ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್, ಬಂಧನ ಸಾಧ್ಯತೆ
ಮಂಗಳೂರು, ಫೆಬ್ರವರಿ 25: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ಪೊಲೀಸರು ರಕ್ಷಿತ್ ಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
Recommended Video
ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಹ ಸ್ಟುಡಿಯೋಸ್ ವಿರುದ್ಧ ಕೃತಿಚೌರ್ಯದ ಪ್ರಕರಣವನ್ನು ಲಹರಿ ಆಡಿಯೋ ದಾಖಲಿಸಿತ್ತು, ಪ್ರಕರಣದ ವಿಚಾರಣೆಗೆ ಪದೇ-ಪದೇ ಗೈರಾದ ಕಾರಣ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಜಾಮೀನು ರಹಿತ ಬಂಧನ ವಾರಂಟ್: ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಜಾಮೀನು ರಹಿತ ವಾರೆಂಟ್ ಹೊರಡಿಸಿರುವ ಕಾರಣ ಪರಮ್ವಹಾ ಸ್ಟುಡಿಯೋಸ್ ಮಾಲೀಕ ರಕ್ಷಿತ್ ಶೆಟ್ಟಿ ಹಾಗೂ ಕಿರಿಕ್ ಪಾರ್ಟಿ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಬಂಧನ ಭೀತಿ ಎದುರಾಗಿದೆ. ಇಬ್ಬರು ನ್ಯಾಯಾಲಯಕ್ಕೆ ಶರಣಾಗದಿದ್ದಲ್ಲಿ ಪೊಲೀಸರೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದ ಹಾಡೊಂದಕ್ಕೆ ಸಂಬಂಧಿಸಿದಂತೆ ಲಹರಿ ಆಡಿಯೋ ಸಂಸ್ಥೆಯು ಪರಮ್ವಹಾ ಸ್ಟುಡಿಯೋಸ್ ವಿರುದ್ಧ ದೂರು ದಾಖಲಿಸಿತ್ತು. ಕಿರಿಕ್ ಪಾರ್ಟಿ ಚಿತ್ರದ ಜನಪ್ರಿಯ ಹಾಡು 'ಹೂ ಆರ್ ಯು' ಹಾಡಿನ ಸಂಗೀತವನ್ನು ಲಹರಿ ಆಡಿಯೋ ಒಡೆತನದ ಹಾಡೊಂದರಿಂದ ಕದಿಯಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿತ್ತು.