ಮುಖ್ಯಮಂತ್ರಿ ಯಡಿಯೂರಪ್ಪ ನೂತನ ರಾಜಕೀಯ ಕಾರ್ಯದರ್ಶಿ ಸಂತೋಷ್ ಯಾರು?
ಬೆಂಗಳೂರು, ಮೇ 28: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು. ಆದರೂ ಸರಳ ಬಹುಮತ ಪಡೆದುಕೊಳ್ಳಲು ಆಗದೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಮೂರು ದಿನಗಳಿಗೆ ರಾಜೀನಾಮೆ ಕೊಟ್ಟಿದ್ದರು. ಅದಾದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತ್ತು.
Recommended Video
ಆದರೆ ನಂತರ ಅತೃಪ್ತರ ಕಾಟದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಯ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಅತೃಪ್ತ ಶಾಸಕರನ್ನು ಸೆಳೆದಿದ್ದ ಬಿಜೆಪಿ ನಾಯಕರು ಮೈತ್ರಿ ಸರ್ಕಾರ ಆಂತರಿಕ ವೈಮನಸ್ಸಿನಿಂದಲೇ ಪತನವಾಗುವಂತೆ ಮಾಡಿದ್ದು ಗುಟ್ಟಾಗಿ ಏನೂ ಉಳಿದಿಲ್ಲ. ಇದೀಗ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ತುಂಬುತ್ತಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಆಪರೇಶನ್ ಕಮಲ
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿನ ಅತೃಪ್ತ ಶಾಸಕರನ್ನು ಸಂಪರ್ಕಿಸಿದ್ದ ಬಿಜೆಪಿಯ ನಾಯಕರು, 16 ಅತೃಪ್ತ ಶಾಸಕರನ್ನು ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಲ್ಲಿ ಸಫಲರಾಗಿದ್ದರು. ಅವರೆಲ್ಲರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಘಟನಾನುಘಟಿ ನಾಯಕರು ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದರು. ಆಗ ಆ ಶಾಸಕರನ್ನೆಲ್ಲ ಬಿಜೆಪಿ ಹೈಕಮಾಂಡ್ ಅಣತಿಯಂತೆ ಗುಟ್ಟಾಗಿ ರಾಜ್ಯದಿಂದ ಕರೆದುಕೊಂಡು ಹೋಗಿದ್ದು ಆ ವ್ಯಕ್ತಿ.
ಗ್ರಾ.ಪಂ. ನಾಮ ನಿರ್ದೇಶನ: ಯಡಿಯೂರಪ್ಪ, ಈಶ್ವರಪ್ಪ ಮಧ್ಯೆ ಮೂಡದ ಒಮ್ಮತ?
ಅತೃಪ್ತ ಶಾಸಕರ ಮೇಲೆ ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರ ಒತ್ತಡವಿತ್ತು. ಆದರೂ ಅವರನ್ನೆಲ್ಲ ಒಟ್ಟಾಗಿ ಇಟ್ಟು ರಾಜೀನಾಮೆ ಕೊಡಿಸಲು ಕರೆದುಕೊಂಡು ಬಂದಿದ್ದು ಎನ್.ಆರ್. ಸಂತೋಷ್ ಎಂಬ ಯುವಕ.
ಡಿಕೆಶಿ ಎದುರು ಹಾಕಿಕೊಂಡಿದ್ದ ಎನ್ಆರ್ಎಸ್
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಖಡಕ್ ರಾಜಕಾರಣಿ ಡಿ.ಕೆ. ಶಿವವಕುಮಾರ್, ಆಗ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನೆಲ್ಲ ಎದುರು ಹಾಕಿಕೊಂಡು ಎಲ್ಲ ಶಾಸಕರನ್ನು ಒಟ್ಟಾಗಿ ಇಡುವುದು ಸುಲಭದ ಕೆಲಸವಾಗಿರಲಿಲ್ಲ. ಆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಸಹಾಯಕ್ಕೆ ಬಂದಿದ್ದೇ ಎನ್.ಆರ್. ಸಂತೋಷ್. ತಮ್ಮ ಮೇಲೆ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಇಟ್ಟಿದ್ದ ಭರವಸೆ ಹುಸಿಯಾಗದಂತೆ ಕೆಲಸ ಮಾಡಿದ್ದರು ಸಂತೋಷ್.
ಅತೃಪ್ತ ಶಾಸಕರನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರ ಮಾಡುವಾಗ ಖಡಕ್ ರಾಜಕಾರಣಿ, ಆಗ ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಎದುರಿಸಿದ್ದು ಸಂತೋಷ್. ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದವೆರೆಗೂ ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಅತೃಪ್ತರ ಬೆನ್ನತ್ತಿ ಹೋಗಿದ್ದರು. ಆಗ ಅವರ ಕಣ್ಣು ತಪ್ಪಿಸಿ ಹೋಗಿದ್ದ ಅತೃಪ್ತ ಶಾಸಕರು ಮುಂಬೈ ವಿಮಾನ ಏರಿದ್ದರು. ವಿಮಾನ ನಿಲ್ದಾಣದಲ್ಲಿ ಶಿವಕುಮಾರ್ ಅವರನ್ನು ಎದುರಿಸಿದ್ದು ಎನ್.ಆರ್. ಸಂತೋಷ್. ಆ ಸಂದರ್ಭದಲ್ಲಿ ಸಂತೋಷ ಅವರ ಮೇಲೆ ಡಿ.ಕೆ. ಶಿವಕುಮಾರ್ ಹರಿಹಾಯ್ದು ಹೇಳಿಕೆಯನ್ನೂ ಕೊಟ್ಟಿದ್ದರು.
