ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಮತ್ತೆ ನನೆಗುದಿಗೆ ಬಿದ್ದಿದ್ಯಾಕೆ ಗೊತ್ತಾ?
ಬೆಂಗಳೂರು, ಜ. 20: ಕೆಪಿಸಿಸಿಗೆ ಅಧ್ಯಕ್ಷರ ನೇಮಕಾತಿ ಸದ್ಯಕ್ಕೆ ಆಗುವಂತೆ ಕಾಣುತ್ತಿಲ್ಲ. ಒಂದೆಡೆ ದೆಹಲಿ ಚುನಾವಣೆ, ಮತ್ತೊಂದೆಡೆ ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಮೂಡದ ಒಮ್ಮತದ ಹಿನ್ನೆಲೆಯಲ್ಲಿ ಕೆಪಿಸಿಸಿಗೆ ಅಧ್ಯಕ್ಷರ ನೇಮಕ ಮತ್ತೆ ನನೆಗುದಿಗೆ ಬಿದ್ದಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಹಾಗೂ ವಿರೋಧ ಪಕ್ಷ ನಾಯಕ ಸ್ಥಾನಗಳನ್ನು ಪ್ರತ್ಯೇಕಿಸುವುದು ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರೆ, ಪ್ರತ್ಯೇಕ ವಾಗಲೇಬೇಕು ಅಂತಾ ಮಾಜಿ ಸಚಿವರಾದ ಡಿಕೆ ಶಿವಕುಮಾರ್ ಹಾಗೂ ಡಾ. ಜಿ. ಪರಮೇಶ್ವರ್ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ದೆಹಲಿ ಚುನಾವಣೆ ನೆಪ ಮತ್ತೆ ಕೆಪಿಸಿಸಿ ಸಾರಥಿ ನೇಮಕ ಮುಂದೂಡಿಕೆ
ಕೆಪಿಸಿಸಿಗೆ ಅಧ್ಯಕ್ಷರ ನೇಮಕಾತಿ ಸದ್ಯಕ್ಕಿಲ್ಲ ಎಂಬ ಮಾಹಿತಿ ಬಂದಿದೆ. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಪೂರ್ಣವಾಗಿ ತೊಡಗಿಸಿಕೊಂಡಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ಮಧ್ಯೆ ಹೆಚ್ಚುತ್ತಿರುವ ಅಂತರವೇ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬಕ್ಕೆ ಕಾರಣ ಎಂಬ ಮಾಹಿತಿ ಕಾಂಗ್ರೆಸ್ ವಲಯದಿಂದ ಕೇಳಿ ಬರುತ್ತಿದೆ.
ಕೆ.ಸಿ.ವೇಣುಗೋಪಾಲ್ ತಲೆದಂಡ? ಕೆಪಿಸಿಸಿ ಉಸ್ತುವಾರಿಗೆ ತೇಲಿಬಂದ ಮೊದಲ ಹೆಸರು!
ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಮ್ಮತದ ಅಭಿಪ್ರಾಯ ಬರುತ್ತಿಲ್ಲವಾದ್ದರಿಂದ ಕೆಪಿಸಿಸಿಗೆ ಅಧ್ಯಕ್ಷರ ನೇಮಕಾತಿಗೆ ಹೈಕಮಾಂಡ್ ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ. ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ಎರಡನ್ನು ಪ್ರತ್ಯೇಕ ಮಾಡಬಾರದು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಕಾರ್ಯಾಧ್ಯಕ್ಷರ ಹುದ್ದೆಗಳ ಸೃಷ್ಟಿ ಬೇಡ ಎಂದ ಮೂಲ ಕಾಂಗ್ರೆಸ್ಸಿಗರು
ಇನ್ನೂ ಮೂರು ಜನರನ್ನು ಜಾತಿ ಆಧಾರದಲ್ಲಿ ಕಾರ್ಯಾಧ್ಯಕ್ಷರ ಹುದ್ದೆಗೆ ನೇಮಕ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದಾರೆ. ಆದರೆ ವಿರೋಧ ಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಎರಡೂ ಹುದ್ದೆಗಳನ್ನು ಪ್ರತ್ಯೇಕಿಸುವುದು ಬೇಡ ಎಂದು ಅವರು ಪಟ್ಟು ಹಿಡಿದಿದ್ದಾರೆ.
