ಮಹದಾಯಿಗಾಗಿ ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದ ಆಕ್ರೋಶ
Recommended Video
ಬೆಂಗಳೂರು, ಡಿಸೆಂಬರ್ 27 : ಮಹದಾಯಿ ನೀರನ್ನು ಉತ್ತರ ಕರ್ನಾಟಕಕ್ಕೆ ಹರಿಸಲು ಕೇಂದ್ರ, ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿವೆಯೆಂದು ದೂರಿರುವ ಉತ್ತರ ಕರ್ನಾಟಕದ ರೈತರ ಆಕ್ರೋಶ ಭುಗಿಲೆದ್ದಿದೆ.
ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗಿನಿಂದಲೇ ಪ್ರತಿಭಟನೆಗಿಳಿದಿರುವ ರೈತರು, ಹಲವಾರು ಕಡೆಗಳಲ್ಲಿ ಹಿಂಸಾಚಾರಕ್ಕಿಳಿದು ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ.
ಡಿಸೆಂಬರ್ 15ರೊಳಗೆ ಮಹದಾಯಿ ವಿವಾದ ಬಗೆಹರಿಸುವುದಾಗಿ ವೀರಾವೇಶದ ವಾಗ್ದಾನ ನೀಡಿದ್ದ ಬಿಜೆಪಿ ನಾಯಕ ಯಡಿಯೂರಪ್ಪ ವಿರುದ್ಧ ರೈತರು ತಿರುಗಿಬಿದ್ದಿದ್ದಾರೆ. ಅವರ ವಿರುದ್ಧ ಧಿಕ್ಕಾರವನ್ನು ಹುಬ್ಬಳ್ಳಿ ರೈತರು ಕೂಗುತ್ತಿದ್ದಾರೆ.
ಕಳಸಾ ಬಂಡೂರಿ ಹೋರಾಟದ ಕೇಂದ್ರ ಬಿಂದುವಾಗಿರುವ ಗದಗ ಜಿಲ್ಲೆಯ ನರಗುಂದ, ನವಲಗುಂದ ಗ್ರಾಮಗಳಲ್ಲಿ ಬಂದ್ ಸಂಪೂರ್ಣವಾಗಿದ್ದು, ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ನವಲಗುಂದದಲ್ಲಿ ವಾಹನವೊಂದಕ್ಕೆ ಕಲ್ಲು ಎಸೆದು, ಗಾಜು ಪುಡಿಪುಡಿ ಮಾಡಲಾಗಿದೆ.
ಬಸ್ ಸಂಚಾರ ಸ್ಥಗಿತ : ಹುಬ್ಬಳ್ಳಿಯ ಕೇಂದ್ರ ಬಸ್ ಸಂಚಾರದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಬೆಂಗಳೂರಿನಲ್ಲಿಯೂ ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕದ ಅನೇಕ ನಗರಗಳಿಗೆ ಹೋಗುವ ಬಸ್ಸುಗಳು ಸಂಚರಿಸುತ್ತಿಲ್ಲ.
ಕೇಂದ್ರ ಮಧ್ಯ ಪ್ರವೇಶಿಸಬೇಕು : ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಎಷ್ಟೋ ಬಾರಿ ಬಂದಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ಧರಣಿ ಕುಳಿತಿರುವ ಉತ್ತರ ಕರ್ನಾಟಕದ ರೈತರ ಕೂಗು ಅವರಿಗೆ ಏಕೆ ಕೇಳಿಸುತ್ತಿಲ್ಲ. ಇನ್ನು ಕರ್ನಾಟಕದಲ್ಲಿ ಹೋರಾಟ ಮಾಡಿ ಪ್ರಯೋಜನವಿಲ್ಲ. ನಮ್ಮ ಹೋರಾಟ ಇನ್ನು ದೆಹಲಿಗೆ ಸಾಗಲಿದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಯಡಿಯೂರಪ್ಪ ಮೋಸ ಮಾಡಿದ್ದಾರೆ : ನಮಗೆ ಇಲ್ಲಸಲ್ಲದ ಭರವಸೆಗಳನ್ನು ನೀಡಿ, ಯಡಿಯೂರಪ್ಪನವರು ರೈತರ ದಾರಿ ತಪ್ಪಿಸಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ನಾವು ಉತ್ತರ ನೀಡಲಿದ್ದೇವೆ ಎಂದು ರೈತರು ಎಲ್ಲ ರಾಜಕೀಯ ಪಕ್ಷಗಳಿಗೂ ಎಚ್ಚರಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲೂ ಬಂದ್ ಬಿಸಿ : ಜಿಲ್ಲೆಯ ರಾಮದುರ್ಗ, ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ಬುಧವಾರ ರಜಾ ನೀಡಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ.
ಬಂದ್ ಹಿನ್ನೆಲೆ ಇಂದು ನಡೆಯಬೇಕಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆ. BE/17 EME14 ವಿಷಯ ಡಿಸೆಂಬರ್ 29ಕ್ಕೆ ಮತ್ತು ಉಳಿದ ವಿಷಯದ ಪರೀಕ್ಷೆಗಳನ್ನು ಜನವರಿ 8ನೇ ತಾರೀಖಿಗೆ ಮುಂದುಡಿದ ವಿಟಿಯು.
ಬಂದ್ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ವಿವಿಧ ಕನ್ನಡಪರ ಮತ್ತು ಸಂಘ ಸಂಸ್ಥೆಗಳ ಬೆಂಬಲಿಸಿ ಹೋರಾಟಕ್ಕೆ ಧುಮುಕಿವೆ.