ಕರ್ಫ್ಯೂ ಕ್ಯಾನ್ಸಲ್: ಭಾನುವಾರ ಸಂಚಾರ ನಡೆಸಲಿವೆ 3500 KSRTC ಬಸ್ ಗಳು
ಬೆಂಗಳೂರು, ಮೇ 30: ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಸಂಡೇ ಕರ್ಫ್ಯೂವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಹೀಗಾಗಿ, ಮೇ 31 ಭಾನುವಾರ ಕರ್ನಾಟಕದಲ್ಲಿ ಕರ್ಫ್ಯೂ ಇರುವುದಿಲ್ಲ. ದೈನಂದಿನ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ರಾಜ್ಯ ಸರ್ಕಾರ ಕರ್ಫ್ಯೂ ಕೈಬಿಟ್ಟ ಕಾರಣ, ಭಾನುವಾರ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಕೂಡ ಸಂಚಾರ ನಡೆಸಲಿವೆ.
ಮೇ 31, ಭಾನುವಾರ ಕರ್ಫ್ಯೂ ಇರುವುದಿಲ್ಲ: ಸರ್ಕಾರದಿಂದ ಮಹತ್ವದ ನಿರ್ಧಾರ!
ಭಾನುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಎಂದಿನಂತೆ ಮುಂದುವರೆಯಲಿದೆ. ಮೇ 31 ರಂದು ಒಟ್ಟು 3500 ಕೆ.ಎಸ್.ಆರ್.ಟಿ.ಸಿ ಬಸ್ ಗಳು ಓಡಾಡಲಿವೆ.
ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಅಥವಾ ಇತರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವವರು ಟಿಕೆಟ್ ಬುಕ್ ಮಾಡಬಹುದಾಗಿದೆ.
ಮೇ 19 ರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಪುನರಾರಂಭಗೊಂಡಿದ್ದು, ಇಲ್ಲಿಯವರೆಗೂ ಒಟ್ಟು 8,71,625 ಜನರು ಪ್ರಯಾಣ ಕೈಗೊಂಡಿದ್ದಾರೆ. ಬೆಂಗಳೂರಿನಿಂದ ಇತರೆ ಜಿಲ್ಲೆಗಳಿಗೆ ಒಟ್ಟು 1,20,202 ಜನರು ಪ್ರಯಾಣಿಸಿದ್ದಾರೆ.