ಪಿಎಫ್ಐ ಜತೆ ಬಜರಂಗದಳ, ಶ್ರೀರಾಮ ಸೇನೆ ವಿರುದ್ಧವೂ ಕ್ರಮ: ಸಿದ್ದರಾಮಯ್ಯ
ಬೆಂಗಳೂರು, ಜನವರಿ 5: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ನಿಷೇಧಿಸುವಂತೆ ಬಿಜೆಪಿ ತನ್ನ ಧ್ವನಿಯನ್ನು ಬಲಗೊಳಿಸಿರುವ ಬೆನ್ನಲ್ಲೇ ಕೋಮು ಗಲಭೆಯಲ್ಲಿ ತೊಡಗಿಸಿಕೊಂಡಿರುವ ಇತರ ಸಂಘಟನೆಗಳನ್ನು ಬ್ಯಾನ್ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಪಿಎಫ್ಐ ಜತೆ ಕರಾವಳಿ ಕರ್ನಾಟಕದಲ್ಲಿ ಗಲಭೆ ಹಬ್ಬಿಸುತ್ತಿರುವ ಬಜರಂಗದಳ, ಶ್ರೀರಾಮಸೇನೆ ಮತ್ತು ಇತರ ಸಂಘಟನೆಗಳೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಕೊಲೆ ಹಿಂದೆ ಪಿಎಫ್ಐ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಸಂಘಟನೆ ನಿಷೇಧ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ಯಾವುದೇ ಸಂಘಟನೆಗಳಿಗೆ ನಾವು ನಿಷೇಧ ಮಾಡಲು ಬರುವುದಿಲ್ಲ. ಏನಿದ್ದರೂ ಕೇಂದ್ರ ಸರಕಾರ ಬ್ಯಾನ್ ಮಾಡಬೇಕು ಎಂದು ಚೆಂಡನ್ನು ಕೇಂದ್ರದ ಅಂಗಳಕ್ಕೆ ಅವರು ರವಾನಿಸಿದೆ.
ಪಿಎಫ್ ಐ ಸಂಘಟನೆ ಸದ್ಯ ಬ್ಯಾನ್ ಇಲ್ಲ: ರಾಮಲಿಂಗಾರೆಡ್ಡಿ
"ಪಿಎಫ್ಐ ಮಾತ್ರವಲ್ಲ ಕೋಮು ಸಾಮರಸ್ಯ ಕೆಡಿಸುವ ಎಲ್ಲಾ ಸಂಘಟನೆಗಳ ವಿರುದ್ಧ ನಾವು ಕ್ರಮ ಕೈಗೊಳ್ಳಲಿದ್ದೇವೆ. ಅದು ಪಿಎಫ್ಐ ಆಗಿರಬಹುದು ಅಥವಾ ಬಜರಂಗದಳವಾಗಿರಬಹುದು, ಮುತಾಲಿಕ್ ರ ಸಂಘಟನೆಯೂ ಆಗಿರಬಹುದು (ಶ್ರೀರಾಮ ಸೇನೆ)," ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿದೆ. ಆದರೆ ಚುನಾವಣೆ ಹತ್ತಿರದಲ್ಲಿರುವ ಹಿನ್ನಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ನಿಷೇಧಿಸುವ ಹೊಣೆಯನ್ನು ಕೇಂದ್ರಕ್ಕೆ ವರ್ಗಾಯಿಸಿ ಕೈತೊಳೆದುಕೊಂಡಿದೆ.
"ಕೋಮು ಗಲಭೆ ಹಿಂದಿರುವ ಎಲ್ಲಾ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರ ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ರಾಜ್ಯ ಸರಕಾರಕ್ಕೆ ಈ ಅಧಿಕಾರವಿಲ್ಲ," ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.
"21 ಕಾರ್ಯಕರ್ತರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಸುಳ್ಳು ವಾದಿಸುತ್ತಿದೆ. ಪ್ರಕರಣಗಳ ವಿವರ ನೋಡಿದರೆ 11 ಸಂಘಪರಿವಾರದ ಸದಸ್ಯರು ಮತ್ತು 6 ಪಿಎಫ್ಐ ಸದಸ್ಯರು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿಯೂ ಯಾವುದೇ ಸಂಘಟನೆಗಳ ಜತೆ ಸಂಬಂಧವಿಲ್ಲ," ಎಂದು ಈ ಹಿಂದೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.