ಯಡಿಯೂರಪ್ಪ ಅವರ 'ಟ್ರಸ್ಟ್, ಸಂತೋಷ್ ಬೆಳೆದು ಬಂದ ದಾರಿ
ಬೆಂಗಳೂರು, ನವೆಂಬರ್ 28: ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಹೆಸರು ಮುನ್ನೆಲೆಗೆ ಬಂದಿದ್ದು ಕೇವಲ ನಾಲ್ಕು ವರ್ಷದ ಹಿಂದಷ್ಟೇ ! ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಕಾಪು ಸಿದ್ದಲಿಂಗ ಸ್ವಾಮಿ ಜಾಗದಲ್ಲಿ ಕೆಲಸ ಆರಂಭಿಸಿದ ಬಿಇ ಪದವೀಧರನೊಬ್ಬ ತನ್ನ ನಂಬಿಕಸ್ಥ ನಾಯಕನಿಗಾಗಿ ಕ್ರಿಮಿನಲ್ ದಾವೆ ಹಾಕಿಸಿಕೊಂಡಿದ್ದರು. ಆಪರೇಷನ್ ಕಮಲ ಯಶಸ್ವಿಗೊಳಿಸಿ ತನ್ನ ನಾಯಕ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂತೋಷ್ ಕೇವಲ ನಾಲ್ಕು ವರ್ಷದಲ್ಲಿ ಬೆಳೆದು ಬಂದ ದಾರಿ ಅಚ್ಚರಿ ಮೂಡಿಸುತ್ತದೆ. ಆತ್ಮಹತ್ಯೆಗೆ ಯತ್ನಿಸಿರುವ ಸಂತೋಷ್ ಮಾನಸಿಕ ನೋವಿಗೆ ಕಾರಣ ಇನ್ನೂ ನಿಗೂಢವಗಿದೆ. ಆದರೆ ಅವರ ವ್ಯಕ್ತಿತ್ವದ ಚಿತ್ರಣ ಇಲ್ಲಿದೆ.
ಸಂತೋಷ್ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ಬತಿಪಟೂರಿನ ನೊಣವಿನ ಕೆರೆಯವರಾದ ಎನ್.ಆರ್. ಸಂತೋಷ್ ಬಿ.ಎಸ್. ಯಡಿಯೂರಪ್ಪ ಅವರ ದೂರದ ಸಂಬಂಧಿ. ಯಡಿಯೂರಪ್ಪ ಅವರ ಅಕ್ಕನ ಮೊಮ್ಮಗ ಸಂತೋಷ್. ಕಲ್ಪತರು ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಮುಗಿಸಿದ್ದರು. ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ, ಆರ್ಎಸ್ ಎಸ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರು. ಯಡಿಯೂರಪ್ಪ ಅವರಿಗೆ ನಂಬಿಕಸ್ಥ ಪಿಎ ಆಗಿದ್ದ ಕಾಪು ಸಿದ್ಧಲಿಂಗಸ್ವಾಮಿ ಅವರನ್ನು ಏಕಾಏಕಿ ಹೊರ ಹಾಕಲಾಯಿತು. ದೂರದ ಸಂಬಂಧಿಯಾಗಿದ್ದ ಸಂತೋಷ್, ಬುದ್ಧಿವಂತ, ಸಂಘದ ಹಿನ್ನೆಲೆಯುಳ್ಳವ, ಸಂಘಟನಾ ಚತುರ ಎಂಬ ಕಾರಣಕ್ಕೆ ಆರಂಭದಲ್ಲಿ ಸಿದ್ದಲಿಂಗ ಸ್ವಾಮಿ ಜಾಗಕ್ಕೆಬಂದರು. ಯಡಿಯೂರಪ್ಪ ಅವರ ದಿನ ವಹಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬರುವ ನಾಯಕರೊಂದಿಗೂ ಅತ್ಯುತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಇಷ್ಟಾಗಿಯೂ ಸಂತೋಷ್ ಹೆಸರು ಎಲ್ಲೂ ಪ್ರಸ್ತಾಪ ಆಗಿರಲಿಲ್ಲ.
ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ
2017 ರಲ್ಲಿ ಸಂತೋಷ್ ಹೈಲೈಟ್: ರಾಜ್ಯದಲ್ಲಿ ಕುರುಬ ಸಮುದಾಯವನ್ನು ಸಂಘಟಿಸುವ, ರಾಯಣ್ಣ ಬ್ರಿಗೇಡ್ ರಚನೆ ಸಕ್ರಿಯ ಕಾರ್ಯದಲ್ಲಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಹೆಸರು ಕೇಳಿ ಬಂದಿತ್ತು. ಇದು ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಶೀತಲ ಸಮರಕ್ಕೆ ನಾಂದಿಯಾಡಿತ್ತು. ಕೆ.ಎಸ್. ಈಶ್ವರಪ್ಪ ಅವರ ಆಪ್ತನಾಗಿದ್ದ ವಿನಯ್ ಅಪಹರಣಕ್ಕೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆದಿತ್ತು. ವಿನಯ್ ಬಳಿ ಇದೆ ಎನ್ನಲಾದ ಒಂದು ಸಿಡಿಗಾಗಿ ಆ ದಾಳಿ ನಡೆದಿತ್ತು. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿಅಪಹರಣ ಹಾಗೂ ಕೊಲೆಯತ್ನ ದೂರು ದಾಖಲಿಸಿದ್ದರು. ವಿನಯ್ ನನ್ನು ಅಪಹರಣ ಮಾಡಿಸಲು ಸುಪಾರಿ ನೀಡಿದ್ದ ಆರೋಪ ಸಂತೋಷ್ ಮೇಲೆ ಕೇಳಿ ಬಂದಿತ್ತು. ತಲೆಮರೆಸಿಕೊಂಡಿದ್ದ ಸಂತೋಷ್ ಗಾಗಿ ಪೊಲೀಸರು ಶೋಧ ನಡೆಸಿದ್ದರು.
ಮೊಬೈಲ್ ಮಾಹಿತಿ ಆಧರಿಸಿ ಯಡಿಯೂರಪ್ಪ ಅವರ ಮನೆಯಲ್ಲಿ ಶೋಧ ನಡೆಸಲು ಪ್ರಯತ್ನಿಸಿದ್ದರು. ಅಂತಿಮವಾಗಿ ಜಾಮೀನು ಪಡೆದು ಪೊಲೀಸರ ಮುಂದೆ ಸಂತೋಷ್ ಹಾಜರಾಗಿದ್ದರು. ಸಂತೋಷ್ ಅವರಿಗೆ ಪರಿಚಯವಾಗಿದ್ದ ರೂಪದರ್ಶಿಯೊಬ್ಬಳ ಜತೆ ಅನೋನ್ಯವಾಗಿದ್ದ ವಿಡಿಯೋ ಹಾಗೂ ಚಿತ್ರಗಳು ವಿನಯ್ ಬಳಿ ಇವೆ. ಅವು ಬಹಿರಂಗವಾದರೆ ಭವಿಷ್ಯಕ್ಕೆ ಮಾರಕವಾದೀತು ಎಂಬ ಕಾರಣಕ್ಕೆ ದಾಳಿ ಮಾಡಿದರು ಎಂಬ ಆರೋಪ ಕೇಳಿ ಬಂದಿದ್ದವು. ವಿನಯ್ ಹತ್ಯೆಗೆ ಯತ್ನಿಸಿದ ಆರೋಪದಡಿ ಸಂತೋಷ್ ಅವರನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಡಿವೈಎಸ್ಪಿ ಬಡಿಗೇರ್ ನೇತೃತ್ವದ ತಂಡ ಸಂತೋಷ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ಪ್ರಕರಣ ಇಬ್ಬರ ಪ್ರಭಾವಿ ಬಿಜೆಪಿ ನಾಯಕರ ಆಪ್ತ ಕಾರ್ಯದರ್ಶಿಗಳ ಪರಿಚಯ ಮಾಡಿಸಿತ್ತು ಅಲ್ಲಿಯ ವರೆಗೂ ಸಂತೋಷ್ ಹೆಸರು ಮುನ್ನೆಲೆಗೆ ಬಂದಿರಲಿಲ್ಲ. ಕೊನೆಗೆ ಇಬ್ಬರೂ ರಾಜಿಯಾಗಿದ್ದಾರೆ ಎಂಬ ಮಾತು ಹರಿದಾಡಿತ್ತು.
