ಒಸಿಐ ವಿದ್ಯಾರ್ಥಿಗಳಿಗೂ ಸಿಇಟಿ-2022ಕ್ಕೆ ಹಾಜರಾಗಲು ಅನುಮತಿ
ಬೆಂಗಳೂರು, ಏ. 30:ಭಾರತೀಯ ಸಾಗರೋತ್ತರ ನಾಗರಿಕರ (ಒಸಿಐ) ವರ್ಗದ ವಿದ್ಯಾರ್ಥಿಗಳಿಗೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)-2022 ಗೆ ನೋಂದಾಯಿಸಿಕೊಳ್ಳಲು ಹಾಗೂ ಹಾಜರಾಗಲು ಹೈಕೋರ್ಟ್ ಅನುಮತಿ ನೀಡಿದೆ.
ಅಲ್ಲದೆ, ಒಸಿಐ ವಿದ್ಯಾರ್ಥಿಗಳು ಭಾರತೀಯ ನಾಗರಿಕರಿಗೆ ಸಮಾನವಾಗಿ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಆಯುರ್ವೇದ ಮತ್ತು ಇತರ ವೃತ್ತಿಪರ ಕೋರ್ಸ್ಗಳಲ್ಲಿ ಸೀಟುಗಳು ಆಯ್ಕೆಗೆ ಸಾಮಾನ್ಯ ವರ್ಗದಲ್ಲಿ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆಯಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
ವಿವೇಕ್ ಗೌತಮ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಆರ್.ದೇವದಾಸ್ ಮತ್ತು ನ್ಯಾ. ಹೇಮಲೇಖಾ ಅವರನ್ನೊಳಗೊಂಡ ರಜಾ ಕಾಲದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ನೀಡಿದೆ.
ಎಲ್ಲಾ ಒಸಿಐ ವಿದ್ಯಾರ್ಥಿಗಳು ಅರ್ಹ :
ಈ ಮಧ್ಯಂತರ ಆದೇಶದ ಪ್ರಯೋಜನ ಕೇವಲ ಅರ್ಜಿದಾರ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ 2022-23ರ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ಅರ್ಹ ಒಸಿಐ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಎನ್ಆರ್ಐ ಸೀಟುಗಳ ಅಡಿಯಲ್ಲಿ ಒಸಿಐ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವನ್ನು ಸೀಮಿತಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್ 2021ರ ಫೆಬ್ರವರಿಯಲ್ಲಿ ಮಧ್ಯಂತರ ಆದೇಶ ಜಾರಿಗೊಳಿಸಿದೆ ಮತ್ತು ಒಸಿಐ ವಿದ್ಯಾರ್ಥಿಗಳಿಗೆ ಸಾಮಾನ್ಯ ವರ್ಗದ ಕೌನ್ಸೆಲಿಂಗ್ಗೆ ಹಾಜರಾಗಲು ಅನುಮತಿ ನೀಡಿರುವುದನ್ನು ಗಮನಿಸಿದ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ.
ಶೈಕ್ಷಣಿಕ ವರ್ಷಕ್ಕೂ ವಿಸ್ತರಣೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರ ವಕೀಲರು, ಸುಪ್ರೀಂಕೋರ್ಟ್ 2021ರ ಫೆಬ್ರವರಿಯಲ್ಲಿ ಹೊರಡಿಸಿರುವ ಮಧ್ಯಂತರ ಆದೇಶ 2021-22 ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಆದರೂ ಸಹ ಸುಪ್ರೀಂಕೋರ್ಟ್ನ 2021ರ ಮಧ್ಯಂತರ ಆದೇಶದ ಲಾಭ 2022-23 ಶೈಕ್ಷಣಿಕ ವರ್ಷಕ್ಕೆ ಒಸಿಐ ವಿದ್ಯಾರ್ಥಿಗಳಿಗೆ ವಿಸ್ತರಿಸಬೇಕು ಎಂದು ನ್ಯಾಯಪೀಠವು ಹೇಳಿದೆ. ಏಕೆಂದರೆ ಸುಪ್ರೀಂಕೋರ್ಟ್, ಗೃಹ ವ್ಯವಹಾರಗಳ ಸಚಿವಾಲಯದ ಅಧಿಸೂಚನೆಯ ಸಿಂಧುತ್ವವನ್ನು ಇನ್ನೂ ನಿರ್ಧರಿಸಿಲ್ಲ, ಕೇಂದ್ರ ಸರ್ಕಾರವು ಎನ್ ಆರ್ ಐ ಕೋಟಾದ ಮೂಲಕ ವೃತ್ತಿಪರ ಕೋರ್ಸ್ಗಳಿಗೆ ಒಸಿಐ ವಿದ್ಯಾರ್ಥಿಗಳಿಗೆ ಸೀಮಿತ ಪ್ರವೇಶವನ್ನು ಹೊಂದಿತ್ತು.
ಬಿಇ, ಯೋಗ ಮತ್ತು ನ್ಯಾಚುರೋಪತಿ, ಪಶುವೈದ್ಯಕೀಯ ವಿಜ್ಞಾನ, ಫಾರ್ಮ್ ಸೈನ್ಸ್ ಮತ್ತು ಬಿ.ಫಾರ್ಮಾ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಂದ ಸಿಇಟಿ-2022ಗೆ ಅರ್ಜಿಯನ್ನು ಆಹ್ವಾನಿಸಿ ಕೆಇಎ ನೀಡಿದ ಕೈಪಿಡಿಯಲ್ಲಿ, ಯಾವುದೇ ಅಭ್ಯರ್ಥಿಯು ಭಾರತದ ಪ್ರಜೆಯಾಗದ ಹೊರತು ಸರ್ಕಾರಿ ಜನರಲ್ ಕೋಟಾದ ಸೀಟುಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಹೇಳಿದ್ದನ್ನು ಪ್ರಶ್ನಿಸಿ ಅರ್ಜಿದಾರ-ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿದಾರ ಒಸಿಐ ವಿದ್ಯಾರ್ಥಿಗಳು ಕಾನೂನಿನ ಅವಶ್ಯಕತೆಗೆ ಅನುಗುಣವಾಗಿ ಕರ್ನಾಟಕದಲ್ಲಿ ಕನಿಷ್ಠ ಏಳು ವರ್ಷಗಳ ಕಾಲ ಅಧ್ಯಯನ ಮಾಡಿದ್ದರೂ ಅವರು ತಮ್ಮ ಜನ್ಮದ ಕಾರಣದಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಇತರ ವಿದೇಶಗಳ ಪ್ರಜೆಗಳಾಗಿದ್ದಾರೆ. ಹಾಗಾಗಿ ನಮಗೆ ಸಿಇಟಿ ಪರೀಕ್ಷೆಗೆ ನೋಂದಾಯಿಸಲು ಮತ್ತು ಹಾಜರಾಗಲು ಅವಕಾಶ ನೀಡುವಂತೆ ಕೆಇಎಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು.