'ಸಾಯೋದ್ರೊಳಗೆ ಒಂದು ಮಗುವಾದ್ರೂ ಎಸ್ಸೆಸ್ಸೆಲ್ಸಿ ಮಾಡಲಿ'!
"ಸ್ವಾಮಿ ನಾನು ಸಾಯೋದ್ರೊಳಗೆ ನಮ್ಮೂರ್ನಲ್ಲಿ ಒಂದು ಮಗುವಾದ್ರೂ ಎಸ್ಎಸ್ಎಲ್ಸಿ ಮಾಡ್ತದೆ ಅಂತ ನೋಡೋ ಆಸೆ!"
ಇದೇನಪ್ಪ ಇವರಿಗೆ ಇಂತಾ ಆಸೆ ಎಂದು ಆಶ್ಚರ್ಯ ಪಡಬೇಡಿ, ಮುಂದೆ ಓದಿ. ಹೌದು ಸ್ವಾಮಿ ನೀವು ಕೇಳ್ತಾ ಇರೋದು ನಿಜಾನೇ... ಎಲ್ಲರಿಗೂ ನನ್ಮಗ ಇಂಜಿನಿಯರ್ ಆಗ್ಬೇಕು, ನನ್ಮಗಳು ಡಾಕ್ಟರ್ ಆಗ್ನೇಕು, ಟೀಚರ್ ಆಗ್ಬೇಕು, ವಿಜ್ಞಾನಿ ಆಗಬೇಕು ಅಂದುಕೊಳ್ಳೊ ಈ ಕಾಲದಲ್ಲಿ ಇವರೇನು ಇನ್ನೂ 10ನೇ ತರಗತಿ ಪಾಸಾಗೋ ಕನಸು ಕಾಣ್ತಿದ್ದಾರೆ ಅಂತ ಆಶ್ಚರ್ಯವಾಗಬಹುದು.
ಆದ್ರೆ ಇದು ನನ್ನೊಬ್ಬನ ಕನಸಲ್ಲ ನಮ್ಮೂರಲ್ಲಿರೋ ಎಲ್ಲರ ಕನಸು. ಈ ಕನಸು ಯಾವಾಗ ಈಡೇರುತ್ತೋ ನೋಡೋಣ.. ನಾನು ಶಾಲೆ ಹೊಸ್ತಿಲು ತುಳಿದಿಲ್ಲ, ನನ್ಮಕಳಾದ್ರೂ ಹೋಗ್ತಾರೆ ಅಂದ್ಕೊಡಿದ್ದೆ ಆದ್ರೆ ಅದೇ ರಾಗ! ಹೋಗ್ಲಿ ಅವರ ಮಕ್ಕಳಾದ್ರೂ ಹೋಗ್ತಾರೆ ಬಿಡು ಅಂದುಕೊಂಡೆ, ಆದ್ರೆ ಈ ಕನಸು ಕೂಡ ನೆರವೇರೊಹಾಂಗಿಲ್ಲ.. [ಸಮಾಜವೆಂಬ ಹೂವಿನ ಪಕಳೆಗಳು ಮಕ್ಕಳು]
ಅಂತ ಮಾತಿಗೆ ತೊಡಗೋದು ಒಂದು ಪುಟ್ಟ ಗ್ರಾಮದ ದೊಡ್ಡಣ. ಇಂಥ ಶೈಕ್ಷಣಿಕವಾಗಿ ಹಿಂದುಳಿದಿರೋ ಕುಗ್ರಾಮ ಎಲ್ಲಿದಿಯೋ ಅಂತ ನೀವು ಯೋಚಿಸುತ್ತಿರಬಹುದು. ಈ ಕುಗ್ರಾಮ ರಾಜಧಾನಿಗೆ ದೂರದಲ್ಲಿ ಯವುದೋ ಮೂಲೆಯಲ್ಲಿ ಇರಬಹುದು ಎಂದೂ ಭಾವಿಸುತ್ತಿರಬಹುದು. ಆದರೆ ಈ ಗ್ರಾಮ ಇರುವುದು ನಮ್ಮ ರಾಜಧಾನಿಯಿಂದ ಕೇವಲ 60 ಕಿ.ಮೀ ದೂರದಲ್ಲಿ! ಆಶ್ಚರ್ಯವಾದರೂ ಸತ್ಯ!
ಹೌದು ರಾಜಧಾನಿಯ ಪಕ್ಕದ ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯ ಇದೇ ತಾಲ್ಲೂಕಿನ ಅಂಗರೇಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬುಡುಗಾನೂರೇ ಈ ಕುಗ್ರಾಮ. ಊರು ಆರಂಭವಾದಾಗಿನಿಂದ ಇಲ್ಲಿಯವರೆಗೂ ಒಂದು ಮಗುವೂ 10ನೇ ತರಗತಿಗೆ ಹೋಗಿಲ್ಲ ಎಂದರೆ ಈ ಊರಿನ ಶಿಕ್ಷಣದ ಘೋರ ಪರಿಸ್ಥಿತಿ ಹೇಗಿರಬಹುದು ಯೋಚಿಸಿ. [ಮನಸಿದ್ದರೆ ಮಾರ್ಗವೇ? ಮನಸ್ಸೇ ಮಹಾದೇವನೇ?]
