ಜೈಲು ಪಾಲಾದ ಕೂಡಲೇ ವಿಧಾನಸೌಧದ ಡಿಕೆಶಿ ಕೊಠಡಿ ಯಾರಿಗೂ ಬೇಡವಾಯಿತೇ?
ಜನವರಿ 4, 2014, ಕಾಂಗ್ರೆಸ್ಸಿನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿ, ಇಂಧನ ಖಾತೆ ಅವರಿಗೆ ಹಂಚಿಕೆಯಾದ ದಿನ. ಮೇ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿತ್ತು. ಆದರೂ, ಡಿಕೆಶಿಗೆ ಸಚಿವ ಸ್ಥಾನ ದಕ್ಕಿದ್ದು ಸುಮಾರು ಏಳು ತಿಂಗಳ ನಂತರ.
ಸಚಿವರಾದ ಕೂಡಲೇ, ಅವರಿಗೊಂದು ಕೊಠಡಿ ವಿಧಾನಸೌಧದಲ್ಲಿ ಹಂಚಿಕೆಯಾಗಬೇಕಲ್ಲವೇ. ಅದರಂತೇ, ಅವರಿಗೊಂದು ಕೊಠಡಿ ನಿಗದಿ ಮಾಡಲಾಗಿತ್ತು. ಆದರೆ, ನಿಗದಿಯಾದ ಕೊಠಡಿಯನ್ನು ಬಳಸಲು ಡಿಕೆಶಿ ಒಪ್ಪಿಕೊಂಡಿರಲಿಲ್ಲ. ಕಾರಣ, ವಾಸ್ತು ಸರಿಯಿಲ್ಲ ಎಂದು.
ತನಗೆ ನಿಗದಿಯಾದ ಕೊಠಡಿಯನ್ನು ಪ್ರವೇಶಿಸದೇ, ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 340, 341ಕ್ಕೆ ಇಂಧನ ಸಚಿವಾಲಯದ ಕಚೇರಿಯನ್ನು ಡಿಕೆಶಿ ಶಿಫ್ಟ್ ಮಾಡಿಸಿಕೊಂಡರು. ಅದೇ ಕೊಠಡಿ ಯಾಕೆ ಆಯ್ಕೆ ಮಾಡಿಕೊಂಡರು ಅಂದರೆ, ಅದು ಪಕ್ಕಾ ವಾಸ್ತುಪ್ರಕಾರ ಮತ್ತು ಸೂರ್ಯನ (ಪೂರ್ವ) ಬಾಗಿಲು ಇರುವ ರೂಂ.
ಡಿಕೆಶಿ ತಾಯಿ ಭೇಟಿ ಮಾಡಿ ಧೈರ್ಯ ತುಂಬಿದ ಕುಮಾರಸ್ವಾಮಿ
ಇಷ್ಟೆಲ್ಲಾ ಪೀಠಿಕೆ ಏನಕ್ಕೆಂದರೆ, ಇಷ್ಟು ದೇವರು, ವಾಸ್ತು ನಂಬುವ ಡಿ.ಕೆ.ಶಿವಕುಮಾರ್ ಅವರು ಬಳಸಿದ್ದ ಕೊಠಡಿಯಲ್ಲಿ ಏನಾದರೂ ದೋಷವಿರಲು ಸಾಧ್ಯವೇ? ಆದರೆ, ಹಾಲೀ ಕೆಲವು ಸಚಿವರುಗಳು, ಡಿಕೆಶಿ ಬಳಸಿದ ಕೊಠಡಿ ನಮಗೆ ಬೇಡವೇ ಬೇಡ ಎನ್ನುತ್ತಿದ್ದಾರೆ ಎನ್ನುವ ಸುದ್ದಿಯಿದೆ.
