ರೈಲಿನಲ್ಲಿ ಸಮಸ್ಯೆ ಎದುರಾದರೆ ನೆರವಿಗೆ ಬರುತ್ತಾರೆ ಕ್ಯಾಪ್ಟನ್!
ಬೆಂಗಳೂರು, ಜು.4: ಚಲಿಸುವ ರೈಲುಗಳಲ್ಲಿ ಪ್ರಯಾಣಿಕರ ಕುಂದು-ಕೊರತೆಗಳಿಗೆ ಸ್ಪಂದಿಸಲು ಇನ್ನು ಮುಂದೆ ಕ್ಯಾಪ್ಟನ್ಗಳನ್ನು ನಿಯೋಜಿಸಲು ನೈಋತ್ಯ ರೈಲ್ವೆ ವಲಯ ಮುಂದಾಗಿದೆ.
ಪ್ರಾಯೋಗಿಕವಾಗಿ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ಹಾಗೂ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲುಗಳಲ್ಲಿ ಪ್ರಾಯೋಗಿಕವಾಗಿ ಕ್ಯಾಪ್ಟನ್ಗಳನ್ನು ನೇಮಕ ಮಾಡಿದೆ. ಪ್ರಯಾಣದ ವೇಳೆ ಪ್ರಯಾಣಿಕರಿಗೆ ನೀರು, ನೈರ್ಮಲ್ಯ, ವಿದ್ಯುತ್ ದೀಪ, ಹೊದಿಕೆ, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ನಿರ್ವಹಿಸುವುದು ಈ ಸಿಬ್ಬಂದಿಯ ಜವಾಬ್ದಾರಿಯಾಗಿದೆ ಎಂದು ರೈಲ್ವೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಸುತ್ತ ರೈಲ್ವೆ ಗೇಟ್ ಅಪಘಾತಕ್ಕೆ ತಿಲಾಂಜಲಿ, ಹೇಗಂತೀರಾ?
ಪ್ರಯಾಣಿಕರಿಗೆ ಸ್ಪಂದಿಸುವ ಕ್ಯಾಪ್ಟನ್ಗಳನ್ನು ಶೀಘ್ರವೇ ರಾಜಧಾನಿ ಎಕ್ಸ್ಪ್ರೆಸ್ ಹಾಗೂ ಶತಾಬ್ದಿ ಎಕ್ಸ್ಪ್ರೆಸ್ನಂತಹ ಪ್ರೀಮಿಯಮ್ ರೈಲುಗಳಿಗೂ ವಿಸ್ತರಿಸಲಾಗುವುದು. ಕ್ಯಾಪ್ಟನ್ ಸೌಲಭ್ಯ ಇರುವ ರೈಲುಗಳ ಟಿಕೆಟ್ ವಿತರಣೆ ವೇಳೆ ಈ ಬಗ್ಗೆ ಮಾಹಿತಿಯನ್ನು ಪ್ರಯಾಣಿಕರಿಗೆ ಟಿಕೆಟ್ಗೆ ಅಂಟಿಸಿಯೇ ನೀಡಲಾಗುವುದು.
ಜೊತೆಗೆ ಟಿಕೆಟ್ ಬುಕಿಂಗ್ ಕುರಿತಾಗಿ ಪ್ರಯಾಣಿಕರಿಗೆ ಕಳಿಸುವ ಎಸ್ಎಂಎಸ್ ಸಂದೇಶದಲ್ಲೂ ಈ ಬಗ್ಗೆ ಮಾಹಿತಿ ಒದಗಿಸಲಾಗುವುದು. ಇದರಿಂದ ಪ್ರಯಾಣಿಕರು ಸುಲಭವಾಗಿ ಕ್ಯಾಪ್ಟನ್ಗಳ ನೆರವು ಪಡೆಯಲು ಅನುಕೂಲವಾಗುತ್ತದೆ.
ಈ ಹಿಂದೆ 2017ರಲ್ಲಿ ಟ್ರೈನ್ ಕ್ಯಾಪ್ಟನ್ ಒಬ್ಬರನ್ನು ನಿಯೋಜಿಸಿದ ದೇಶದ ಮೊದಲ ವಲಯ ಎಂಬ ಸಾಧನೆಗೆ ನೈಋತ್ಯ ರೈಲ್ವೆ ವಲಯ ಪಾತ್ರವಾಗಿತ್ತು. ಹಿರಿಯ ಟಿಕೆಟ್ ಕಲೆಕ್ಟರ್ಗಳನ್ನು ಕ್ಯಾಪ್ಟನ್ಗಳಾಗಿ ನಿಯೋಜಿಸಲಾಗುತ್ತಿದೆ. ಇದನ್ನು ಆಧರಿಸಿ ಇದೀಗ ದೇಶದ ಎಲ್ಲ ರೈಲ್ವೆ ವಲಯಗಳಲ್ಲಿ ಇದನ್ನು ಅನುಸರಿಸುವಂತೆ ರೈಲ್ವೆ ನಿರ್ದೇಶನಾಲಯ ಆದೇಶ ಜಾರಿ ಮಾಡಿದೆ.
ಈಗಾಗಲೇ ಪ್ರಯಾಣಿಕರ ದೂರು ಆಲಿಸಲು ಕಂಟ್ರೋಲ್ ರೂಮ್ ಹಾಗೂ ಸ್ಟೇಶನ್ ಅಧಿಕಾರಿಗಳಿದ್ದರೂ ಪ್ರಯಾಣದ ವೇಳೆ ಆಗಬಹುದಾದ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಟ್ರೇನ್ ಕ್ಯಾಪ್ಟನ್ಗಳು ಹೆಚ್ಚು ಪರಿಣಾಮಕಾರಿಯಾಗಿ ಪ್ರಯಾಣಿಕರಿಗೆ ನೆರವಾಗಬಹುದು ಎಂಬ ಕಾರಣಕ್ಕಾಗಿ ಈ ಪ್ರಯೋಗಕ್ಕೆ ನೈಋತ್ಯ ರೈಲ್ವೆ ವಲಯ ಮುಂದಾಗಿದೆ.