಲ್ಲಿದ್ದ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ
"ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಶಾಂಗ್ರಿ-ಲಾ ಹೋಟೆಲ್ನಲ್ಲಿ ಏನು ತಪ್ಪು ನಡೆದಿದೆ ಎಂಬುವುದನ್ನು ಪೊಲೀಸರು ತನಿಖೆ ನಡೆಸುತ್ತಾರೆ. ಅಲ್ಲಿದ್ದ ವ್ಯಕ್ತಿಯು ಪರಾರಿ ಆಗಿದ್ದಾನೆ," ಎಂದು ಕರ್ನಾಟಕ ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ಇನ್ನು ಓಮಿಕ್ರಾನ್ ಪತ್ತೆಯಾದ 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆಯು ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾನೆ. ಭಾರತಕ್ಕೆ ಆಗಮಿಸಿದ ದಿನ ಹೋಟೆಲ್ನಲ್ಲಿ ಇದ್ದನು. ಬಳಿಕ ಕೋವಿಡ್ ಇರುವುದು ದೃಢಪಟ್ಟಿದೆ. ಆ ಬಳಿಕ ಕೋವಿಡ್ ನೆಗೆಟಿವ್ ಕೂಡಾ ವರದಿ ಬಂದಿದೆ.
ಮದುವೆಗೆ 500 ಜನ ಮಾತ್ರ, ನೈಟ್ ಕರ್ಫ್ಯೂ ಇಲ್ಲ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ
ಸರ್ಕಾರಿ ವೈದ್ಯರು ಹೋಟೆಲ್ಗೆ ಭೇಟಿ ಮಾಡಿದಾಗ, ರೋಗಲಕ್ಷಣಗಳಿಲ್ಲದಿರುವುದು ಕಂಡುಬಂದಿತು. ಆದ್ದರಿಂದ ಪ್ರತ್ಯೇಕವಾಗಿ ಇರಿಸಲಾಗಿತ್ತು. ದಕ್ಷಿಣ ಆಫ್ರಿಕಾದಂತಹ ಅಪಾಯದ ರಾಷ್ಟ್ರ ಎಂದು ಗೊತ್ತುಪಡಿಸಿದ ರಾಷ್ಟ್ರಗಳಲ್ಲಿ ಒಂದಾದ ಕಾರಣ, ಮಾದರಿಗಳನ್ನು ಮತ್ತೆ ಸಂಗ್ರಹ ಮಾಡಿ ನವೆಂಬರ್ 22 ರಂದು ಜಿನೋಮ್ ಸೀಕ್ವೆಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದಿದ್ದ 24 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ನೆಗೆಟಿವ್ ಎಂದು ಕಂಡುಬಂದಿದೆ. ಅಧಿಕಾರಿಗಳನ್ನು ಎರಡನೇ ಸಂಪರ್ಕವನ್ನು ಕೂಡಾ ಪರೀಕ್ಷೆಗೆ ಒಳಪಡಿಸಿದ್ದಾರೆ.
"ಸಭೆಯಲ್ಲಿ ಸಿಎಂ, ಅಧಿಕಾರಿಗಳು ಮತ್ತು ಸಚಿವರ ಜೊತೆ ಸುಧೀರ್ಘ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವಿಶ್ವದಲ್ಲಿ ಈವರೆಗೆ 400 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವುದರಿಂದ ಫೋಷಕರಿಗೆ ಎರಡು ಡೋಸ್ ಆಗಿದ್ದರೆ ಮಾತ್ರ ಅವರ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ಬರಲು ಅವಕಾಶ ನೀಡಲಾಗುತ್ತದೆ. ಯಾವುದೇ ಶಾಲೆಯಲ್ಲಿ ಸಮಾರಂಭ ಮಾಡುವಂತಿಲ್ಲ. ಜೊತೆಗೆ ಮಾಲ್, ಸಿನಿಮಾ ಮಂದಿರಗಳಿಗೆ ಎರಡು ಡೋಸ್ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ" ಎಂದು ಕೂಡಾ ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
Recommended Video