ನೋ ವರ್ಕ್ ನೋ ಪೇ : ಸಾರಿಗೆ ನೌಕರರಿಗೆ ಟಾಂಗ್ ಕೊಟ್ಟ ಸರ್ಕಾರ
ಬೆಂಗಳೂರು, ಏಪ್ರಿಲ್ 07: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ಧಿಷ್ಟ ಅವಧಿ ಮುಷ್ಕರಕ್ಕೆ ಇಳಿದಿರುವ ಸಾರಿಗೆ ನೌಕರರ ವೇತನ ಕಡಿತ ಮಾಡುವುದಾಗಿ ಸರ್ಕಾರ ಆದೇಶ ಮಾಡಿದೆ. "ನೋ ವರ್ಕ್ ನೋ ಪೇ" ಎಂಬ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಸಾರಿಗೆ ನೌಕರರು ಇದಕ್ಕೆ ಕಿಂಚಿತ್ತೂ ಸೊಪ್ಪು ಹಾಕದೇ ಮುಷ್ಕರ ಮುಂದವರೆಸಿದ್ದಾರೆ.
ಇಂದು ಕೆಲಸಕ್ಕೆ ಹಾಜರಾಗದ ನೌಕರರಿಗೆ ವೇತನ ಕಡಿತ ಮಾಡಲಾಗುತ್ತದೆ. ದೀರ್ಘ ರಜೆ ಹಾಗೂ ವಾರದ ರಜೆ ಇರುವವರಿಗೆ ಈ ಆದೇಶ ಅನ್ವವಾಗುವುದಿಲ್ಲ. ಇವತ್ತು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಜೋಡಿಸಿರುವ ನೌಕರರಿಗೆ ಮಾತ್ರ ಅನ್ವಯವಾಗಲಿದೆ. ಈ ಕುರಿತ ಆದೇಶ ಸಾರಿಗೆ ಇಲಾಖೆಯಿಂದ ಹೊರ ಬಿದ್ದರೂ ಸಹ ಸಾರಿಗೆ ನೌಕರರ ಮುಷ್ಕರ ಕೈ ಬಿಟ್ಟಿಲ್ಲ. ಮುಷ್ಕರ ನಿರತ ಕಾರ್ಮಿಕರ ಮಖಂಡರ ಜತೆ ನಡೆಸಿದ ಹಲವು ಸುತ್ತಿನ ಮಾತುಕತೆ ವಿಫಲದ ನಂತರ ಸರ್ಕಾರ ಈ ರೀತಿಯ ಮಹತ್ವದ ಆದೇಶ ಹೊರಡಿಸಿದೆ. ಆದರೆ ಸಾರಿಗೆ ನೌಕರರು ಇದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಚಾಲಕ ಮೇಲೆ ಗರಂ: ಲಾಕ್ ಡೌನ್ ವೇಳೆ ಮನೆಯಲ್ಲಿದ್ದರೂ ಮೂರು ತಿಂಗಳ ಕಾಲ ವೇತನ ಕೊಟ್ಟಿದ್ದಾರೆ. ನಾವು ಇರುವುದು ಜನ ಸೇವೆ ಮಾಡಲಿಕ್ಕೆ ಎಂದು ಹೇಳಿ ಕರ್ತವ್ಯಕ್ಕೆ ಹಾಜರಾಗಿದ್ದ ಚಾಲಕ ತ್ಯಾಗರಾಜ್ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ತ್ಯಾಗರಾಜ್ 13ನೇ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2014 ರಲ್ಲಿಯೇ ಕರ್ತವ್ಯ ಲೋಪ ಎಸಗಿದ ಆರೋಪಕ್ಕೆ ಗುರಿಯಾಗಿದ್ದರು. ಬಿಎಂಟಿಸಿ ಅಧಿಕಾರಿಗಳ ಜತೆ ಶಾಮೀಲಾಗಿ ಈ ರೀತಿ ಮಾಡುತ್ತಿದ್ದಾರೆ. ತನ್ನ ತಪ್ಪು ಮುಚ್ಚಿಕೊಳ್ಳಲು ಹೀಗೆ ಮಾಡಿರಬಹುದು. ಒಬ್ಬ ನೌಕರ ಬಸ್ ಸಂಚಾರ ಮಾಡುವುರಿಂದ ನಮ್ಮ ಹೋರಾಟಕ್ಕೆ ತೊಂದರೆಯಾಗುವುದಿಲ್ಲ ಎಂದು ಮುಷ್ಕರ ನಿರತ ಸಹೋದ್ಯೋಗಿಗಳು ಕಿಡಿ ಕಾರಿದ್ದಾರೆ.
Recommended Video