ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ರೇಷನ್ ಇಲ್ಲ ಎಂದು ಆತಂಕ ಸೃಷ್ಟಿಸಿದ ಅಧಿಕಾರಿ!
ಬೆಂಗಳೂರು, ಸೆ. 02: ಕೊರೊನಾ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದ ಸರ್ಕಾರ ಇದೀಗ ಜನರಲ್ಲಿ ಆತಂಕವನ್ನುಂಟುಮಾಡುತ್ತಿದೆ. ಅಧಿಕಾರಿಯೊಬ್ಬ ಈಗ ಪ್ರತಿ ಬಡವನಿಗೆ ಉಚಿತ ಲಸಿಕೆ ನೀಡಲು ಆದ್ಯತೆ ನೀಡುವ ಬದಲು 'ನೋ ವ್ಯಾಕ್ಸಿನೇಷನ್ ನೋ ರೇಷನ್' ಎಂದು ಹೇಳಿ, ಅವರಲ್ಲಿ ಆತಂಕ ಮೂಡಿಸಿದ್ದಾನೆ. ತಕ್ಷಣ ಆ ಅಧಿಕಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇವೆಯಿಂದ ಅಮಾನತು ಮಾಡಬೇಕು. ಆತನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್, "ಬಿಜೆಪಿ ಸರ್ಕಾರ ರಾಜ್ಯದಲ್ಲಿ ವಿಭಿನ್ನ ಆಡಳಿತ ನಡೆಸುತ್ತಿದೆ. ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಇಲ್ಲದೆ ಸತ್ತಾಗ, ಸಂಸತ್ತಿನಲ್ಲಿ ಯಾರೂ ಸತ್ತಿಲ್ಲ ಎಂದು ಮಾಹಿತಿ ನೀಡುತ್ತದೆ. ಹೈಕೋರ್ಟ್ ಸಮಿತಿ 36 ಮಂದಿ ಸತ್ತಿದ್ದಾರೆ ಎಂದು ವರದಿ ಕೊಟ್ಟಿತು. ಅದನ್ನು ಸರಕಾರ ಒಪ್ಪಿಕೊಂಡಿತು. ನಂತರ ಸತ್ತವರಿಗೆ 2 ಲಕ್ಷ ರು. ಪರಿಹಾರವನ್ನೂ ಘೋಷಿಸಿತು. ಆದರೆ ಸಂಸತ್ತಿಗೆ ಮಾತ್ರ ಯಾರೂ ಸತ್ತಿಲ್ಲ ಅಂತ ಮಾಹಿತಿ ರವಾನಿಸಿತು." ಎಂದು ಆರೋಪಿಸಿದ್ದಾರೆ.
ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮವಿಲ್ಲ!
"ನಾನು ಸತ್ತವರ ಕುಟುಂಬಕ್ಕೆ ಹೋಗಿ ತಲಾ 1 ಲಕ್ಷ ಪರಿಹಾರ ಕೊಟ್ಟಿದ್ದೇನೆ. ಈ ದುರಂತಕ್ಕೆ ಕಾರಣರಾದ ಯಾವ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಅವರನ್ನು ರಾಜಕೀಯ ನಾಯಕರಂತೆ ಬಿಂಬಿಸಿ ಪ್ರಚಾರ ನೀಡಲಾಗುತ್ತಿದೆ. ದೇಶಕ್ಕೆ ಲಸಿಕೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕರ್ತವ್ಯ. ಆದರೆ ಅದರಲ್ಲೂ ವ್ಯವಹಾರಕ್ಕೆ ಮುಂದಾದರು. ನಮ್ಮ ಜನರಿಗೆ ಲಸಿಕೆ ನೀಡುವ ಬದಲು ವಿದೇಶಕ್ಕೆ ರವಾನಿಸಿದರು. ನಾವು 100 ಕೋಟಿ ರು. ಕಾರ್ಯಕ್ರಮ ರೂಪಿಸಿದರೂ ಅನುಮತಿ ನೀಡಲಿಲ್ಲ. ಈ ಸರ್ಕಾರ ಸಂಬಂಧಪಟ್ಟ ಮಂತ್ರಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಇದು ಬಿಜೆಪಿಯ ಆಡಳಿತ ವೈಖರಿ. ಇನ್ನು ಮೈಸೂರು ವಿವಿ ಕುಲಪತಿಗಳ ಆದೇಶ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರನ್ನು ರಾಜ್ಯಪಾಲರು ಹಿಂದಕ್ಕೆ ಕರೆಸಿಕೊಳ್ಳಬೇಕು" ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ನಮ್ಮ ಆಸ್ತಿ ನಮ್ಮಲ್ಲೇ ಉಳಿದುಕೊಳ್ಳಬೇಕು!