ಆದರೆ ಇದಕ್ಕೆ ವಿರುದ್ಧವಾಗಿ ಮೂಲ ಕಾಂಗ್ರೆಸ್ಸಿಗರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಎರಡೂ ಹುದ್ದೆಗಳನ್ನು ಪ್ರತ್ಯೇಕ ಮಾಡಬೇಕು. ಆದರೆ ಈಗಿರುವ ಒಂದು ಕಾರ್ಯಾಧ್ಯಕ್ಷ ಹುದ್ದೆ ಮಾತ್ರ ಮುಂದುವರೆಯಲಿ. ಹೆಚ್ಚಿನ ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸುವುದು ಬೇಡ. ಇನ್ನೂ 3 ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿ ಮಾಡುವುದರಿಂದ ಅಧಿಕಾರ ಹಂಚಿಕೆ ಮಾತ್ರ ಆಗುತ್ತದೆ. ಪಕ್ಷ ಸಂಘಟನೆ ಮೇಲೆ ಅದು ಪರಿಣಾಮ ಬೀರುತ್ತದೆ ಎಂಬುದು ಮೂಲ ಕಾಂಗ್ರೆಸ್ಸಿಗರ ವಾದ.
ಸ್ಥಾನಮಾನದ ಬಗ್ಗೆ ನಾನೇನೂ ಹೇಳಲ್ಲ: ಡಿಕೆಶಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ನಾನು ವ್ಯಕ್ತಿ ಪೂಜೆ ಮಾಡುವವನಲ್ಲ, ಪಕ್ಷ ಪೂಜೆ ಮಾಡುವವನು ಎಂದು ಕಾರ್ಯಾಧ್ಯಕ್ಷರ ಹುದ್ದೆ ಬೇಡ ಎಂದು ನೇರವಾಗಿಯೆ ಹೇಳಿದ್ದಾರೆ. ನಾನು ಗುಂಪು ಕಟ್ಟಿಕೊಂಡು ಹೋಗುವವನಲ್ಲ. ಯಾರೂ ಏನೂ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಯಾರು ಎಷ್ಟೆಷ್ಟು ಬಣ ಕಟ್ಟಿಕೊಳ್ತಾರೊ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.
ನನ್ನ ಏನೂ ಕೇಳ್ಬೇಡಿ, ನಾನು ಯಾವ ಗುಂಪಿಗೂ ಸೇರಿದವನಲ್ಲ: ಡಿಕೆಶಿ
ವಿರೋಧ ಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನಗಳನ್ನು ಪ್ರತ್ಯೇಕ ಮಾಡಿದರೆ ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಅದೇ ರೀತಿ ಮಾಡಿದ್ದರು. ಇಲ್ಲಿಯೂ ಮಾಡಿದರೆ ತಪ್ಪಿಲ್ಲ. ಆದರೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನು ವಿರೋಧಿಸಿದ್ದಾರೆ.
ಮೂಡದ ಒಗ್ಗಟ್ಟು, ನೇಮಕ ನೆನಗುದಿಗೆ
ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮೂಲ ಕಾರಣವೇ ಬೇರೆ ಇದೆ ಎಂದು ಕಾಂಗ್ರೆಸ್ ವಲಯದಿಂದಲೇ ಕೇಳಿ ಬಂದಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಮೂಡದ ಒಮ್ಮತವೇ ಅಧ್ಯಕ್ಷರ ನೇಮಕಾತಿ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕೂಡ ಇದೀಗ ಸಿದ್ದರಾಮಯ್ಯ ಅವರ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ಮೂಲ ಕಾಂಗ್ರೆಸ್ಸಿಗರ ನೋವಿಗೆ ಮುಲಾಮು: ಸಿದ್ದುಗೆ ಹೈಕಮಾಂಡ್ ಗುದ್ದು?
ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿ, ವಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನಗಳ ಬಗ್ಗೆ ಒಮ್ಮತದ ತೀರ್ಮಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಬಂದಿಲ್ಲ. ಹಾಗಾಗಿಯೇ ಸಧ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಹುದ್ದೆ ನೆನೆಗುದಿದೆ ಬಿದ್ದಿದೆ ಎನ್ನಲಾಗುತ್ತಿದೆ.