ಸಚಿವರು ಅದೆಷ್ಟು ನಂಬಿಕೆಯ ಹಿಂದೆ ಬಿದ್ದಿದ್ದಾರೆ
ನಮ್ಮ ಜನಪ್ರತಿನಿಧಿಗಳು, ಸಚಿವರು, ಅದೆಷ್ಟು ನಂಬಿಕೆಯ ಹಿಂದೆ ಬಿದ್ದಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆಯಲ್ಲವೇ? ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜೈಲು ಪಾಲಾಗಿರುವ ಡಿ,ಕೆ,ಶಿವಕುಮಾರ್ ಮತ್ತು ಬಿಜೆಪಿ ಮುಖಂಡರ ನಡುವೆ, ಆರೋಪ, ಪ್ರತ್ಯಾರೋಪಗಳ ಮಹಾಪೂರವೇ ಹರಿದು ಬರುತ್ತಿದೆ. ಇವೆಲ್ಲದರ ನಡುವೆ, ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದ ಡಿಕೆಶಿಯವರ ಕೊಠಡಿಯನ್ನು ಬಳಸಲು, ಯಾವ ಸಚಿವರೂ ತಯಾರಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬೃಹತ್ ನೀರಾವರಿ ಖಾತೆಯ ಸಚಿವರಾಗಿದ್ದಾಗ ಡಿ.ಕೆ.ಶಿವಕುಮಾರ್
ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಬೃಹತ್ ನೀರಾವರಿ ಖಾತೆಯ ಸಚಿವರಾಗಿದ್ದಾಗಲೂ ಡಿ.ಕೆ.ಶಿವಕುಮಾರ್ ಬಳಸುತ್ತಿದ್ದದ್ದು, ಮೂರನೇ ಮಹಡಿಯಲ್ಲಿರುವ ಇದೇ ಕೊಠಡಿಯನ್ನು. ಯಾಕೆಂದರೆ, ಡಿಕೆಶಿ ಅಷ್ಟು ದೇವರ ಮೇಲೆ ನಂಬಿಕೆಯಿದ್ದವರು. ಹಾಗಿದ್ದರೂ, ಅವರು ಬಳಸುತ್ತಿದ್ದ ಕೊಠಡಿ ಬಳಸಲು, ಬಿಜೆಪಿಯವರು ಹಿಂದೇಟು ಹಾಕುತ್ತಿದ್ದಾರೆಂದರೆ, ಇವರಿಗಿರುವ ಭಯ ಯಾವ ಕಾರಣಕ್ಕೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಡಿ.ಕೆ.ಶಿವಕುಮಾರ್ ಬಂಧನಕ್ಕೆ 'ಒಕ್ಕಲಿಗ' ಟಚ್ ಕೊಟ್ಟ ಗೌಡ್ರ ಕುಟುಂಬ!
ಈ ಕೊಠಡಿ ಪಡೆಯಲು ಡಿಕೆಶಿ ಪಟ್ಟ ಸಾಹಸ ಅಷ್ಟಿಷ್ಟಲ್ಲ
ಇನ್ನೊಂದು ವಿಚಾರವೇನಂದರೆ, ಈ ಕೊಠಡಿ ಪಡೆಯಲು ಡಿಕೆಶಿ ಪಟ್ಟಿದ್ದ ಸಾಹಸ ಅಷ್ಟಿಷ್ಟಲ್ಲ. ಸಿದ್ದರಾಮಯ್ಯನವರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರಿಗೆ ಹಂಚಿಕೆಯಾಗಿದ್ದ ಕೊಠಡಿಯದು. ಡಿಕೆಶಿ ಇದನ್ನು ತನ್ನದಾಗಿಸಿಕೊಂಡಿದ್ದರು. ಈ ವಿಚಾರದಲ್ಲಿ ಅಂದು ವಿಧಾನಸೌಧದಲ್ಲಿ ದೊಡ್ಡ ಡ್ರಾಮಾವೇ ನಡೆದು ಹೋಗಿತ್ತು.
ಅಶೋಕ್, ಶ್ರೀರಾಮುಲು ಅವರ ಕೊಠಡಿ ಪ್ರವೇಶ
ಯಡಿಯೂರಪ್ಪ ನೇತೃತ್ವದ ಸರಕಾರ ಈಗ ಅಧಿಕಾರಕ್ಕೆ ಬಂದಿದೆ. ಸಚಿವರುಗಳಿಗೆ ಕೊಠಡಿ ಹಂಚಿಕೆಯಾಗಿದೆ. ಕೆಲವರು ಅದ್ದೂರಿಯಾಗಿ, ಇನ್ನು ಕೆಲವರು ಸರಳವಾಗಿ ಕೊಠಡಿ ಪ್ರವೇಶ ಮಾಡಿದ್ದಾರೆ. ಎರಡ್ಮೂರು ದಿನಗಳ ಕೆಳಗೆ, ಸಚಿವ ಅಶೋಕ್, ಶ್ರೀರಾಮುಲು ಅವರ ಕೊಠಡಿ ಪ್ರವೇಶವಾಗಿದೆ.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್
ವಾಸ್ತು, ಮೂಲೆ, ಶಾಸ್ತ್ರ ನೋಡುವುದರಲ್ಲಿ ಡಿ.ಕೆ.ಶಿವಕುಮಾರ್ ಏನೂ ಹಿಂದೆ ಬಿದ್ದಿರಲಿಲ್ಲ. ಆದರೆ, ಅವರು ಜೈಲು ಪಾಲಾದರು ಎನ್ನುವ ಕಾರಣಕ್ಕಾಗಿಯೇ ಏನೋ ಅವರು ಬಳಸಿದ ಕೊಠಡಿಯನ್ನು ಸಚಿವರುಗಳು ಬೇಡ ಎನ್ನುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಈ, ಕೊಠಡಿಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಅವರಿಗೆ ನೀಡಲಾಗಿದೆ.