ವಿಧಾನಸೌಧದ ಕಚೇರಿ ಪಡೆಯುವಲ್ಲೂ ನೂತನ ಸಚಿವರ ರಾಜಕೀಯ ಜಿದ್ದು
ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ನೂತನವಾಗಿ ಸಚಿವರಾಗಿ ಆಯ್ಕೆಯಾಗಿರುವ ಸಿ.ಪಿ.ಯೋಗೇಶ್ವರ್ ಅವರನ್ನು 'ಭಗೀರಥ' ಎಂದು ಕರೆಯುವುದುಂಟು. ಅದೇ ರೀತಿ, ಪಟ್ಟು ಬಿಡದೇ ಸಚಿವ ಸ್ಥಾನವನ್ನು ಪಡೆಯುವಲ್ಲೂ ಅವರು ಯಶಸ್ವಿಯಾದರು.
ಅವರಿಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಸ್ವಪಕ್ಷೀಯರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಅದೆಲ್ಲಾ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಆಡಿದ ರಾಜಕೀಯ ಮುಂದೆ ಯಾವುದೂ ವರ್ಕೌಟ್ ಆಗಿರಲಿಲ್ಲ.
ಸಿಪಿ ಯೋಗೇಶ್ವರ್ಗೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಈ ಹಿಂದೆ, ರಮೇಶ್ ಜಾರಕಿಹೊಳಿ ಸಚಿವರಾಗಿದ್ದಾಗ ಜಲಸಂಪನ್ಮೂಲ ಖಾತೆಯೇ ಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಪಟ್ಟು ಹಿಡಿದು ಆ ಖಾತೆಯನ್ನು ಪಡೆದುಕೊಂಡಿದ್ದರು. ಅದಕ್ಕೆ ಕಾರಣ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ವೇಳೆ ಆ ಖಾತೆಯನ್ನು ಡಿ.ಕೆ.ಶಿವಕುಮಾರ್ ನಿಭಾಯಿಸಿದ್ದದ್ದು.
ರೈತರ ಪ್ರತಿಭಟನೆಗೆ ಸಚಿವ ಸಿಪಿ ಯೋಗೇಶ್ವರ್ ಖಡಕ್ ಎಚ್ಚರಿಕೆ
ಈಗ, ಸಣ್ಣ ನೀರಾವರಿ ಖಾತೆಯ ಸಚಿವ ಯೋಗೇಶ್ವರ್ ಸರದಿ. ವಿಧಾನಸೌಧದ ತಮ್ಮ ಕೊಠಡಿಗೆ ಅವರು ಪೂಜೆ ಮಾಡಿ ಪ್ರವೇಶಿಸಿದ್ದಾರೆ. ಈ ಕೊಠಡಿಯನ್ನೂ ಅವರು ಒತ್ತಡ ಹಾಕಿ ಪಡೆದುಕೊಂಡರು ಎನ್ನುವ ಮಾಹಿತಿಯಿದೆ.
ಡಿ.ಕೆ.ಶಿವಕುಮಾರ್ ವಿಧಾನಸೌಧದದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿ
ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಯನ್ನೇ ಯೋಗೇಶ್ವರ್ ಪಡೆದುಕೊಂಡಿದ್ದಾರೆ. ಮೂರನೇ ಮಹಡಿಯಲ್ಲಿರುವ ಈ ಕೊಠಡಿಯನ್ನು ಯೋಗೇಶ್ವರ್ ಪಡೆದಿರುವುದು ಜಿದ್ದಿಗಾಗಿಯೋ ಅಥವಾ ವಾಸ್ತುವಿಗಾಗಿಯೋ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ರಮೇಶ್ ಜಾರಕಿಹೊಳಿ ಸಲಹೆ
ಯೋಗೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ರಾಜಕೀಯ ಜಿದ್ದು ಇಂದು ನಿನ್ನೆಯದಲ್ಲ. ರಾಜ್ಯ ರಾಜಕಾರಣದಲ್ಲಿ ಇವರಿಬ್ಬರ ನಡುವಿನ ಸಂಬಂಧ ಹಾವು-ಮುಂಗುಸಿಯಂತೆ. ಡಿಕೆಶಿಯವರ ಇನ್ನೋರ್ವ ವೈರಿಯಾಗಿರುವ ರಮೇಶ್ ಜಾರಕಿಹೊಳಿ ಸಲಹೆಯ ಮೇರೆಗೆ ಯೋಗೇಶ್ವರ್ ಆ ಕಚೇರಿಯನ್ನು ಪಡೆದುಕೊಂಡರು ಎಂದು ಹೇಳಲಾಗುತ್ತಿದೆ.
ಸಮ್ಮಿಶ್ರ ಸರಕಾರವನ್ನು ಉರುಳಿಸಲು ನಾನು ಸಂಚು ರೂಪಿಸಿದ್ದೇ ಕಾರಣ
ಸಮ್ಮಿಶ್ರ ಸರಕಾರವನ್ನು ಉರುಳಿಸಲು ನಾನು ಬೆಂಗಳೂರಿನಲ್ಲಿ ಕೂತು ಸಂಚು ರೂಪಿಸಿದ್ದೇ ಕಾರಣ ಎಂದು ಯೋಗೇಶ್ವರ್ ಬಹಿರಂಗವಾಗಿಯೇ ಹೇಳಿದ್ದರು. ನನ್ನನ್ನು ಚನ್ನಪಟ್ಟಣದಲ್ಲಿ ಡಿಕೆಶಿ ಮತ್ತು ಕುಮಾರಸ್ವಾಮಿ ತುಳಿಯಲು ನೋಡಿದರು. ಇದನ್ನು ನೋಡಿ ಸುಮ್ಮನಿರಲು ಸಾಧ್ಯವೇ ಎಂದು ಯೋಗೇಶ್ವರ್ ಅವರು ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್ಡಿಕೆ ವಿರುದ್ದ ಸೋಲು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಯೋಗೇಶ್ವರ್ ಅವರನ್ನು 21,530 ಮತಗಳ ಅಂತರದಿಂದ ಸೋಲಿಸಿದ್ದರು. ತನ್ನನ್ನು ಸೋಲಿಸಲು ಡಿಕೆಶಿ ಬ್ರದರ್ಸ್ ಮತ್ತು ಕುಮಾರಸ್ವಾಮಿ ಹೂಡಿದ ಸಂಚು ಇದು ಎಂದು ಯೋಗೇಶ್ವರ್ ದೂರಿದ್ದರು. ಹಾಗಾಗಿ, ರಾಜಕೀಯ ಜಿದ್ದಿಗಾಗಿ, ಸಿಪಿವೈ ಅವರು ಡಿಕೆಶಿ ಕಚೇರಿಯನ್ನೇ ಆರಿಸಿಕೊಂಡರು ಎಂದು ವ್ಯಾಖ್ಯಾನಿಸಲಾಗುತ್ತಿದೆ.