ಪಕ್ಷದ ನಾಯಕರು ಹೇಳಿದಂತೆ
ಬಿ.ಎಸ್. ಯಡಿಯೂರಪ್ಪ ಅವರು 4ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಸಿಎಂ ಆದಾಗ ಎನ್.ಆರ್. ಸಂತೋಷ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಆ ತನಕ ಎಲ್ಲಿಯೂ ಕಾಣಸಿಕೊಳ್ಳದಿದ್ದ ಅವರು, ಪಕ್ಷದ ನಾಯಕರು ಹೇಳಿದಂತೆ ಮಾಡಿದ್ದೇನೆ. ಇದರಲ್ಲಿ ನನ್ನ ಪಾತ್ರವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿಕ್ಕೆ ನಾನು ಸಣ್ಣಪುಟ್ಟ ಕೆಲಸ ಮಾಡಿದ್ದೇನೆ ಎಂದಿದ್ದರು. ಆದರೆ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರಿಂದ ದೂರವಾಗಿದ್ದರು.
ಪಕ್ಷಾಂತರ ನಿಷೇಧ ಕಾನೂನು ಬಲಪಡಿಸಲು "ಸಾರ್ವಜನಿಕರಿಗೆ ಸುವರ್ಣಾವಕಾಶ!"
ಯಡಿಯೂರಪ್ಪರಿಂದ ದೂರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ನಂತರದ ದಿನಗಳಲ್ಲಿ ಸಂತೋಷ್ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ಬೆಂಗಳೂರಿನ ಡಾಲರ್ಸ್ ಕಾಲನಿಯ ಯಡಿಯೂರಪ್ಪ ಅವರ ಧವಳಗಿರಿ ನಿವಾಸ, ವಿಧಾನಸೌಧ ಹಾಗೂ ಗೃಹ ಕಚೇರಿ ಕೃಷ್ಣಾಕ್ಕೂ ಸಂತೊಷ್ ಬಂದಿರಲಿಲ್ಲ. ಕಷ್ಟಕಾಲದಲ್ಲಿ ಜೊತೆಗಿದ್ದ ಎನ್.ಆರ್. ಸಂತೋಷ್ ಅವರಿಗೆ ಯಡಿಯೂರಪ್ಪ ಭರ್ಜರಿ ಉಡುಗೊರೆಯನ್ನೇ ಕೊಟ್ಟಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ?
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ನೇಮಕವಾಗುತ್ತಿದ್ದಾರೆ ಎಂಬ ಮಾಹಿತಿಯಿದೆ. ಈಗಾಗಲೇ 3 ಜನರು ಸಿಎಂ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಇದೀಗ ಯಡಿಯೂರಪ್ಪ ಅವರಿಗೆ 4ನೇ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ಅವರು ನೇಮಕವಾಗುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಸಿಕ್ಕಿದೆ.
ಈಗಾಗಲೇ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕರಾದ ಎಸ್. ಆರ್. ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ ಮತ್ತು ಶಂಕರ ಗೌಡ ಪಾಟೀಲ್ ಅವರು ನೇಮಕವಾಗಿದ್ದಾರೆ. ಅವರೊಂದಿಗೆ ಇದೀಗ ಎನ್. ಆರ್. ಸಂತೋಷ್ ಕೂಡ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಸಾಮಾನ್ಯವಾಗಿ ನಾಲ್ಕೈದು ಬಾರಿ ಶಾಸಕರಾದವರನ್ನು, ರಾಜಕೀಯ ಅನುಭವ ಹೊಂದಿದವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡುವುದು ವಾಡಿಕೆ.
ಕೆಜೆಪಿ ಕಟ್ಟಿದಾಗ ಜೊತೆಗಿದ್ದ ಸಂತೋಷ್
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯಿಂದ ಹೊರಬಿದ್ದು ಕೆಜೆಪಿ ಕಟ್ಟಿದ್ದರು. ಚುನಾವಣೆಯಲ್ಲಿ ಕೆಜೆಪಿ ಹೇಳಿಕೊಳ್ಳುವ ಸಾಧನೆ ಮಾಡಿರಲಿಲ್ಲ. ರಾಜ್ಯಾದ್ಯಂತ ಯಡಿಯೂರಪ್ಪ ಅವರೂ ಸೇರಿದಂತೆ ಕೇವಲ 6 ಶಾಸಕರು ಕೆಜೆಪಿಯಿಂದ ಗೆದ್ದಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು.
ಆ ಸಂದರ್ಭದಲ್ಲಿ ಅಕ್ಷರಶಃ ಏಕಾಂಗಿಯಾಗಿದ್ದ ಯಡಿಯೂರಪ್ಪ ಅವರ ಆಪ್ತಕಾರ್ಯದರ್ಶಿ ಕೆಲಸ ಆರಂಭಿಸಿದ್ದರು ಸಂತೊಷ್. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ಸೇರಿದ್ದ ಮಲ್ಲೇಶ್ವರದ ಕಟ್ಟಡವೊಂದನ್ನು ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಕಚೇರಿ ಮಾಡಿಕೊಂಡಿದ್ದರು. ಅಲ್ಲಿಂದ ಸಂತೋಷ್ ಅವರಿಗೆ ರಾಜಕೀಯ ಒಡನಾಟ ಶುರುವಾಗಿತ್ತು.