ಆಪರೇಷನ್ ಕಮಲ: ಅಪಹರಣಕ್ಕೆ ಯತ್ನ, ಮಾರಣಾಂತಿಕ ಹಲ್ಲೆ ಪ್ರಕರಣದ ಬಳಿಕ ಸಂತೋಷ್ ಹೆಸರು ರಾಜ್ಯಕ್ಕೆ ಪರಿಚಯವಾಗಿತ್ತು. ಈ ಪ್ರಕರಣದ ಹೊರತಾಗಿಯೂ ಯಡಿಯೂರಪ್ಪ ಅವರು ಸಂತೋಷ್ ಅವರನ್ನು ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಹೊರಗಿಡಲಿಲ್ಲ. ಅಷ್ಟರ ಮಟ್ಟಿಗೆ ಯಡಿಯೂರಪ್ಪ ಅವರ ನಂಬಿಕೆ ಗಳಿಸಿದ್ದರು. ಯಡಿಯೂರಪ್ಪ ಅವರ ದಿನಚರಿಯನ್ನು ಶಿಸ್ತು ಬದ್ಧವಾಗಿ ನಿರ್ವಹಿಸುತ್ತಿದ್ದ ಸಂತೋಷ್ ಗೆ ಸಾಕಷ್ಟು ರಾಜಕಾರಣಿಗಳ ಜತೆ ನಿಕಟ ಸಂಪರ್ಕ ಬೆಳೆದಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ರಚಿಸಿದ್ದ ಸರ್ಕಾರ ಅಲುಗಾಡುತ್ತಿದೆ ಎಂಬ ಸಂಗತಿ ಗೊತ್ತಾಗಿದ್ದೇ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೆಬೆಲ್ ಶಾಸಕರಿಗೆ ಮೂಲ ಸೌಕರ್ಯ, ಪ್ಲೈಟ್ ಟಿಕೆಟ್ ಹೀಗೆ ಎಲ್ಲವನ್ನೂ ನಿಭಾಯಿಸುವ ಮೂಲಕ ದೊಡ್ಡ ಸುದ್ದಿಯಾಗಿದ್ದರು. ಸಂತೋಷ್ ಅವರ ಸೇವೆ ಹಾಗೂ ನಿಷ್ಠೆ ನೋಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತನ್ನ ರಾಜಕೀಯ ಕಾರ್ಯದರ್ಶಿ ಯನ್ನಾಗಿ ನೇಮಿಸಿಕೊಂಡಿದ್ದರು.
ಸಂತೋಷ್ ಆತ್ಮಹತ್ಯೆ ಪ್ರಯತ್ನ ಪ್ರಕರಣ: ಯಡಿಯೂರಪ್ಪ ಪ್ರತಿಕ್ರಿಯೆ
Recommended Video
ಸಂಶಯ: ಇತ್ತೀಚೆಗೆ ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಹೊರಗಿಡುವ ಪ್ರಯತ್ನಗಳು ನಡೆದಿವೆ ಎಂಬ ಮಾತು ಕೇಳಿ ಬಂದಿತ್ತು. ನವೆಂಬರ್ 25 ರೊಳಗೆ ಸಂತೋಷ್ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂಬ ಸಂಗತಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇದಾದ ಮೂರೇ ದಿನದಲ್ಲಿ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯಡಿಯೂರಪ್ಪ ಅವರಿಂದ ಸಂತೋಷ್ ಅವರನ್ನು ದೂರ ಇಡುವ ಪ್ರಯತ್ನಗಳು ಒಳಗೊಳಗೆ ನಡೆದಿದ್ದವಾ ? ತನ್ನ ನಿಷ್ಠೆಗೆ ಪ್ರತಿಫಲ ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದರಾ ? ಅಥವಾ ವೈಯಕ್ತಿಕ ಕಾರಣಗಳಿಂದ ಜೀವ ತ್ಯಜಸಿಲು ಮುಂದಾದರೇ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಸದ್ಯ ಪ್ರಜ್ಞೆ ಹೀನವಾಗಿರುವ ಸಂತೋಷ್ ಅವರ ಸ್ಥಿತಿ ಚಿಂತಾಜನಿಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.