ಶಾಲಾ ಮಕ್ಕಳು ತಿಂಗಳಲ್ಲಿ 2 ದಿನ ಸ್ಕೂಲ್ ಬ್ಯಾಗ್ ಹೊರಬೇಕಾಗಿಲ್ಲ
ಬೆಂಗಳೂರು, ಆಗಸ್ಟ್ 9: ಮಕ್ಕಳು ಹೆಣ ಭಾರದ ಸ್ಕೂಲ್ ಬ್ಯಾಗುಗಳನ್ನು ಹೊತ್ತು ಗೂನು ಬೆನ್ನು ಮಾಡಿಕೊಂಡು, ಸಪ್ಪೆ ಮೋರೆಯಲ್ಲಿ ಶಾಲೆಗೆ ತೆರಳುವುದನ್ನು ನಾವು ನೋಡುತ್ತಿರುತ್ತೇವೆ. ಆದರೆ ಇದು ಅನಿವಾರ್ಯವೂ ಕೂಡ.
ಆದರೆ ಇನ್ನುಮುಂದೆ ಶಾಲಾ ಮಕ್ಕಳು ತಿಂಗಳಲ್ಲಿ ಎರಡು ದಿನ ಶಾಲಾ ಬ್ಯಾಗ್ನ್ನು ಹೊರಬೇಕಾಗಿಲ್ಲ. ಯಾಕೆ ಅಂತೀರಾ ಈ ಸುದ್ದಿ ಓದಿ.. ಇಷ್ಟು ದಿನ ಈ ಭಾರದ ಬ್ಯಾಗ್ ಹೊತ್ತು ಶಾಲೆಗೆ ಹೊತ್ತು ಹೋಗುವ ಮಕ್ಕಳ ವಿದ್ಯಾಭ್ಯಾಸದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತಿತ್ತು. ಈ ಭಾರವನ್ನು ಹೇಗಾದರೂ ಕಡಿಮೆ ಮಾಡಿ ಎಂದು ಪೋಷಕರು ಒತ್ತಾಯಿಸುತ್ತಲೇ ಬಂದಿದ್ದರು.
ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ 'ಶಾಲಾ ಡೈರಿ' ಕಡ್ಡಾಯ!
ಈ ಕುರಿತು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ಮಾಡಿದೆ. ಕಳೆದ ವರ್ಷ ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಸಾಕಷ್ಟು ಪುಸ್ತಕಗಳನ್ನು ಎರಡು ಭಾಗಗಳಲ್ಲಿ ಮುದ್ರಿಸಲಾಗುವುದು.
ಮೊದಲ ಭಾಗದ ಪುಸ್ತಕವನ್ನು ಜೂನ್ನಿಂದ ಸೆಪ್ಟೆಂಬರ್ ವರೆಗೆ ಹಾಗೂ ಎರಡನೇ ಭಾಗದ ಪುಸ್ತಕವನ್ನು ನವೆಂಬರ್ನಿಂದ ಮಾರ್ಚ್ ವರೆಗೆ ಶಾಲೆಗೆ ಕೊಂಡೊಯ್ಯುವಂತೆ ಮಾಡಲಾಗುವುದು ಎಂದು ಭರವಸೆಯೇನೋ ನೀಡಿದ್ದರು. ಆದರೆ ಇದುವರೆಗೂ ಅನುಷ್ಠಾನವೇ ಆಗಿಲ್ಲ. ಆದರೆ ಈ ಶೈಕ್ಷಣಿಕ ವರ್ಷದಿಂದ ತಿಂಗಳಲ್ಲಿ ಎರಡು ದಿನ ಭಾರದ ಬ್ಯಾಗ್ಗೆ ಬ್ರೇಕ್ ಬೀಳಲಿದೆ.
ಬ್ಯಾಗ್ ಭಾರ ತಗ್ಗಿಸಲು ಕೇಂದ್ರದ ಚಿಂತನೆ
ಬ್ಯಾಗ್ ಭಾರ ತಗ್ಗಿಸಲು ಕುರಿತು ಕೇಂದ್ರ ಸರ್ಕಾರ ಮೌಖಿಕ ಸೂಚನೆ ನೀಡಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಇತ್ತೀಚೆಗೆ ಹೇಳಿಕೆ ನೀಡಿದ್ದ ಸಚಿವ ಪ್ರಕಾಶ್ ಜಾವಡೇಕರ್, 2019ರ ಶೈಕ್ಷಣಿಕ ವರ್ಷದಿಂದ ಎನ್ಸಿಆರ್ಟಿ ಪುಸ್ತಕ ಗಾತ್ರವನ್ನು ಅರ್ಧದಷ್ಟು ಕಡಿಮೆ ಮಾಡಲಾಗುವುದು. ಈಗಾಗಲೇ ಈ ಸಂಬಂಧ ಎನ್ಸಿಆರ್ಟಿಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು.
ಬ್ಯಾಗ್ ರಹಿತ ದಿನ
ಈ ಶೈಕ್ಷಣಿಕ ವರ್ಷಾರಂಭದಲ್ಲಿ ಬ್ಯಾಗ್ ರಹಿತ ದಿನದ ಸಂಬಂಧ ಹೊಸ ಆಲೋಚನೆ ಹೊಳೆದಿದೆ, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿತ್ತು. ನಂತರ ಈ ಕುರಿತ ಮಾದರಿ ರೂಪಿಸುವಂತೆ ಶೈಕ್ಷಣಿಕ ಅಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು.
ಮೈಸೂರು ಮಾದರಿ ಎಂದರೇನು?
ಬ್ಯಾಗ್ ರಹಿತ ದಿನಕ್ಕೆ ತಿಂಗಳಲ್ಲಿ 2 ಶನಿವಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಶಿಕ್ಷಣ ಇಲಾಖೆಯ ಸೂಚನೆಯಾಗಿದೆ. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಮೈಸೂರು ಜಿಲ್ಲೆ 2018-19ರ ಶೈಕ್ಷಣಿಕ ವರ್ಷದಲ್ಲಿ ತಿಂಗಳ ವಾರು ಬ್ಯಾಗ್ ರಹಿತ ದಿನದ ಕ್ಯಾಲೆಂಡರ್ ಸಿದ್ಧಪಡಿಸಿದೆ.
ಮಕ್ಕಳಿಗೆ ಶಾಲೆಯ ಬಗ್ಗೆ ಸೆಳೆತ ಉಂಟಾಗಬೇಕು
ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸೇರಿದಂತೆ ಬ್ಯಾಗ್ ರಹಿತವಾತ ವಾರಾಂತ್ಯ ದಿನಗಳಲ್ಲಿ ಮಕ್ಕಳು ಯಾವೆಲ್ಲಾ ಚಟುವಟಿಕೆಯಲ್ಲಿ ಭಾಗಿಯಾಗಬಹುದು ಎಂಬುದನ್ನು ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಬ್ಯಾಗ್ ರಹಿತ ದಿನವನ್ನು ಸಂಭ್ರಮದಿಂದ ಪರಿವರ್ತಿಸಬೇಕು. ಇದರಿಂದ ಮಕ್ಕಳಲ್ಲಿ ಶಾಲೆಯ ಬಗ್ಗೆ ಸೆಳೆತ ಉಂಟಾಗಬೇಕು ಎನ್ನುವುದು ಶಿಕ್ಷಣ ಇಲಾಖೆಯ ಆಶಯವಾಗಿದೆ.