ಸಿಗದ ಸಚಿವ ಸ್ಥಾನ; ಶೆಟ್ಟರ್ ನಿವಾಸದಲ್ಲಿ ಸಭೆ ನಡೆಸಿದ ಶಾಸಕರಾರು?
ಬೆಂಗಳೂರು, ಫೆಬ್ರವರಿ 18: ಬಿ ಎಸ್ ಯಡಿಯೂರಪ್ಪ ಸರ್ಕಾರದ ಸಂಪುಟ ಸರ್ಕಸ್ ಮುಗಿದು ಇನ್ನೇನು ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಸಚಿವ ಸ್ಥಾನ ಸಿಗದ ಉತ್ತರ ಕರ್ನಾಟದ ಬಿಜೆಪಿಯ ಕೆಲ ಪ್ರಮುಖ ಶಾಸಕರು ಯಡಿಯೂರಪ್ಪ ವಿರುದ್ಧ ಮತ್ತೆ ಬಂಡಾಯ ಎದ್ದರಾ? ಎಂಬ ಅನುಮಾನ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.
ಸೋಮವಾರ ಸಂಜೆ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ನಿವಾಸದಲ್ಲಿ ಸಚಿವ ಸ್ಥಾನ ಸಿಗದ ಕೆಲವು ಅತೃಪ್ತ ಶಾಸಕರು ರಾತ್ರಿ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಖಾತೆ ಹಂಚಿಕೆ ಕಗ್ಗಂಟು; ವರದಿ ಕೇಳಿದ ಬಿಜೆಪಿ ಹೈಕಮಾಂಡ್!
ಆದರೆ, ಜಗದೀಶ್ ಶೆಟ್ಟರ್ ಅವರು, ಈ ಸಭೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಪ್ರತಿಕ್ರಿಯಿಸದೇ, ನೇರವಾಗಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಸಂತೋಷ್ ಅವರ ಮೇಲೆ ತೀವ್ರ ಕಿಡಿಕಾರಿದ್ದಾರೆ.
ಸಭೆಯಲ್ಲಿ ಇದ್ದ ಶಾಸಕರಾರು?
ಸೋಮವಾರ ಜಗದೀಶ್ ಶೆಟ್ಟರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬೀಳಗಿ ಶಾಸಕ ಮುರುಗೇಶ ನಿರಾಣಿ, ದೇವದುರ್ಗ ಶಾಸಕ ಶಿವನಗೌಡ ನಾಯಕ್, ಸುರಪುರ ಶಾಸಕ ರಾಜುಗೌಡ, ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಇದ್ದರು ಎನ್ನಲಾಗಿದೆ.
ಬಿ ವೈ ವಿಜಯೇಂದ್ರ ಮೇಲೆ ಅಸಮಾಧಾನ
ಸಭೆಯಲ್ಲಿ ಮುಖ್ಯಮಂತ್ರಿ ಪುತ್ರ ಬಿ ವೈ ವಿಜಯೇಂದ್ರ ಅವರ ಬಗ್ಗೆ ತೀವ್ರ ಅಪಸ್ವರ ಕೇಳಿ ಬಂದಿದೆ ಎಲ್ಲವೂ ವಿಜಯೇಂದ್ರ ಅವರ ನಿಗಾದಲ್ಲಿ ನಡೆಯುತ್ತಿದೆ. ಇದು ಸರಿಯಲ್ಲ. ಸಭೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತರಬೇಕು ಎಂದು ಯತ್ನಾಳ ಸೇರಿದಂತೆ ಹಲವು ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
'ಇದು ಸಿಎಂ ಯಡಿಯೂರಪ್ಪ ಸರ್ಕಾರವೊ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಪುಟವೊ?'
ಬಿಎಸ್ವೈ ಆಪ್ತ ಸಂತೋಷ್ ಮೇಲೆ ಕಿಡಿ
ಸಭೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್ ಅವರು, ನೇರವಾಗಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಎನ್ ಆರ್ ಸಂತೋಷ್ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಸಮಾನ ಮನಸ್ಕ ಶಾಸಕರು ಸಭೆ ಸೇರಿದ್ದೇವು. ಇದೊಂದು ಅತೃಪ್ತರ ಸಭೆ ಎಂದು ಮಾಧ್ಯಮಗಳಲ್ಲಿ ಬಿಂಬಿತವಾಗುವಂತೆ ಮಾಡಿದ್ದು ಸಂತೋಷ್ ಎಂದು ಆರೋಪಿಸಿದ್ದಾರೆ. ಸಚಿವ ಸ್ಥಾನ ಕೊಡುವುದು ಬಿಡುವುದು ಸಿಎಂಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಅಸಮಧಾನಿತ ಉತ್ತರದ ಶಾಸಕರು
ಒಟ್ಟಿನಲ್ಲಿ ಉತ್ತರ ಹಿರಿಯ ಬಿಜೆಪಿ ಶಾಸಕರೇ ಪಾಲ್ಗೊಂಡಿದ್ದ ಸೋಮವಾರ ಸಂಜೆ ನಡೆದ ಸಭೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಬಂಡಾಯಕ್ಕೆ ಕಾರಣವಾಗುತ್ತಾ ಎನ್ನುವುದನ್ನು ಕಾಯ್ದು ನೋಡಬೇಕಿದೆ. ಈ ಸಭೆಯಲ್ಲಿ ಪ್ರಸಕ್ತ ಪಕ್ಷದ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗಿದ್ದು, ಸಚಿವ ಸ್ಥಾನ ನೀಡುವಾಗ ಪ್ರದೇಶ, ಜಾತಿ ಮತ್ತು ಹಿರಿತನಕ್ಕೆ ಮನ್ನಣೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ, ಸಚಿವ ಸ್ಥಾನ ಸಿಗದ ಉತ್ತರ ಕರ್ನಾಟಕದ ಬಿಜೆಪಿ ಹಿರಿಯರು ಒಳಗೊಳಗೆ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.