KSRTC: ಕರ್ನಾಟಕದಲ್ಲಿ ಸಾರಿಗೆ ನೌಕರರು ಲೈನ್ಮನ್ಗಳಿಗಿಂತ ಕಡೆ !
ಬೆಂಗಳೂರು, ಮಾ. 17: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಕೆಪಿಟಿಸಿಎಲ್ ಲೈನ್ಮನ್ಗಳಿಗಿಂತಲೂ ಕಡೆ. ಸಾರಿಗೆ ಇಲಾಖೆಯಲ್ಲಿ ಇಪ್ಪತ್ತೆಂಟು ವರ್ಷ ಸೇವೆ ಸಲ್ಲಿಸಿದ ನೌಕರರು 35 ಸಾವಿರ ವೇತನ ಪಡೆಯೋದು ಕಷ್ಟ. ಅದೇ ಕೆಪಿಟಿಸಿಎಲ್ ನಲ್ಲಿ ಲೈನ್ಮನ್ಗಳು ಗರಿಷ್ಠ 80 ಸಾವಿರ ವರೆಗೂ ಸಂಬಳ ತಗೋತಾರೆ. ಆರು ವರ್ಷವಾದ್ರೂ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿಲ್ಲ. ನಮ್ಮ ವೇತನ ನ್ಯಾಯಸಮ್ಮತವಾಗಿ ಪರಿಷ್ಕರಣೆ ಮಾಡದಿದ್ದರೆ ಮುಂದಿನ ಎಲ್ಲಾ ಚುನಾವಣೆ ಬಹಿಷ್ಕರಿಸಿ ವೋಟು ಬದ್ಲು ನೋಟಾ ಚಲಾವಣೆ ಮಾಡ್ತೀವಿ!
ಸಾರಿಗೆ ಇಲಾಖೆ ಮತ್ತು ಸರ್ಕಾರದ ನಡೆ ಬಗ್ಗೆ ಸಾರಿಗೆ ನೌಕರರು ಮತ್ತೆ ರೋಸಿ ಹೋಗಿದ್ದಾರೆ. ವೇತನ ಪರಿಷ್ಕರಣೆ ಮಾಡದೇ ಸರ್ಕಾರ ಅನುಸರಿಸುತ್ತಿರುವ ನೀತಿಯಿಂದ ಸಾರಿಗೆ ನೌಕರರು ಹೊಸ ಹೋರಾಟದ ಹಾದಿ ಹಿಡಿಯುವ ಬಗ್ಗೆ ಮಾತನಾಡುತ್ತಿದ್ದಾರೆ. ಜನರ ಸೇವೆಗೆ ತೊಂದರೆಯಾಗದಂತೆ ಈ ಭಾರಿ ಮುಂದೆ ಎದುರಾಗುವ ಎಲ್ಲಾ ಚುನಾವಣೆ ಬಹಿಷ್ಕರಿಸುವುದು, ಇಲ್ಲವೇ ನೋಟಾ ಚಲಾವಣೆ ಮಾಡುವ ನಗ್ಗೆ ನೌಕರರ ವಲಯದಲ್ಲಿ ಭಾರೀ ಚರ್ಚೆ ನಡೆಸುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಸಾರಿಗೆ ನೌಕರರ ಹೋರಾಟದ ಬಿಸಿ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ವೇತನ ಪರಿಷ್ಕರಣೆ ಬಗ್ಗೆ ಉಡಾಫೆ ಉತ್ತರ :
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾರಿಗೆ ನೌಕರರು ಕನಿಷ್ಠ ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸ ಮಾಡಿಸಲಾಗದೇ ಆನ್ಲೈನ್ ಆಪ್ಗಳಲ್ಲಿ ಸಾಲ ಮಾಡಿ ಬಡ್ಡಿ ಕಟ್ಟಲಾಗದೇ ಬಾಯಿ ಬಡೆದುಕೊಳ್ಳುತ್ತಿದ್ದಾರೆ. 2021 ರ ಮುಷ್ಕರದ ಬಳಿಕ ನ್ಯಾಯ ಸಮ್ಮತ ವೇತ ಪರಿಷ್ಕರಣೆಯಾಗುತ್ತದೆ ಎಂದು ಕಾದು ಕುಳಿತಿದ್ದ ಸಾರಿಗೆ ನೌಕರರಿಗೆ ಸಾರಿಗೆ ಇಲಾಖೆ ಉಡಾಫೆ ಉತ್ತರ ನೀಡಿದೆ.
