ಶಾಕಿಂಗ್; ಕೊರೊನಾ ವೈರಸ್ ಗೆ ಭಾರತದಲ್ಲಿ ಮೊದಲ ಬಲಿ!
ಬೆಂಗಳೂರು, ಮಾರ್ಚ್ 12; ಜಗತ್ತಿನ ನಿದ್ದೆಗೆಡಿಸಿರುವ ನೊವೆಲ್ ಕೊರೊನಾ ವೈರಸ್ ಗೆ (ಕೋವಿಡ್ 19) ಭಾರತದ ಮೊದಲ ಬಲಿಯಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆ ಈ ಆಘಾತಕಾರಿ ಸುದ್ದಿಯನ್ನು ಗುರುವಾರ ಸಂಜೆ ದೃಢಪಡಿಸಿದೆ.
ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ್ದ ಕಲಬುರಗಿಯ 76 ವರ್ಷದ ವೃದ್ಧ ಮಹ್ಮದ್ ಹುಸೇನ್ ಸಿದ್ದಿಕ್ಕಿ ಮಾರ್ಚ್ 10 ರಂದು ನಿಧನರಾಗಿದ್ದರು. ಅವರೇ ಕೋವಿಡ್ 19 ಕೊರೊನಾ ವೈರಸ್ಗೆ ಭಾರತದಲ್ಲಿ ಮೊದಲ ಬಲಿಯಾಗಿರುವ ವ್ಯಕ್ತಿಯಾಗಿದ್ದಾರೆ.
ಕಲಬುರಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು
ಮಹ್ಮದ್ ಹುಸೇನ್ ಸಿದ್ದಿಕಿ ಅವರು ಮಾರ್ಚ್ 9 ರಂದು ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರ ಅತಿಯಾಗಿ ಕಾಣಿಸಿದ್ದರಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅವರು ಸೌದಿ ಅರೇಬಿಯಾದಿಂದ ಮಾರ್ಚ್ 8 ರಂದು ಭಾರತಕ್ಕೆ ವಾಪಸ್ಸಾಗಿದ್ದರು.
ಹೈದರಾಬಾದ್ ಆಸ್ಪತ್ರೆಗೆ ಸೇರಿಸಲಾಗಿತ್ತು
ವೃದ್ಧನನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಯೂ ಗುಣಮುಖರಾಗದ ಕಾರಣ ಕುಟುಂಬಸ್ಥರು ಆಸ್ಪತ್ರೆಯಿಂದ ಮಾರ್ಚ್ 10 ರಂದು ಮಧ್ಯಾಹ್ನ ಕಲಬುರಗಿಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯದಲ್ಲಿಯೇ ರೋಗಿ ನಿಧನ ಹೊಂದಿದ್ದರು.
ಪರೀಕ್ಷೆಗೆ ಕಳುಹಿಸಲಾಗಿತ್ತು
ಕೆಮ್ಮು, ಜ್ವರದಿಂದ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾದ ಕೂಡಲೇ ಶಂಕಿತ ಕೊರೋನಾ ವೈರಸ್ ಎಂದು ಭಾವಿಸಿಕೊಂಡು ಮಾರ್ಚ್ 9 ರಂದೇ ವ್ಯಕ್ತಿಯ ಗಂಟಲು ದ್ರವ್ಯ ಸ್ಯಾಂಪಲ್ ಪಡೆದು ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.
ಸೋಂಕನ್ನು ನಿರಾಕರಿಸಲಾಗಿತ್ತು
ಸಿದ್ದಿಕಿ ಅವರು ವಯೋಸಹಜದಿಂದ ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮಹ್ಮದ್ ಹುಸೇನ್ ಸಿದ್ದಿಕಿ (76) ಕರೋನಾ ವೈರಸ್ನಿಂದ ನಿಧನವಾಗಿದ್ದಾರೆ ಎಂಬುದಕ್ಕೆ ವೈದ್ಯಕೀಯ ವರದಿ ದೃಢೀಕರಿಸಿಲ್ಲ ಎಂದು ಜಿಲ್ಲಾಧಿಕಾರಿ ಶರತ್ ಬಿ ಸೇರಿದಂತೆ ಆರೋಗ್ಯ ಸಚಿವ ಶ್ರೀರಾಮಲು ಹೇಳಿದ್ದರು.
ಕೊರೊನಾಕ್ಕೆ ಭಾರತದಲ್ಲಿ ಮೊದಲ! ಬಲಿ
ಇದರೊಂದಿಗೆ ತೀವ್ರ ತಲ್ಲಣ ಸೃಷ್ಟಿಸಿರುವ ಕೊರೊನಾ ಸೋಂಕಿಗೆ ಭಾರತದಲ್ಲಿ ಮೊದಲ ಸಾವು ಸಂಭವಿಸಿದಂತಾಗಿದೆ. ಇದುವರೆಗೆ ಭಾರತದಲ್ಲಿ ಒಟ್ಟು 72 ಪ್ರಕರಣಗಳು ದಾಖಲಾಗಿವೆ.