ಬೆಂಗಳೂರಿಗೆ ಅಘನಾಶಿನಿ ನೀರನ್ನು ತರಲು ಸರ್ಕಾರಕ್ಕೆ ಸಲಹೆ
ತುಮಕೂರು, ಜೂನ್ 25 : ಬೆಂಗಳೂರು ನಗರಕ್ಕೆ ಶರಾವತಿ ನದಿ ನೀರು ತರುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗುತ್ತಿದೆ. ಅಘನಾಶಿನಿ ನೀರನ್ನು ಬೆಂಗಳೂರಿಗೆ ತರಬಹುದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.
ತುಮಕೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಟಿ.ಬಿ.ಜಯಚಂದ್ರ ಅವರು ಪಶ್ಚಿಮ ಘಟ್ಟದ ಅಘನಾಶಿನಿ ನದಿ ಕೊಳ್ಳದಿಂದ ಬೆಂಗಳೂರು ಮತ್ತು ಮಧ್ಯಮಾರ್ಗದಲ್ಲಿ ಬರುವ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಕುರಿತು ಮಾತನಾಡಿದರು.
ಬೆಂಗಳೂರಿಗೆ ಶರಾವತಿ ನೀರು : ಶಿವಮೊಗ್ಗದಲ್ಲಿ ಹೋರಾಟಕ್ಕೆ ವೇದಿಕೆ ಸಿದ್ಧ
'ಬೆಂಗಳೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಹಾಲಿ 1 ಕೋಟಿ ಜನಸಂಖ್ಯೆಯನ್ನು ದಾಟಿದ್ದು ಮೂಲ ಸೌಕರ್ಯಗಳಲ್ಲಿ ಕುಡಿಯವು ನೀರು ಒದಗಿಸುವುದು ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ. ಕಾವೇರಿ ನದಿ ಪಾತ್ರದಿಂದ ಸರಿ ಸುಮಾರು 18 ಟಿಎಂಸಿ ಮತ್ತು ಇತರ ಮೂಲದಿಂದ ಸೇರಿಸಿ ಒಟ್ಟಾರೆ 20ಟಿಎಂಸಿ ನೀರು ಸರಬರಾಜು ಆಗುತ್ತಿದ್ದರೂ ಸಹ ಎಲ್ಲಾ ಭಾಗಕ್ಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ' ಎಂದರು.
ಬೆಂಗಳೂರಿಗೆ ಲಿಂಗನಮಕ್ಕಿ ನೀರು ಕೊಂಡೊಯ್ಯಲು ಬಿಡೊಲ್ಲ: ರಾಘವೇಂದ್ರ
'ಪಶ್ಚಿಮ ಘಟ್ಟದ ಶರಾವತಿ, ಕಾಳಿ, ಅಘನಾಶಿನಿ, ನೇತ್ರಾವತಿ, ಸೀತಾ, ಬೇಡ್ತಿ ನದಿಗಳು ಪ್ರಮುಖವಾಗಿವೆ. ಬೌಗೋಳಿಕವಾಗಿ ಈ ಎಲ್ಲಾ ನದಿ ಪ್ರದೇಶಗಳನ್ನು ಪರಿಶೀಲಿಸಿದಾಗ ಅತಿ ಕಡಿಮೆ ಪ್ರದೇಶವೆಂದರೆ 1895 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಅಘನಾಶಿನಿ ನದಿ. ಮಳೆಗಾಲದಲ್ಲಿ ಈ ನದಿಯಲ್ಲಿ ಸರಿ ಸುಮಾರು 100-120 ಟಿಎಂಸಿಯಷ್ಟು ನೀರಿನ ಲಭ್ಯತೆ ಇದೆ' ಎಂದು ಜಯಚಂದ್ರ ಹೇಳಿದರು.
ಬೆಂಗಳೂರಿನ ದಾಹ ತಣಿಸಲು ಶರಾವತಿ, ತುಂಗಾ ಭದ್ರಾ ನೀರು
'ಹಿಂದೆ ರಾಜ್ಯ ಸರ್ಕಾರ ಈ ನದಿಗೆ ಹೇಮಾಗ್ನಿನಿ ಜಲಾಶಯ ನಿರ್ಮಿಸಿ ಸರಿ ಸುಮಾರು 50 ಟಿಎಂಸಿ ನೀರನ್ನು ಉಪಯೋಗಿಸಿ ಜಲ ವಿದ್ಯುತ್ ಉತ್ಪನ್ನಕ್ಕಾಗಿ ಯೋಜನೆ ಸಹ ಕೈಗೊಂಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ' ಎಂದು ತಿಳಿಸಿದರು.
