ಉತ್ತರ ಕರ್ನಾಟಕ ಭಾರತಕ್ಕೆ ಸೇರಿದೆ, ಮೋದಿಜೀ ಇತ್ತ ನೋಡಿ!
ಬೆಂಗಳೂರು, ಸೆಪ್ಟೆಂಬರ್ 26: ಅಮೆರಿಕದ ಹ್ಯೂಸ್ಟನ್ನಲ್ಲಿ ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಭಾರತದಲ್ಲಿ ಎಲ್ಲಾ ಚೆನ್ನಾಗಿದೆ' ಎಂದು ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ಹೇಳಿದ್ದರು. ಅವರ ಹೇಳಿಕೆಯನ್ನು ಟೀಕಾಕಾರರು ಕಟುವಾಗಿ ಟೀಕಿಸಿದ್ದರು. ಆರ್ಥಿಕ ಸ್ಥಿತಿ ನೆಲಕಚ್ಚಿದೆ, ನಿರುದ್ಯೋಗ ತಾಂಡವವಾಡುತ್ತಿದೆ, ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಸಾವಿರಾರು ಸಮಸ್ಯೆಗಳು ಕಣ್ಣೆದುರು ಇರುವಾಗ ಎಲ್ಲವೂ ಚೆನ್ನಾಗಿದೆ ಎನ್ನುವ ಮೂಲಕ ಮೋದಿ ಜಗತ್ತಿಗೆ ಸುಳ್ಳಿನ ಕಂತೆ ತೆರೆದಿಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ಅದರಲ್ಲಿಯೂ ಕಳೆದ ಒಂದು ತಿಂಗಳು ಉತ್ತರ ಕರ್ನಾಟಕವಿಡೀ ನೀರಿನಲ್ಲಿ ಮುಳುಗಿ ಹೋಗಿತ್ತು. ಉತ್ತರ ಕನ್ನಡ ಜಿಲ್ಲೆ ಕೂಡ ಮಳೆ ನೀರಲ್ಲಿ ತೋಯ್ದು ಹೋಗಿತ್ತು. ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತೆರಳಿದರು. ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಪರಿಹಾರಕ್ಕಾಗಿ ಮನವಿ ಮಾಡಿದರು.
ಕೇಂದ್ರದಿಂದ ಬಿಎಸ್ವೈಗೆ ಅವಮಾನ, ರಾಜ್ಯಕ್ಕೆ ಅನ್ಯಾಯ: ಸಿದ್ದರಾಮಯ್ಯ ವಾಗ್ದಾಳಿ
ಆದರೆ ಇದುವರೆಗೂ ಕೇಂದ್ರ ಸರ್ಕಾರದಿಂದ ಪ್ರವಾಹ ಪೀಡಿತರ ನೆರವಿಗೆ ಒಂದೇ ಒಂದು ರೂಪಾಯಿ ಪರಿಹಾರ ಘೋಷಣೆಯೂ ಆಗಿಲ್ಲ. ಅತ್ತ ಪರಿಹಾರ ಕಾರ್ಯಗಳು ನಿರೀಕ್ಷಿತ ವೇಗದಲ್ಲ ನಡೆಯದೆ ಜನರು ಮತ್ತಷ್ಟು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅತ್ತ ಗಮನ ನೀಡಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಬಿಜೆಪಿಗೆ ಅತಿ ಹೆಚ್ಚು ಶಾಸಕರು ಮತ್ತು ಸಂಸದರನ್ನು ನೀಡಿರುವ ಉತ್ತರ ಕರ್ನಾಟಕವನ್ನು ಬಿಜೆಪಿ ಸರ್ಕಾರವೇ ನಿರ್ಲಕ್ಷಿಸುತ್ತಿದೆ ಎನ್ನುವುದು ಇಲ್ಲಿನ ಜನರ ಆರೋಪ. ಪರಿಹಾರ ದೊರಕದೆ ಕಂಗಾಲಾಗಿರುವ ಜನತೆ ಈಗ ಸಾಮಾಜಿಕ ಮಾಧ್ಯಮದ ಮೊರೆ ಹೋಗಿದ್ದಾರೆ. ಕೆಲವು ದಿನಗಳಿಂದ ಈ ವಿಚಾರ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದ್ದು, ಈಗ ಹೆಚ್ಚು ಟ್ರೆಂಡ್ ಆಗುತ್ತಿದೆ.
ಉತ್ತರ ಕರ್ನಾಟಕ ಭಾರತಕ್ಕೆ ಸೇರಿದ್ದು
ಟ್ವಿಟ್ಟರ್ನಲ್ಲಿ 'ನಾರ್ತ್ ಕರ್ನಾಟಕ ಬಿಲಾಂಗ್ಸ್ ಟು ಇಂಡಿಯಾ' (ಉತ್ತರ ಕರ್ನಾಟಕ ಭಾರತಕ್ಕೆ ಸೇರಿದ್ದು) ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಆಗುತ್ತಿದೆ. ಏನಿದು ಟ್ರೆಂಡಿಂಗ್ ವಿಚಾರ ಎಂದರೆ, ಇದು ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂಬ ಕೂಗಿನಂತೆ ಅಲ್ಲ. ಉತ್ತರ ಕರ್ನಾಟಕ ಕೂಡ ಭಾರತಕ್ಕೇ ಸೇರಿದೆ, ದಯವಿಟ್ಟು ನಮ್ಮ ಕಡೆ ಗಮನ ಹರಿಸಿ ಎಂದು ಜನರು ಮಾಡುತ್ತಿರುವ ಅಹವಾಲು, ಅವರ ಆಕ್ರಂದನ.
ಬಿಎಸ್ವೈ ಭೇಟಿಗೆ ಸಮಯ ನೀಡದ ಮೋದಿ, ದೆಹಲಿಗೆ ಪ್ರಯಾಣ ಮುಂದೂಡಿಕೆ
ಉತ್ತರ ಕರ್ನಾಟಕ ಉಳಿಸಿ
ಇದರ ಜತೆಗೆ 'ಸೇವ್ ಉತ್ತರ ಕರ್ನಾಟಕ' ಎಂಬ ಮತ್ತೊಂದು ಹ್ಯಾಶ್ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ. ಪ್ರಧಾನಿ ಮತ್ತು ದೇಶದ ಗಮನ ಸೆಳೆಯಲು ಉತ್ತರ ಕರ್ನಾಟಕದ ಮಂದಿ ಮತ್ತು ಅವರ ಪರ ಹೋರಾಟಕ್ಕೆ ಮುಂದಾಗಿರುವವರು ಕಡೇಪಕ್ಷ ಸಾಮಾಜಿಕ ಮಾಧ್ಯಮದ ಮೂಲಕವಾದರೂ ಜನಪ್ರತಿನಿಧಿಗಳು ತಮ್ಮ ಸಮಸ್ಯೆಯ ಬಗ್ಗೆ ಅರಿತುಕೊಂಡು ಪರಿಹಾರ ಕಾರ್ಯಕ್ಕೆ ಮನಸ್ಸು ಮಾಡಲಿದ್ದಾರೆ ಎಂಬ ಸಣ್ಣ ಆಸೆಯೊಂದಿಗೆ ಟ್ವಿಟರ್ನಲ್ಲಿ ಉತ್ತರ ಕರ್ನಾಟಕ ಉಳಿಸಿ ಎಂಬ ಆಂದೋಲನ ನಡೆಸುತ್ತಿದ್ದಾರೆ.
ಭಿಕ್ಷೆ ಬೇಡ, ಪರಿಹಾರ ಕೊಡಿ
ಬದುಕು ಮೂರಾಬಟ್ಟೆ ಆಗಿದೆ... ಉತ್ತರ ತತ್ತರವಾಗಿದೆ... ಈ ತಾತ್ಸಾರ ಸಾಕಾಗಿದೆ ನಮಗೆ.... ಭಿಕ್ಷೆ ಬೇಡ ಸ್ವಾಮಿ ಪರಿಹಾರ ಕೊಡಿ.. ಎಂದು ಸುಬಲ್ ಪಾಟೀಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ಸಿಗರ ಚುಚ್ಚು ಮಾತಿಗಾದರೂ ಪ್ರಧಾನಿ ಮೋದಿ ಒಮ್ಮೆ ರಾಜ್ಯಕ್ಕೆ ಬರಬಾರದೇ?
ಕ್ಲೀನ್ ಸ್ವೀಪ್ ಮಾಡಿಕೊಟ್ಟಿದಕ್ಕೆ ಬೆಲೆ ಇದೆಯೇ?
ಮೋದಿಜೀ, ಅನ್ಯಪಕ್ಷಕ್ಕೆ ಒಂದೇ ಒಂದು ಕ್ಷೇತ್ರ ಬಿಟ್ಟುಕೊಡದೇ ಕ್ಲೀನ್ ಸ್ವೀಪ್ ಮಾಡಿದ ಉತ್ತರ ಕರ್ನಾಟಕಕ್ಕೆ ನೀವು ಕೊಡುತ್ತಿರುವ ಬೆಲೆ ಇದೆನಾ? ಎಂದು ಶಿವ ದೇವಗಿರಿ ಮಠ ಪ್ರಶ್ನಿಸಿದ್ದಾರೆ.
