ಪಾಂಡವಪುರದಲ್ಲಿ ಪಾಳುಬಿದ್ದ ವಸತಿ ಗೃಹ, ತಹಸೀಲ್ದಾರಿಗೆ ನೆಲೆಯೇ ಇಲ್ಲ
ಮಂಡ್ಯ,ಮಾರ್ಚ್,30: ಇಲ್ಲೊಂದು ವಸತಿ ಗೃಹ ಪಾಳು ಬಿದ್ದಿದೆ. ಅನೈತಿಕ ಚಟುವಟಿಕೆಗಳು ಯಾರ ಭಯವಿಲ್ಲದೆ ನಡೆಯುತ್ತಿವೆ. ಮಂಡ್ಯದ ಪಾಂಡವಪುರದಲ್ಲಿರುವ ತಹಸೀಲ್ದಾರ್ ಅವರ ವಸತಿ ಗೃಹವು ಹಲವಾರು ವರ್ಷಗಳಿಂದ ಹಾಳುಕೊಂಪೆಯಾಗಿದ್ದು ಅವಸಾನದತ್ತ ಸಾಗಿದೆ.
ಹೃದಯಭಾಗದಲ್ಲಿರುವ ತಹಸೀಲ್ದಾರ್ ಅವರ ಈ ವಸತಿಗೃಹವು ಕಸದ ತಿಪ್ಪೆಗಳ ರಾಶಿಗಳಿಂದ ತುಂಬಿಹೋಗಿದ್ದು, ಸುತ್ತಮುತ್ತಲೂ ಗಿಡ-ಗಂಟಿಗಳು ಹಾಗೂ ಬೇಲಿ ಬೆಳೆದಿದೆ. ಇದರಿಂದ ಇಲ್ಲಿನ ತಹಸೀಲ್ದಾರ್ ಬಿ.ಶಂಕರಯ್ಯ ಅವರಿಗೆ ನೆಲೆ ಇದ್ದಂತಾಗಿದೆ.[ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ]
ವಸತಿ ಗೃಹದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಭೂತ ಬಂಗಲೆಯಂತೆ ಗೋಚರಿಸುತ್ತಿದೆ. ಇಲ್ಲಿ ಸರಿಸೃಪಗಳು ವಾಸಿಸುತ್ತಿವೆ. ಹೀಗಾಗಿ ತಹಸೀಲ್ದಾರ್ ಅವರ ಈ ವಸತಿಗೃಹದತ್ತ ಯಾರೂ ಕೂಡ ಸುಳಿದಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.[ನಗರ ಸ್ವಚ್ಛವಾಗಿಡಿ.. ಇಲ್ಲದಿದ್ದರೆ ಇವನಿಗಾದಂತೆ ಆದೀತು!]
ಇದೀಗ ತಹಸೀಲ್ದಾರ್ ಬಿ.ಶಂಕರಯ್ಯ ಅವರು ಪಟ್ಟಣದ ಕೃಷ್ಣಾನಗರದಲ್ಲಿರುವ ಪ್ರವಾಸಿ ಮಂದಿರವನ್ನೇ ತಮ್ಮ ಸ್ವಂತ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಪಾಳುಬಿದ್ದಿರುವ ತಹಸೀಲ್ದಾರ್ ಹಾಗೂ ನೀರಾವರಿ ಇಲಾಖೆ ಎಇಇ ಅವರ ಈ ವಸತಿಗೃಹಗಳ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳುವತ್ತ ಗಮನ ಹರಿಸಬೇಕಾಗಿದೆ. ಈಗಾಗಲೇ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ವಸತಿ ಗೃಹ ದುರಸ್ತಿಗೆ ಮನವಿ ಸಲ್ಲಿಸಲಾಗಿದೆ.