ನೀರು ತರುವುದು ಹೇಗೆ? : ಹೇಮಾಗ್ನಿನಿ ಜಲಾಶಯದ ಸ್ಥಳ ಸರಿ ಸುಮಾರು Topo-Sheet ಪ್ರಕಾರ 470 ಎಂ.ಎಸ್.ಎಲ್ ಇದ್ದು, ಇಲ್ಲಿಂದ ಪೈಪ್ ಮೂಲಕ ನೀರನ್ನು ಲಿಫ್ಟ್ ಮಾಡಿಕೊಂಡು ಸಿದ್ದಾಪುರ, ಸಾಗರ ತಾಲೂಕುಗಳ ಮೂಲಕ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ನದಿಯನ್ನು ದಾಟಿ ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲೂಕಿನ ಮೂಲಕ ಹಟ್ಟಿಮೂಡಗರೆ ಗ್ರಾಮದ ಬಳಿ ವೇದಾವತಿ ನದಿ ಪಾತ್ರಕ್ಕೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರಕ್ಕೆ ನೀರನ್ನು ತರಬಹುದಾಗಿದೆ.
ವಾಣಿ ವಿಲಾಸ ಸಾಗರದ ವೇದಾವತಿ ನದಿಯ ಮಟ್ಟ 750 ಮೀ. ಆಗಿದೆ. ಅಂದರೆ ಸುಮಾರು 280 ಮೀಟರ್ ಲಿಫ್ಟ್ ಮಾಡಬೇಕಾಗುತ್ತದೆ. ವಾಣಿ ವಿಲಾಸ ಸಾಗರದ ಒಟ್ಟು ಸಾಮರ್ಥ್ಯ 28-30 ಟಿಎಂಸಿ. ವಾಣಿ ವಿಲಾಸ ಸಾಗರದಿಂದ ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯದ ಸಾಮರ್ಥ್ಯ ಸರಿ ಸುಮಾರು 2.80 ರಿಂದ 3 ಟಿಎಂಸಿ.
ವಾಣಿ ವಿಲಾಸ ಸಾಗರದಿಂದ ಸುಮಾರು 60 ಮೀಟರ್ ಲಿಫ್ಟ್ ಮಾಡುವ ಮೂಲಕ ಬೋರನಕಣಿವೆ ಜಲಾಶಯಕ್ಕೆ ತರಬಹುದಾಗಿದೆ. ಇಲ್ಲಿಂದ ಗಾಯತ್ರಿ ಜಲಾಶಯ ಹಾಗೂ ತದನಂತರ ತಿಮ್ಮನಹಳ್ಳಿ, ಗಂಟೇನಹಳ್ಳಿ, ಚೇಳೂರು, ಬೆಳ್ಳಾವಿ, ಕೋರಾ, ಕ್ಯಾತಸಂದ್ರ, ದಾಬಸ್ ಪೇಟೆ ಮೂಲಕ ಅರ್ಕಾವತಿ ನದಿಯ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರನ್ನು ತರಬಹುದಾಗಿದೆ.
ಒಟ್ಟಾರೆ ಅಘನಾಶಿನಿ ನದಿಯ ಹೇಮಾಗ್ನಿನಿ ಡ್ಯಾಂ ಸ್ಥಳದಿಂದ ವಾಣಿ ವಿಲಾಸ ಜಲಾಶಯ, ಬೋರನಕಣಿವೆ ಜಲಾಶಯ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 3 ಹಂತದ ಸರಿ ಸುಮಾರು 450 ಮೀಟರ್ನಷ್ಟು ನೀರನ್ನು ಲಿಫ್ಟ್ ಮಾಡಬೇಕಾಗುತ್ತದೆ.
ಈ ಯೋಜನೆಯಿಂದ ಬೆಂಗಳೂರಿಗೆ ಸರಿಸುಮಾರು 50-60 ಟಿಎಂಸಿ ನೀರನ್ನು ತರುವ ಯೋಜನೆ ತಾಂತ್ರಿಕವಾಗಿ ಅತ್ಯಂತ ಸಮಂಜಸವಾಗಿದ್ದು, ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ಈ ಯೋಜನೆಯನ್ನು ಕೈಗೊಳ್ಳಬಹುದಾಗಿದೆ ಎಂದು ಸಲಹೆ ನೀಡಲಾಗಿದೆ.