ಕೋರ್ಟ್ಗೆ ಬೆಲೆ ಕೊಟ್ಟ ನೌಕರರ ಕಥೆ ಕೇಳಿ:
ನಿಯಮ ಬದ್ಧವಾಗಿ 2020 ರಲ್ಲಿಯೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ನಾನಾ ಕಾರಣಗಳನ್ನು ನೀಡಿ ಪರಿಷ್ಕರಣೆ ಮಾಡದ ಕಾರಣ 2021 ಮಾರ್ಚ್ ನಲ್ಲಿ ಹದಿನೈದು ದಿನ ಮುಷ್ಕರ ನಡೆಸಿ ರಾಷ್ಟ್ರದ ಗಮನ ಸೆಳೆದಿದ್ದರು. ನ್ಯಾಯಾಲಯ ಮಧ್ಯ ಪ್ರವೇಶಿಸಿ ಮೊದಲು ಸೇವೆ ಆರಂಭಿಸಿ ಎಂದು ಹೈಕೋರ್ಟ್ ಹೇಳಿತ್ತು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಿದ್ದರು. ಮುಷ್ಕರ ನಡೆದು ಮತ್ತೆ ಒಂದು ವರ್ಷ ಕಳೆದಿದೆ. ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಏನಾದರೂ ಬೆಳವಣಿಗೆ ಆಗಿದೆಯಾ ಎಂತ ನೋಡಿದ್ರೆ ಏನೂ ಅಗಿಲ್ಲ!
ಆರ್ಟಿಐ ಅರ್ಜಿಯಲ್ಲಿ ಕೇಳಿದ್ದ ಮಾಹಿತಿ:
ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಸರ್ಕಾರದಿಂದ ಏನಾದರೂ ಕ್ರಮ ಜರುಗಿಸಲಾಗುತ್ತಿದೆಯಾ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಲತಿ ಬಿ. ಎಂಬುವರು ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡಾಫೆ ಉತ್ತರ ನೀಡಿದೆ. ಸಾರಿಗೆ ಸಂಸ್ಥೆಗಳ ನಿಯಮಾವಳಿಯಂತೆ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಸರ್ಕಾರದ ನಡುವೆ ನಡೆದಿರುವ ಪತ್ರ ವ್ಯವಹಾರದ ಪ್ರತಿಗಳನ್ನು ಕೊಡಿ ಎಂದು ಕೇಳಿದ್ರೆ, ಕೆಎಸ್ಆರ್ ಟಿಸಿ ಕೊಟ್ಟಿರುವ ಉತ್ತರ ಹೀಗಿದೆ.
ಆರ್ಟಿಐ ಅರ್ಜಿಯಿಂದ ಸತ್ಯ ಬಯಲಿಗೆ:
ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆ, ನಿಗಮಗಳ ಆರ್ಥಿಕ ಪರಿಸ್ಥಿತಿ, ನೌಕರರ ಮುಷ್ಕರ, 2021 ರಲ್ಲಿ ಕೆಲಸ ಬಹಿಷ್ಕರಿಸಿ ನಡೆಸಿದ ಮುಷ್ಕರ, ಈ ಎಲ್ಲಾ ಕಾರಣಗಳಿಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಿರುವುದಿಲ್ಲ. ಈ ಸಂಬಂಧ ಸರ್ಕಾರದೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ ಎಂದು ಉತ್ತರ ನೀಡಿದೆ. ಈ ಮೂಲಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಪ್ರಸ್ತಾಪವೇ ಸರ್ಕಾರದ ಮುಂದಿಟ್ಟಿಲ್ಲ ಎಂಬ ಅಸಲಿ ಸತ್ಯ ಹೊರ ಬಿದ್ದಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ , ಭತ್ಯೆ ಹೆಚ್ಚಳ ಮಾಡುವ ಪ್ರಸ್ತಾಪವನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೈ ಬಿಟ್ಟಿದ್ದರು. ಬಿ. ಎಸ್. ಯಡಿಯೂರಪ್ಪ ಒಂದು ಗುಟುರು ಹಾಕುತ್ತಿದ್ದಂತೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಆಯೋಗ ರಚನೆ ಮಾಡುವುದಾಗಿ ಸಿಎಂ ವಿಧಾನ ಸಭೆ ಅಧಿವೇಶನದಲ್ಲಿ ಬುಧವಾರವಷ್ಟೇ ಸಿಹಿಸುದ್ದಿ ಪ್ರಕಟಿಸಿದ್ದಾರೆ. ಆದರೆ, ಸಾರಿಗೆ ನಿಗಮಗಳ ನೌಕರರ ಸ್ಥಿತಿ ಕೇಳುವರೇ ಇಲ್ಲದಂತಾಗಿದೆ.