ಒಂದೇ ಒಂದು ರೂಪಾಯಿ ನೀಡಿಲ್ಲ
2018ರ ಸಂಸತ್ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಎಲ್ಲ ಸಂಸದ ಸ್ಥಾನಗಳಲ್ಲಿಯೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಈಗ ಉತ್ತರ ಕರ್ನಾಟಕ ನೆರೆಯಲ್ಲಿ ಮುಳುಗಿದೆ. ಆದರೆ ಕೇಂದ್ರ ಸರ್ಕಾರ ನೆರೆ ಪರಿಹಾರಕ್ಕೆ ಒಂದೇ ಒಂದು ರೂಪಾಯಿ ಹಣ ನೀಡುತ್ತಿಲ್ಲ ಎಂದು ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರ ಸಮಸ್ಯೆಗೆ ಕಿವುಡರಾಗಬೇಡಿ
ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರೇ, ಉತ್ತರ ಕರ್ನಾಟಕ ಜನತೆಯ ಸಂಕಷ್ಟದ ಬಗ್ಗೆ ಕಿವುಡರಾಗಬೇಡಿ. ಅಗತ್ಯ ನೆರೆ ಪರಿಹಾರ ನೀಡಿ. ಕಳೆದ 50 ದಿನಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರು ನಿಮ್ಮ ಮೇಲೆ ನಂಬಿಕೆ ಇಟ್ಟು ಮತ ಹಾಕಿದ್ದಾರೆ. ಅವರ ನಂಬಿಕೆಯನ್ನು ಹುಸಿಗೊಳಿಸಬೇಡಿ ಎಂದು ರಾವಣ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಇದೇ ಏನು ಹೊಸ ಭಾರತ?
ನಮ್ಮ ಅಗತ್ಯಗಳಿಗೆ ನಮ್ಮ ಸರ್ಕಾರಗಳು ಸಹಾಯ ಮಾಡುತ್ತದೆ ಎಂಬ ಭರವಸೆಯೊಂದಿಗೆ ತೆರಿಗೆ ಪಾವತಿಸುತ್ತೇವೆ. ಕರ್ನಾಟಕ ಭಾರಿ ನೆರೆಯಿಂದ ತತ್ತರಿಸಿದೆ. ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೆ ಈ ದಿನದವರೆಗೂ ನಮ್ಮ ಸಹಾಯಕ್ಕೆ ಏನನ್ನೂ ಮಾಡಿಲ್ಲ. ನಾಚಿಕೆಯಾಗಬೇಕು ನಿಮಗೆ. ನಾವು ಕನಸು ಕಾಣುತ್ತಿರುವ ಹೊಸ ಭಾರತ ಇದೆಯೇ? ಎಂದು ಪೂರ್ಣಚಂದ್ರ ತೇಜಸ್ವಿ ಪ್ರಶ್ನಿಸಿದ್ದಾರೆ.
ಇಮಗೆ ಕನಿಷ್ಠ ಕಾಳಜಿಯೂ ಇಲ್ಲ
ನೀವು ಹ್ಯೂಸ್ಟನ್ನಲ್ಲಿ 'ಎಲ್ಲ ಚೆನ್ನಾಗಿದೆ' ಎಂದು ಹೇಳುವಾಗ ಏನನ್ನು ಯೋಚಿಸುತ್ತಿದ್ದಿರಿ? ಜನರು 'ಉತ್ತರ ಕರ್ನಾಟಕ ರಕ್ಷಿಸಿ', 'ಉತ್ತರ ಕರ್ನಾಟಕ ಭಾರತಕ್ಕೇ ಸೇರಿದೆ' ಎಂಬುದನ್ನು ಏಕೆ ಟ್ರೆಂಡ್ ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಕ್ಕಾದರೂ ಕಾಳಜಿ ತೋರಿ. ಈಗಾಗಲೇ ಎರಡು ತಿಂಗಳು ಕಳೆದಿದೆ. ನಿಮಗೆ ಮತ ಹಾಕಿದವರ ಬಗ್ಗೆ ನಿಮಗೆ ಕನಿಷ್ಠ ಕಾಳಜಿಯೂ ಇಲ್ಲ. ನಾಚಿಕೆಯಾಗಬೇಕು ಎಂದು ಸೃಜನ ದೇವ ಎಂಬುವವರು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.