ಇದಕ್ಕೆ ಕಾರಣ ಕೇವಲ 5ನೇ ತರಗತಿವರೆಗೂ ಮಾತ್ರ ಶಾಲೆ. 5ನೇ ತರಗತಿ ನಂತರ ಶಾಲೆಗೆ ಕಳುಹಿಸುವ ಮನಸ್ಸಿದ್ದರೂ ಆಗುವುದಿಲ್ಲ. ಮುಂದೆ ಹೋಗಬೇಕೆಂದರೂ ಅಲ್ಲಿಗೆ ಹೋಗಲು ಬಸ್ಸಿಲ್ಲ. 5 ಕಿ.ಮೀ.ಗೂ ಹೆಚ್ಚು ಕಾಡಿನಲ್ಲಿ ನಡೆದುಕೊಂಡು ಹೋಗಲು ಭಯ. ಈ ಕುರಿತು ಯಾರನ್ನು ಕೇಳಿಕೊಂಡರು ಕೇವಲ ಈಡೇರದ ಭರವಸೆಗಳೇ.. ಇಲ್ಲಿ ಕೇವಲ ಪ್ರೌಢಶಿಕ್ಷಣದ ಸಮಸ್ಯೆ ಅಷ್ಟೇ ಅಲ್ಲ ಇಲ್ಲಿ ಮಕ್ಕಳ ಪರಿಸ್ಥಿತಿ ತುಂಬಾ ಘೋರವಾಗಿದೆ.
ಇದುವರೆಗೂ ಅಂಗನವಾಡಿ ಶುರುವಾಡಿಲ್ಲ.. ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ಇಲ್ಲ, ಮಕ್ಕಳ ಆರೋಗ್ಯದ ಮೇಲೂ ಇದರ ಪರಿಣಾಮ ಜಾಸ್ತಿನೇ ಇದೆ. ಗರ್ಭಿಣಿಯರ ಹಾರೈಕೆ, ಅಪೌಷ್ಟಿಕತೆ ಪರಿಣಾಮದ ಕುರಿತು ಯಾರಿಗೂ ಕಾಳಜಿ ಇಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಕೂಡ ಅಪಾರ.
ಇವು ಯಾರ ಕಣ್ಣಿಗೂ ಸಹ ಕಾಣುವುದು ಇಲ್ಲ. ಇದರ ಕುರಿತು ಮಾತನಾಡುವವರೂ ಇಲ್ಲ. ಚಿಕ್ಕ ವಯಸ್ಸಿಗೆ ಸಾಯುವ ಮಕ್ಕಳೂ ಸಹಾ ಹೆಚ್ಚೇ. ಯಾವ ಮೂಲಭೂತ ಸೌಲಭ್ಯಗಳು ಈ ಗ್ರಾಮಕ್ಕೆ ಇನ್ನೂ ಕಾಲಿಟ್ಟಿಲ್ಲ. ಯಾರಿಗೆ ಮನವಿಗಳನ್ನು ಕೊಟ್ಟರೂ ಫಲವಿಲ್ಲ.
ಪ್ರತಿ ವರ್ಷ ಮಕ್ಕಳ ದಿನಾಚರಣೆಗಳನ್ನು ಆಡಂಬರದಿಂದ ಆಚರಿಸುತ್ತೇವೆ. ಸಾಲು ಸಾಲು ಭಾಷಣಗಳನ್ನು ಮಾಡುತ್ತೇವೆ. ಆದರೆ ಇವು ಯಾವುವೂ ಈ ಬುಡುಗಾನೂರು ಮಕ್ಕಳ ಪರಿಸ್ಥಿತಿಯನ್ನು ಬದಲಾಯಿಸಿಲ್ಲ. ಅದೇ ಕಷ್ಟಗಳು... ಮತ್ತೇ ಅದೇ ಮಕ್ಕಳ ದಿನಾಚರಣೆ... ಇಷ್ಟೆಲ್ಲಾ ಕಷ್ಟಗಳ ನಡುವೆ ನಮ್ಮ ಮಕ್ಕಳು ಎಲ್ಲ ಸೌಲಭ್ಯಗಳನ್ನು ಪಡೆದು ಉತ್ತಮ ಬಾಲ್ಯ ಕಳೆದು ಉತ್ತಮ ಪ್ರಜೆಯಾಗಬೇಕೆಂಬ ಆಸೆಗಳು ಈ ಗ್ರಾಮದ ಪ್ರತಿಯೊಬ್ಬ ಪೋಷಕರಲ್ಲಿ ಇನ್ನೂ ಬತ್ತಿಲ್ಲ... ಈ ಬತ್ತದ ಆಸೆ ಇನ್ನಾದರೂ ಈಡೇರುವುದೇ?
ಚಿಕ್ಕಬಳ್ಳಾಪುರದಿಂದ ವಿಧಾನಸಭೆ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಡಾ. ಕೆ. ಸುಧಾಕರ್ ಅವರೇ, ಇದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕ, ಮಾಡಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿಯವರೇ ಏನು ಮಾಡುತ್ತಿದ್ದೀರಿ? ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು. ಇಲ್ಲಿನ ಸರಕಾರ ಕೂಡ ಕಾಂಗ್ರೆಸ್ಸಿನದೆ. ಅಲ್ವೆ ಸಿದ್ದರಾಮಯ್ಯನವರೆ? [ಈ ಶಾಲೆಯಲ್ಲಿ ಚಾಚಾ ನೆಹರೂಗೆ ಕಡೆಯ ವಂದನೆ!]
ಲೇಖಕರು: ಸತೀಶ್ ಜೆ., ಜಿಲ್ಲಾ ಸಂಚಾಲಕರು, ಆರ್.ಟಿ.ಇ ಕಾರ್ಯಪಡೆ, ಚಿಕ್ಕಬಳ್ಳಾಪುರ