ರಾಜ್ಯದಲ್ಲಿ ನಾಲ್ಕು ಸಾರಿಗೆ ನಿಗಮಗಳು ಉತ್ತಮವಾಗಿಯೇ ಕೆಲಸ ನಿರ್ವಹಿಸುತ್ತಿವೆ. ಕೋವಿಡ್ ನೆಪ ಕೊಟ್ಟು ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಸಾವಿರಾರು ಕೋಟಿ ಸುರಿದು ಹೊಸ ಬಸ್ ಖರೀದಿ ಮಾಡೋಕೆ ಹಣವಿದೆ. ಸಾರಿಗೆ ನೌಕರರು ಪಡೆಯುತ್ತಿರುವ ವೇತನದಿಂದ ಕನಿಷ್ಠ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ಸಾರಿಗೆ ನೌಕರರು ಬಾಡಿಗೆ ಸರಿಯಾಗಿ ಕಟ್ಟಲ್ಲ ಎಂದು ಬಾಡಿಗೆಗೆ ಮನೆ ನಿರಾಕರಣೆ ಮಾಡುವ ಪರಿಸ್ಥಿತಿ ಎದುರಾಗಿದೆ. ಇವತ್ತಿನ ದಿನಗಳಲ್ಲಿ ಕನಿಷ್ಠ ಜೀವನ ನಡೆಸಲು ಅಗತ್ಯವಾದಷ್ಟು ವೇತನ ನಿಗಮಗಳು ನೀಡಬೇಕು. ಮುಷ್ಕರ ಹಾಗೂ ಆರ್ಥಿಕ ಪರಿಸ್ಥಿತಿ ನೆಪ ಇಟ್ಟು ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡದೇ ಸಿಬ್ಬಂದಿಯನ್ನು ಕತ್ತಲೆಗೆ ತಳ್ಳಿದೆ.
ರಾಜ್ಯದಲ್ಲಿ 28 ವರ್ಷ ಸೇವೆ ಮಾಡಿದ ಒಬ್ಬ ಲೈನ್ಮನ್ 80 ಸಾವಿರದಷ್ಟು ವೇತನ ಪಡೆಯುತ್ತಾನೆ. ಹಗಲಿರುಳು ಶ್ರಮಿಸುವ ಸಾರಿಗೆ ನೌಕರರಿಗೆ ಕನಿಷ್ಠ ಆ ಸಮಾನ ವೇತನ ಬೇಡ. ಇರುವ ನಿಯಮಾವಳಿಯಂತೆ ನ್ಯಾಯ ಸಮ್ಮತ ವೇತನ ಪರಿಷ್ಕರಣೆ ಮಾಡದಿದ್ದರೆ ನೌಕರರು ಏನಾಗಬೇಕು. ಈ ಹಿಂದೆ ಬಂಗಾರಪ್ಪ ಸಿಎಂ ಆಗಿದ್ದಾಗ ನೌಕರರ ವೇತನ ಪರಿಷ್ಕರಣೆ ಮಾಡಿದ್ದರು. ಜಗದೀಶ್ ಶೆಟ್ಟರ್, ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ವೇತನ ಪರಿಷ್ಕರಣೆ ಮಾಡಲಾಗಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶೇ. 12 ರಷ್ಟು ವೇತನ ಪರಿಷ್ಕರಣೆ ಮಾಡಿದ್ದರು. ನಿಯಮಾವಳಿ ಪ್ರಕಾರ 2020 ಕ್ಕೆ ವೇತನ ಪರಿಷ್ಕರಣೆ ಮಾಡಬೇಕಿತ್ತು. ಅದರೆ, ಮುಷ್ಕರದ ನೆಪ ಇಟ್ಟು ಸಾರಿಗೆ ನೌಕರರ ಕನಿಷ್ಠ ಜೀವನದ ಹಕ್ಕನ್ನು ನಿಗಮಗಳು ಕಸಿದುಕೊಳ್ಳುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ಚುನಾವಣೆಗಳಲ್ಲಿ ಸಾರಿಗೆ ನೌಕರರು ಪಕ್ಷಗಳಿಗೆ ಓಟು ಹಾಕುವ ಬದಲು ನೋಟಾ ಒತ್ತಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video