ತಾಯಿ ಚನ್ನಮ್ಮ ಅವರಿಗೆ ಐಟಿ ನೊಟೀಸ್ ನೀಡಿರುವ ಬಗ್ಗೆ ಆತಂಕ ಇಲ್ಲ: ಎಚ್ಡಿಕೆ
ಬೆಂಗಳೂರು, ಮಾ.28: ಆದಾಯ ತೆರಿಗೆ ಇಲಾಖೆ ನಮ್ಮ ತಾಯಿ ಚನ್ನಮ್ಮ ಅವರಿಗೆ ನೋಟಿಸ್ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ವಿಧಾನಸೌಧದ ಬಳಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ನೋಟಿಸ್ ನೀಡಿರುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಆತಂಕಪಡುವ ಅಗತ್ಯವೂ ಇಲ್ಲ" ಎಂದರು.
ಐಟಿ ನೋಟಿಸ್; ಅಧಿಕಾರಿಗಳನ್ನು ಕಬ್ಬಿನ ಗದ್ದೆಗೆ ಆಹ್ವಾನಿಸಿದ ಎಚ್.ಡಿ. ರೇವಣ್ಣ
ದೇವೆಗೌಡರ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಮಹತ್ವ ಕೊಟ್ಟಿಲ್ಲ. ನಾವು ಸಹ ನಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಪ್ರಾಮುಖ್ಯತೆ ಕೊಟ್ಟವರಲ್ಲ. ನಾವು ಪರಿಶುದ್ಧವಾಗಿರಬೇಕು ಅಷ್ಟೇ. ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ಏನು ಉತ್ತರ ಕೊಡಬೇಕೋ ಕೊಟ್ಟರಾಯಿತು. ನನ್ನ ಸಹೋದರ ರೇವಣ್ಣ ಅವರಿಗೂ ಇದನ್ನೇ ಹೇಳಿದ್ದೇನೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಆದಾಯ ತೆರಿಗೆ ಬಗ್ಗೆ ಕಾನೂನಾತ್ಮಕವಾಗಿ ಆಸ್ತಿ ವಿಚಾರವಾಗಿ ಕೇಳಿರುತ್ತಾರೆ. ಆ ವಿವರಗಳನ್ನು ಸಲ್ಲಿಕೆ ಮಾಡಿದರೆ ಆಯಿತು ಎಂದು ಅವರು ತಿಳಿಸಿದರು.
ಐಟಿ ನೋಟಿಸ್:
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರ ಪತ್ನಿ ಚನ್ನಮ್ಮ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಇದಕ್ಕೆ ಹಾಸನದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ, 'ದ್ವೇಷದ ರಾಜಕಾರಣ ಯಾವ ರೀತಿ ಇದೆ ಎಂಬುದಕ್ಕೆ ಇದು ನಿದರ್ಶನ. ಕಾಲ ಬರುತ್ತದೆ. ಎಲ್ಲದಕ್ಕೂ ಉತ್ತರ ಕೊಡುತ್ತೇವೆ' ಎಂದು ಕಿಡಿಕಾರಿದ್ದಾರೆ