"ದೇಶದ ಆಸ್ತಿ ಮಾರಲು ಕೇಂದ್ರ ಸರ್ಕಾರ ಹೊರಟಿದ್ದು, ಕಾಂಗ್ರೆಸ್ ಇದನ್ನು ಖಂಡಿಸುತ್ತದೆ. ನಮ್ಮ ಆಸ್ತಿ ನಮ್ಮಲ್ಲೇ ಉಳಿದುಕೊಳ್ಳಬೇಕು. 2700 ಕಿ.ಮೀ ಹೆದ್ದಾರಿ, 8000 ಕಿ.ಮೀ ಗ್ಯಾಸ್ ಪೈಪ್ ಲೈನ್, ಟೆಲಿಕಾಂ ಫೈಬರ್ ಸಂಪರ್ಕ, 25 ವಿಮಾನ ನಿಲ್ದಾಣ, 9 ಬಂದರು, 61 ಗಣಿ, ಇವೆಲ್ಲವನ್ನು ಕಾಂಗ್ರೆಸ್ ಅಲ್ಲದೇ ಬಿಜೆಪಿಯವರು ಮಾಡಿದ್ದರಾ? ಕಾಂಗ್ರೆಸ್ 60 ವರ್ಷ ಏನು ಮಾಡಿತು ಎಂದು ಕೇಳುತ್ತಾರೆ. ಹಾಗಾದರೆ ದೆಲ್ಲವನ್ನು ಮಾಡಿದವರು ಯಾರು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಶಕ್ತಿ ದೇಶದ ಆಸ್ತಿ
ಬಿಜೆಪಿ ಅವರು, ಔಷಧಿ, ಬೆಡ್, ಲಸಿಕೆ ನೀಡಲಿಲ್ಲ. ಜನರ ಜೀವ ಉಳಿಸಲಿಲ್ಲ. ಆದರೆ ಜನ ಸತ್ತಾಗ ಅಂತ್ಯ ಸಂಸ್ಕಾರ ಉಚಿತ ಅಂತ ಮಾಡಿದ್ದಾರೆ. ಬಿಜೆಪಿ ಮಾರಲು ಹೊರಟಿರುವ ದೇಶದ ಆಸ್ತಿ ಮಾಡಿರೋದು ಕಾಂಗ್ರೆಸ್, ಅವರಿಗೆ ಮಾತನಾಡುವ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್. ಆರೋಗ್ಯ, ಶಿಕ್ಷಣ ಕೊಟ್ಟದ್ದು, ಆಣೆಕಟ್ಟು, ವಿವಿ ಕಟ್ಟಿಸಿದ್ದು ಕಾಂಗ್ರೆಸ್. ಇದು ಕಾಂಗ್ರೆಸ್ ಶಕ್ತಿ. ಕಾಂಗ್ರೆಸ್ ಶಕ್ತಿ ದೇಶದ ಆಸ್ತಿ. ಅಡುಗೆ ಅನಿಲ, ಆಟೋ ಗ್ಯಾಸ್, ಪೆಟ್ರೋಲ್, ಡೀಸೆಲ್ ಎಲ್ಲದರ ಬೆಲೆ ಏರುತ್ತಿದೆ. ಇದೇ 5, 6 ರಂದು ನಮ್ಮ ನಾಯಕರ ಸಭೆ ಕರೆದಿದ್ದು, ನಮ್ಮ ಹೋರಾಟದ ಬಗ್ಗೆ ಚರ್ಚಿಸುತ್ತೇವೆ ಎಂದು ಮುಂದಿನ ಹೋರಾಟದ ಬಗ್ಗೆ ಡಿಕೆಶಿ ಮಾಹಿತಿ ನೀಡಿದ್ದಾರೆ.
ಸ್ಥಳೀಯ ನಾಯಕತ್ವ ಕೊಲ್ಲಲು ಬಿಜೆಪಿ ಪ್ರಯತ್ನ
ರಾಜ್ಯದ ಜನ ಸಹಕಾರ ನೀಡಬೇಕು. ಜಾತಿ, ಧರ್ಮ ವಿಚಾರವಾಗಿ ರಾಷ್ಟ್ರ ಮಟ್ಟದ ನಾಯಕರು ಚರ್ಚೆ ಮಾಡುತ್ತಿದ್ದು, ಅವರು ತೀರ್ಮಾನ ಮಾಡಲಿದ್ದಾರೆ. ಹೀಗಾಗಿ ಆ ಬಗ್ಗೆ ನಾನು ಪ್ರತಿಕ್ರಯಿಸುವುದಿಲ್ಲ. ಮಹಾನಗರ ಪಾಲಿಕೆ ಚುನಾವಣೆಗಳು ನಡೆಯುತ್ತಿರುವಲ್ಲಿ ಸ್ಥಳೀಯ ನಾಯಕತ್ವ ಕೊಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದಕ್ಕೆಲ್ಲ ಅವರ ಪಕ್ಷದವರೇ ಸಿಡಿದಿದ್ದಾರೆ, ಉತ್ತರಿಸಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರ್ಗಿ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಶೇ. 50 ರಷ್ಟು ಮನ್ನಾ ಮಾಡುತ್ತೇವೆ. ರಸ್ತೆಯ ಗುಂಡಿ ಮುಚ್ಚುತ್ತೇವೆ. ಧೂಳು ಮುಕ್ತ ಮಾಡುತ್ತೇವೆ. ಕೋವಿಡ್ ಸಂತ್ರಸ್ತರಿಗೆ ಪರಿಹಾರ ಕೊಡಿಸುತ್ತೇವೆ. ಹೀಗಾಗಿ ಜನ ಕಾಂಗ್ರೆಸ್ಸಿಗೆ ಮತ ಹಾಕಬೇಕೆಂದು ಮನವಿ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Recommended Video